ಎತ್ತಿನಹೊಳೆ ಯೋಜನೆಗೆ ಕರಾವಳಿ ಜನರ ವಿರೋಧವೇಕೆ?
ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಗಳನ್ನು ಒಳಗೊಂಡಂತೆ ರಾಜ್ಯದ 7 ಜಿಲ್ಲೆಗಳ 28 ತಾಲ್ಲೂಕುಗಳ 68.5 ಲಕ್ಷ ಜನರಿಗೆ ಕುಡಿಯುವ ನೀರು ಪೂರೈಸುವ ಉದ್ದೇಶದಿಂದ ಸರ್ಕಾರ ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆಯನ್ನು ಕರ್ನಾಟಕ ನೀರಾವರಿ ನಿಗಮದ ಮೂಲಕ ಅನುಷ್ಟಾನಗೊಳಿಸುತ್ತಿದೆ.
ದಕ್ಷಿಣ ಕನ್ನಡ ಜನರು ಎತ್ತಿನಹೊಳೆ ಕುಡಿಯುವ ನೀರಿನ ಯೋಜನೆ ವಿರೋಧಿಸಿ ಸಾಲು-ಸಾಲು ಪ್ರತಿಭಟನೆಗಳನ್ನು ನಡೆಸುತ್ತಿದ್ದಾರೆ. 'ನೇತ್ರಾವತಿ ಉಳಿಸಿ ಎತ್ತಿನ ಹೊಳೆ ಯೋಜನೆ ನಿಲ್ಲಿಸಿ' ಎಂದು ಸರ್ಕಾರವನ್ನು ಆಗ್ರಹಿಸುತ್ತಿದ್ದಾರೆ. ಎತ್ತಿನ ಹೊಳೆ ಯೋಜನೆಗೆ ವಿರೋಧವೇಕೆ? ಎಂಬ ಕುರಿತು ನೇತ್ರಾವತಿ ಉಳಿಸಿ ಹೋರಾಟ ಸಮಿತಿ ಸಂಚಾಲಕ ದಿನೇಶ್ ಹೊಳ್ಳ ಒನ್ ಇಂಡಿಯಾ ಜೊತೆ ಅಭಿಪ್ರಾಯ ಹಂಚಿಕೊಂಡಿದ್ದಾರೆ. ಅದರ ವಿವರ ಇಲ್ಲಿದೆ.......
ನದಿಯೆಂದರೆ ಅದು ಆಯಾನಾಡಿನ ಜೀವನಾಡಿ. ಹೊಳೆಯಿಲ್ಲದಿದ್ದರೆ ಆ ಊರಿಗೊಂದು ಕಳೆ ಇಲ್ಲ. ಹೊಳೆಗಳು ಮನುಕುಲದ ಧಾರ್ಮಿಕ, ಸಾಂಸ್ಕೃತಿಕ ಪ್ರತೀಕಗಳಾಗಿರುವ ಕಾರಣ ಹೊಳೆಗಳು ಪೂಜನೀಯ. ಆದರೆ ಇಂದು ಪೂಜ್ಯ ಭಾವನೆಗಳಿಂದ ನೋಡಬೇಕಾದ ನದಿಗಳಿಗೆ ತಾಜ್ಯಗಳನ್ನು ವಿಸರ್ಜಿಸುತ್ತಿದ್ದೇವೆ. ಅಷ್ಟು ಮಾತ್ರವಲ್ಲ ನದಿಗಳಲ್ಲಿ ವ್ಯಾಜ್ಯಗಳನ್ನು ಹುಟ್ಟಿಸುತ್ತೇವೆ. [ಎತ್ತಿನಹೊಳೆ ಯೋಜನೆ ನೀರಿನ ಲಭ್ಯತೆ ಬಗ್ಗೆ ಆತಂಕ ಬೇಡ]
ನಾಗರೀಕತೆ ಬೆಳೆದಂತೆಲ್ಲಾ ನೀರಿಗಾಗಿ ಘರ್ಷಣೆ ಆರಂಭವಾಗುತ್ತಿದೆ. ಜಾಗತಿಕ ಆರೋಗ್ಯ ಸಂಸ್ಥೆಯ ಪ್ರಕಾರ ಆಧುನಿಕ ಜಗತ್ತಿನ ಯಾವುದೇ ಬೃಹತ್ ನಗರದಲ್ಲಿ ಪ್ರತಿ ದಿನ 105,000 ಮಿಲಿಯನ್ ಲೀಟರ್ ನೀರು ವ್ಯಯವಾಗುತ್ತಿದೆ. ಐಷಾರಾಮಿ ಆಧುನಿಕ ಸಾಮ್ರಾಜ್ಯದಲ್ಲಿ ಇಂದು ಭೂಮಿಯಲ್ಲಿ ಇಂಗುವ ನೀರಿನ ಮೂರು ಪಟ್ಟು ಹೆಚ್ಚು ನೀರನ್ನು ಬಳಸುವುದರಿಂದ ಅಂತರ್ಜಲ ಮಟ್ಟ ಕುಸಿಯುತ್ತಿದೆ.
ನಮ್ಮ ರಾಜ್ಯದ ಎಲ್ಲ ನದಿಗಳು ಅಣೆಕಟ್ಟು, ನೀರಾವರಿ ಯೋಜನೆ, ವಿದ್ಯುತ್ ಯೋಜನೆಗಳಿಂದಾಗಿ ತಮ್ಮ ನೆಮ್ಮದಿಯನ್ನು ಕಳೆದುಕೊಂಡಿವೆ. ಹೇಮಾವತಿ, ಶರಾವತಿ, ಕಾವೇರಿ, ತುಂಗಭದ್ರಾ, ವಾರಾಹಿ, ಚಕ್ರಾ, ಕಾಳಿ ಮುಂತಾದ ನದಿಗಳು ಇಂದು ಅಭಿವೃದ್ಧಿ ಎಂಬ ಹಸಿವಿಗೆ ಬಲಿಯಾಗಿ ತಮ್ಮ ಒಡಲನ್ನು ಬಡಕಲಾಗಿಸಿಕೊಂಡಿವೆ. [ಎತ್ತಿನಹೊಳೆ ಯೋಜನೆ : ಸರ್ಕಾರದ ಸ್ಪಷ್ಟನೆಗಳು]
ನದಿ ತಿರುವು ವಿರುದ್ಧ ಹೋರಾಟ : ಕೋಲಾರ, ತುಮಕೂರು, ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಯಲ್ಲಿ ಯಾವಾಗ ನೀರಿನ ಸಮಸ್ಯೆ ಆರಂಭವಾಯಿತೋ ಆಗ ಕರಾವಳಿಯ ಜೀವನದಿ ನೇತ್ರಾವತಿ ಮೇಲೆ ಸರ್ಕಾರದ ಕಣ್ಣು ಬಿದ್ದಿದೆ. ಕಳೆದ 10 ವರ್ಷಗಳಿಂದ 'ನೇತ್ರಾವತಿ ನದಿ ತಿರುವು' ಎಂಬ ಅರ್ಥವಿಲ್ಲದ ಅಸಂಬದ್ಧ ಯೋಜನೆ ಸರ್ಕಾರದ ಮುಂದಿದೆ.
ಈ ನದಿ ತಿರುವು ಯೋಜನೆ ಎಷ್ಟು ಯಶಸ್ವಿಯಾಗಬಹುದು?, ಎಷ್ಟು ದುಷ್ಪರಿಣಾಮವನ್ನು ಬೀರಬಹುದು? ಎಂಬ ಯಾವ ಅಂಶಗಳನ್ನು ಆಲೋಚಿಸದೆ ನಮ್ಮ ಸರ್ಕಾರ ಯೋಜನೆಯನ್ನು ಜಾರಿಗೆ ತರಲು ಮುಂದಾಗಿದೆ. ವಿಧಾನಸೌಧದ ಹವಾನಿಯಂತ್ರಿತ ಕೊಠಡಿಯಲ್ಲಿ ಕುಳಿತು 'ನದಿ ತಿರುಗಿಸುತ್ತೇವೆ' ಎಂದು ಹೇಳುವುದು ಸುಲಭ. ಆದರೆ, ಅರಣ್ಯ ನಾಶದ ಬಗ್ಗೆ ಯಾರೂ ಮಾತನಾಡುತ್ತಿಲ್ಲ. [ಎತ್ತಿನ ಹೊಳೆ ಯೋಜನೆ : ಜನಪ್ರತಿನಿಧಿಗಳಿಗೆ 10 ಪ್ರಶ್ನೆಗಳು]
ನದಿಯನ್ನು ಗುತ್ತಿಗೆ ತೆಗೆದುಕೊಂಡಂತೆ ವರ್ತಿಸುವ ಜಿ.ಎಸ್.ಪರಮಶಿವಯ್ಯನಂತವರು ಸರ್ಕಾರಕ್ಕೆ ನೇತ್ರಾವತಿ ನದಿ ತಿರುವು ಎಂಬ ಯೋಜನೆಯ ವರದಿಯನ್ನು ನೀಡುತ್ತಾರೆ. ನದಿ ತಿರುವಿನ ಯಾವುದೇ ಸಾಧಕ ಬಾಧಕಗಳನ್ನು ಯೋಚಿಸದೆ ನಮ್ಮ ಸರ್ಕಾರಗಳು ಈ ಯೋಜನೆಗೆ ಕೋಟಿ-ಕೋಟಿ ಹಣವನ್ನು ಮಂಜೂರು ಮಾಡುತ್ತವೆ. ಈ ಯೋಜನೆಗೆ ಕರಾವಳಿ ಭಾಗದ ಜನರು ವಿರೋಧ ವ್ಯಕ್ತಪಡಿಸಿದಾಗ 'ಎತ್ತಿನಹೊಳೆ ಯೋಜನೆ' ಎಂದು ಮರು ನಾಮಕರಣ ಮಾಡಿ ಕರಾವಳಿ ಜನರ ದಾರಿ ತಪ್ಪಿಸಲಾಗುತ್ತಿದೆ.