ಕಾವ್ಯ ಪೂಜಾರಿ ಆತ್ಮಹತ್ಯೆ ಬೆನ್ನಿಗೆ ಆಳ್ವಾಸ್ ವಿರುದ್ಧ ಸಮರ
ಮಂಗಳೂರು, ಆಗಸ್ಟ್ 11: ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ಕಾವ್ಯ ಪೂಜಾರಿ ಅಸಹಜ ಸಾವಿನ ಹಿನ್ನೆಲೆಯಲ್ಲಿ ಅಕ್ಷರಶಃ ಆಳ್ವಾಸ್ ಕಾಲೇಜಿನ ವಿರುದ್ಧ ಜಿಲ್ಲಾಡಳಿತ ಸಮರ ಸಾರಿದೆ. ಆಳ್ವಾಸ್ ಶಿಕ್ಷಣ ಸಂಸ್ಥೆಗಳ ನಾನಾ ವಿಷಯಗಳಿಗೆ ಸಂಬಂಧಿಸಿದಂತೆ ಸಮಗ್ರ ತನಿಖೆಗೆ ಬರೋಬ್ಬರಿ 5 ಸಮಿತಿಗಳನ್ನು ರಚಿಸಿ ಜಿಲ್ಲಾಧಿಕಾರಿ ಕೆಜಿ ಜಗದೀಶ್ ಆದೇಶ ಹೊರಡಿಸಿದ್ದಾರೆ.
ವಿ.ಎಸ್ ಉಗ್ರಪ್ಪ ನೇತೃತ್ವದ ಮಹಿಳಾ ಮತ್ತು ಮಕ್ಕಳ ಲೈಂಗಿಕ ದೌರ್ಜನ್ಯ ನಿಯಂತ್ರಣ ಸಮಿತಿ ನೀಡಿರುವ ಸೂಚನೆಯಂತೆ ಈ ಸಮಿತಿ ರಚಿಸಲಾಗಿದೆ.
ಕಾವ್ಯ ಸಾವಿನ ಹಿನ್ನೆಲೆಯಲ್ಲಿ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿದ ಉಗ್ರಪ್ಪ ಸಮಿತಿ ನೀಡಿದ ಸೂಚನೆಯಂತೆ ಸಂಸ್ಥೆಯ ನಾನಾ ವಿಷಯಗಳ ತನಿಖೆಗೆ ಐದು ಸಮಿತಿಗಳನ್ನು ರಚಿಸಲಾಗಿದೆ. ಇದರ ಜತೆಗೆ ಬೆಳ್ತಂಗಡಿಯಲ್ಲಿ ಅತಿ ಹೆಚ್ಚು ನಡೆದಿರುವ ಅಸಹಜ ಸಾವಿನ ಪ್ರಕರಣಗಳ ತನಿಖೆಗೆ ಹಾಗೂ ಮಕ್ಕಳ ಲಿಂಗಾನುಪಾತದ ಏರುಪೇರು ಕುರಿತು ತನಿಖೆಗೆ ಸಮಿತಿ ರಚಿಸಿದ್ದು ಒಂದು ತಿಂಗಳಲ್ಲಿ ವರದಿ ನೀಡಲು ಆದೇಶದಲ್ಲಿ ತಿಳಿಸಲಾಗಿದೆ.
ಆಳ್ವಾಸ್ ಶಿಕ್ಷಣ ಸಂಸ್ಥೆಯವರು ವಿದ್ಯಾಸಂಸ್ಥೆ ನಡೆಸಲು ಅನುಮತಿ ಪಡೆದು ವಸತಿ ಶಾಲೆ ನಡೆಸುತ್ತಿರುವುದು ಕಾನೂನು ಬಾಹಿರ. ಈ ಬಗ್ಗೆ ಕ್ರಮ ತೆಗೆದುಕೊಳ್ಳಬೇಕು ಎಂದು ಉಗ್ರಪ್ಪ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತವು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕರು ಅಧ್ಯಕ್ಷರಾಗಿರುವ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರು ಮತ್ತು ಕಾಲೇಜು ಶಿಕ್ಷಣ ಇಲಾಖೆ ಜಂಟಿ ನಿರ್ದೇಶಕರು ಸದಸ್ಯರಾಗಿರುವ ಸಮಿತಿ ರಚಿಸಿ ತಿಂಗಳ ಒಳಗೆ ವರದಿ ನೀಡುವಂತೆ ಆದೇಶಿಸಿದೆ.
ಆಳ್ವಾಸ್ ಸಂಸ್ಥೆ ನಿರ್ಮಿಸಿರುವ ಬಹು ಮಹಡಿ ಕಟ್ಟಡಗಳಲ್ಲಿ ಲಿಫ್ಟ್ ವ್ಯವಸ್ಥೆ ಅಳವಡಿಸಿಲ್ಲ. ಅಗ್ನಿ ಸುರಕ್ಷಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆಕ್ಷೇಪಿಸಲಾಗಿದೆ. ಇವು ಕಟ್ಟಡ ನಿರ್ವಹಣ ನಿಯಮಗಳಲ್ಲಿ ಉಲ್ಲಂಘನೆಯಾಗಿದ್ದು, ಈ ಕುರಿತು ಉಗ್ರಪ್ಪ ಸಮಿತಿ ವಿವರಣೆ ಕೇಳಿತ್ತು. ಇದಕ್ಕೆ ಸಂಬಂಧಿಸಿದಂತೆ ಮಂಗಳೂರು ನಗರ ಯೋಜನೆ ಸಹಾಯಕ ನಿರ್ದೇಶಕರು ಅಧ್ಯಕ್ಷರಾಗಿರುವ ಅಗ್ನಿಶಾಮಕ ದಳದ ಮುಖ್ಯಾಧಿಕಾರಿ, ತಾ.ಪ೦ ಇಒ ಹಾಗೂ ಮೂಡಬಿದ್ರೆ ಪುರಸಭೆ ಮುಖ್ಯಾಧಿಕಾರಿ ಮತ್ತು ಪುತ್ತಿಗೆ ಗ್ರಾಪಂ ಪಿಡಿಒ ಸದಸ್ಯರಾಗಿರುವ ಸಮಿತಿ ರಚಿಸಿ ತನಿಖೆ ನಡೆಸಲು ಆದೇಶ ನೀಡಿದೆ.
ಸಂಸ್ಥೆಯಲ್ಲಿ ಸುಮಾರು 26ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದು ನಾಲ್ಕು ಸಾವಿರದಷ್ಟು ವಿದ್ಯಾರ್ಥಿಗಳು ಉಚಿತ ಶಿಕ್ಷಣ ಪಡೆಯುತ್ತಿದ್ದಾರೆ. ಉಳಿದ 22ಸಾವಿರದಷ್ಟು ವಿದ್ಯಾರ್ಥಿಗಳ ವಾರ್ಷಿಕ ಒಂದು ಲಕ್ಷ ರೂಪಾಯಿ ಶುಲ್ಕ ನಿಯಂತ್ರಣ ಯಾರು ಮಾಡುತ್ತಿದ್ದಾರೆ? ಇದರ ಬಗ್ಗೆ ಜಿಲ್ಲಾಡಳಿತ ಏನು ಕ್ರಮ ಕೈಗೊಂಡಿದೆ? ಎಂದು ಉಗ್ರಪ್ಪ ಸಮಿತಿ ಪ್ರಶ್ನಿಸಿತ್ತು.
ಇದಕ್ಕೆ ಸಂಬಂಧಿಸಿದಂತೆ ಜಿಲ್ಲಾಡಳಿತ, ಮಂಗಳೂರು ವಿವಿ ರೆಜಿಸ್ಟಾರ್ ಅಧ್ಯಕ್ಷತೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಸದಸ್ಯರಾಗಿರುವ ಸಮಿತಿ ರಚಿಸಿದೆ. ಹಾಗೂ ಶುಲ್ಕ ನಿಯಂತ್ರಣದಲ್ಲಿ ಜಿಲ್ಲಾಧಿಕಾರಿಗಳ ಪಾತ್ರ, ವಸತಿ ನಿಲಯಗಳ ನಿರ್ವಹಣೆ ಮಾನದಂಡಗಳು ಸೇರಿದಂತೆ ತನಿಖೆಗೆ ಹಲವು ಸೂಚನೆಗಳು ನೀಡಿದೆ.