ಧರ್ಮಸ್ಥಳ ಮಂಜುನಾಥ ಸ್ವಾಮಿ ದರ್ಶನ ಸಮಯ ಬದಲಾವಣೆ
ಬೆಳ್ತಂಗಡಿ, ನವೆಂಬರ್ 19 : ದೇಶ ವಿದೇಶಗಳಿಂದ ದಿನನಿತ್ಯ ಲಕ್ಷಾಂತರ ಭಕ್ತರನ್ನು ಸೆಳೆಯುವ ಶ್ರೀ ಕ್ಷೇತ್ರ ಧರ್ಮಸ್ಥಳದಲ್ಲಿ ಶ್ರೀ ಮಂಜುನಾಥ ಸ್ವಾಮಿಯ ದರ್ಶನಕ್ಕೆ ಭಕ್ತರಿಗೆ ನಿಗದಿಯಾಗಿರುವ ಸಮಯವನ್ನು ಪರಿಷ್ಕರಿಸಲಾಗಿದೆ.
ಬೆಳಗ್ಗೆ 6.30ರಿಂದ ಮಧ್ಯಾಹ್ನ 2.30ರ ವರೆಗೆ, ಸಂಜೆ 5ರಿಂದ ರಾತ್ರಿ 8.30ರವರೆಗೆ ಸಮಯ ನಿಗದಿ ಮಾಡಲಾಗಿದೆ. ರವಿವಾರ, ಸೋಮವಾರ, ವಿಶೇಷ ಜನಸಂದಣಿ ಇರುವ ದಿನಗಳಲ್ಲಿ ಬೆಳಗ್ಗೆ 6.30ರಿಂದ ಮಧ್ಯಾಹ್ನ 4 ಗಂಟೆ ವರೆಗೆ, ಸಂಜೆ 5.30ರಿಂದ ರಾತ್ರಿ 9 ಗಂಟೆ ವರೆಗೆ ಭಕ್ತರು ದೇವರ ದರ್ಶನಕ್ಕೆ ದೇವಾಲಯ ಪ್ರವೇಶಿಸಬಹುದಾಗಿದೆ. [ಧರ್ಮಸ್ಥಳ ದೇವಾಲಯ ವಶ ಪಡಿಸಿಕೊಳ್ಳಲು ಹೊರಟಿತ್ತೇ ಸರಕಾರ?]
ಈ ಮೊದಲು ಸಂಜೆ 6.30ರ ಅನಂತರ ಭಕ್ತರಿಗೆ ಪ್ರವೇಶಾವಕಾಶ ಇತ್ತು. ದೇಶ ವಿದೇಶಗಳಿಂದ ಭಕ್ತರು ಅಧಿಕ ಸಂಖ್ಯೆಯಲ್ಲಿ ಆಗಮಿಸುತ್ತಿದ್ದು, ಆಗಮಿಸಿದ ಎಲ್ಲ ಭಕ್ತರಿಗೂ ಅನನುಕೂಲವಾಗದೇ ದೇವರ ದರ್ಶನ ದೊರೆಯಬೇಕೆಂಬ ಹಿನ್ನೆಲೆಯಲ್ಲಿ ಈ ಬದಲಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಭಕ್ತರಿಗಾಗಿ ದರ್ಶನಕ್ಕಾಗಿ ಹೆಚ್ಚುವರಿ ಸಮಯ ನೀಡಿದ್ದೇನೋ ಸರಿ, ಆದರೆ ವಿಶೇಷ ದರುಶನಕ್ಕೆ ಪ್ರತಿ ಭಕ್ತರಿಗೆ 200 ರು.ನಷ್ಟು ಶುಲ್ಕ ವಿಧಿಸುವುದು ಎಷ್ಟು ಸರಿ ಎಂಬ ಮಾತು ಭಕ್ತಾದಿಗಳಿಂದ ಕೇಳಿಬಂದಿದೆ. ವಿಶೇಷ ಟಿಕೆಟ್ ಪಡೆದರೂ ಹೆಚ್ಚೂಕಡಿಮೆ ಸಾಮಾನ್ಯ ಕ್ಯೂನಷ್ಟೇ ಸಮಯ ತೆಗೆದುಕೊಳ್ಳುತ್ತಿರುವುದು ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ. [ನ್ಯಾಷನಲ್ ಜಿಯೋಗ್ರಾಫಿಕ್ ಚಾನೆಲ್ ನಲ್ಲಿ ಧರ್ಮಸ್ಥಳದ ಪಾಕಶಾಲೆ]