ಪುತ್ತೂರು: ಗರ್ಭಿಣಿ ಸಾವು ಪ್ರಕರಣ, ಆಸ್ಪತ್ರೆಗೆ 17 ಲಕ್ಷ ರು ದಂಡ
ಸೂಕ್ತ ಚಿಕಿತ್ಸೆ ಸಿಗದೆ ಗರ್ಭಿಣಿ ಮಹಿಳೆ ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ, ಮೃತ ಕುಟುಂಬಕ್ಕೆ 17 ಲಕ್ಚ ರು ಪರಿಹಾರ ನೀಡಬೇಕೆಂದು ದಕ್ಷಿಣ ಕನ್ನಡ ಗ್ರಾಹಕರ ಪರಿಹಾರ ವೇದಿಕೆಯು ಪುತ್ತೂರಿನ ಚೇತನಾ ಆಸ್ಪತ್ರೆಗೆ ನಿರ್ದೇಶನ ನೀಡಿದೆ.
ಮಂಗಳೂರು, ಮಾರ್ಚ್. 21 : ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಹೆರಿಗೆಗೆಂದು ದಾಖಲಾಗಿದ್ದ ಗರ್ಭಿಣಿ ಮಹಿಳೆಯೋರ್ವರು ಭ್ರೂಣದೊಂದಿಗೆ ಮೃತಪಟ್ಟ ಪ್ರಕರಣವೊಂದರಲ್ಲಿ ವೈದ್ಯೆಯ ಕರ್ತವ್ಯ ಲೋಪ ಸಾಬೀತಾಗಿದೆ.
ಹೀಗಾಗಿ ಮೃತ ಗರ್ಭಿಣಿ ಮಹಿಳೆಯ ತಂದೆ ಹಾಗೂ ಮಗನಿಗೆ ಒಟ್ಟು 17,43,440 ರು. ಪರಿಹಾರ ಧನ ಪಾವತಿಸಬೇಕೆಂದು ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವಾಣಿಜ್ಯಗಳ ಪರಿಹಾರ ವೇದಿಕೆ ಆದೇಶ ನೀಡಿದೆ.[ಮಂಗಳೂರು: ಸಿಡಿಮದ್ದು ತಯಾರಿ ವೇಳೆ ಸ್ಫೋಟ, ಇಬ್ಬರು ಸಾವು]
ಪೆರಾಬೆ ಗ್ರಾಮದ ಆಲಂಕಾರು ನಿವಾಸಿ ಕಮಲಾಕ್ಷ ರೈಯವರ ಪುತ್ರಿ, ಶ್ರೀಧರ್ ರೈ ಅವರ ಪತ್ನಿ ಸ್ವಪ್ನ ರೈ ಅವರನ್ನು ಎರಡನೇ ಹೆರಿಗೆಗಾಗಿ ಡಿಸೆಂಬರ್ 28ರಂದು ಪುತ್ತೂರಿನ ಚೇತನಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಸರಿಯಾಗಿ ಚಿಕಿತ್ಸೆ ಸಿಗದೆ ಸ್ವಪ್ನ ಮತ್ತು ಅವರ ಹೊಟ್ಟೆಯಲ್ಲಿದ್ದ ಮಗು ಡಿಸೆಂಬರ್ 29ರ ರಾತ್ರಿ ಅಸುನೀಗಿದ್ದರು.
ಇವರ ಸಾವಿಗೆ ವೈದ್ಯೆ ಪೂರ್ಣ ಸಿ. ರಾವ್ ಹಾಗೂ ಆಸ್ಪತ್ರೆಯವರ ಕರ್ತವ್ಯ ಲೋಪ ಕಾರಣವೆಂದು ಆರೋಪಿಸಿ ಸ್ವಪ್ನ ಅವರ ತಂದೆ ಕಮಲಾಕ್ಷ ರೈ ಅವರು ದಕ್ಷಿಣ ಕನ್ನಡ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯಲ್ಲಿ ಪ್ರಕರಣ ದಾಖಲಿಸಿದ್ದರು.
ಈ ಬಗ್ಗೆ ವಿಚಾರಣೆ ನಡೆಸಿದ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆ, ಪ್ರಸೂತಿ ಶಾಸ್ತ್ರದ ಸುವರ್ಣ ನಿಯಮದಂತೆ ಹೃದಯಾಘಾತಕ್ಕೊಳಗಾಗಿದ್ದಂತಹ ಮಹಿಳೆಗೆ ನಾಲ್ಕು ನಿಮಿಷದೊಳಗೆ ಶಸ್ತ್ರ ಚಿಕಿತ್ಸೆಯ ಮೂಲಕ ಹೆರಿಗೆಯನ್ನು ಕೂಡಾ ಮಾಡಿಸಿಲ್ಲ.
ಶವ ಪರೀಕ್ಷೆಯ ವರದಿಯ ಪ್ರಕಾರ ತೀವ್ರ ತರದ ಶ್ವಾಸಕೋಶದ ತೊಂದರೆಯಿಂದ ಗರ್ಭಿಣಿಯನ್ನು ಉಳಿಸುವ ಯಾವುದೇ ಪ್ರಯತ್ನ ನಡೆದಿಲ್ಲ. ಆದ್ದರಿಂದ ವೈದ್ಯೆ ಪೂರ್ಣ ಸಿ. ರಾವ್ ಕರ್ತವ್ಯ ಲೋಪವೆಸಗಿರುವುದು ಸಾಬೀತಾಗಿದೆ.
ಇದು ವೈದ್ಯಕೀಯ ನಿರ್ಲಕ್ಷ್ಯತನವೆಂದು ಪರಿಗಣಿಸಿ 17,43,440 ರು ಪರಿಹಾರ ಧನ ಪಾವತಿಸಬೇಕೆಂದು ದಕ್ಷಿಣ ಕನ್ನಡ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷ ವಿಶ್ವೇಶ್ವರ ಭಟ್ ಡಿ. ಅವರು ಆದೇಶದಲ್ಲಿ ತಿಳಿಸಿದ್ದಾರೆ.