ದಕ್ಷಿಣ ಕನ್ನಡ ಜಿಲ್ಲೆಯ ಕಳೆದ ಐದು ವರ್ಷಗಳ ಕೇಸು ಕೆದಕಲಿರುವ ಪೊಲೀಸರು
ಮಂಗಳೂರು, ಜುಲೈ 14: ಮಂಗಳೂರು ಕಮಿಷನರೇಟ್ ಹಾಗೂ ದಕ್ಷಿಣಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಗೆ ಬರುವ ಐದು ವರ್ಷದ ಹಿಂದಿನ ಎಲ್ಲಾ ಗೂಂಡಾ ಪ್ರಕರಣಗಳ ಪುನರ್ ಪರಿಶೀಲನೆ ನಡೆಸಲಾಗುವುದು ಎಂದು ಪೊಲೀಸ್ ಮಹಾನಿರ್ದೇಶಕ ಆರ್.ಕೆ.ದತ್ತಾ ಹೇಳಿದ್ದಾರೆ.
ಇಲ್ಲಿ ಶುಕ್ರವಾರ ಮಾತನಾಡಿದ ಅವರು, ಮಾಧ್ಯಮಗಳಲ್ಲಿ ಬರುವಂತಹ ಯಾವುದೇ ಭಯದ ವಾತಾವರಣ ಜಿಲ್ಲೆಯಲ್ಲಿ ಇಲ್ಲ. ಎಲ್ಲ ಸಹಜ ಸ್ಥಿತಿಯಲ್ಲಿದ್ದು, ಗಲಭೆ ಪೀಡಿತ ಬಂಟ್ವಾಳ, ವಿಟ್ಲ ಹಾಗೂ ಇತರ ಪ್ರದೇಶಗಳಿಗೆ ಸ್ವತಃ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇನೆ ಎಂದು ಹೇಳಿದರು.
ಶರತ್ ಹತ್ಯೆ ಪ್ರಕರಣದ ಸ್ಫೋಟಕ ಮಾಹಿತಿ ನನ್ನ ಬಳಿ ಇದೆ: ಸ್ವಾಮೀಜಿ
ಇತ್ತೀಚೆಗೆ ಜಿಲ್ಲೆಯಲ್ಲಿ ನಡೆದಂತಹ ಎಲ್ಲ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿದ್ದು, ಆರೆಸ್ಸೆಸ್ ಕಾರ್ಯಕರ್ತ ಶರತ್ ಕೊಲೆ ಆರೋಪಿಗಳನ್ನೂ ಕೂಡಲೇ ಬಂಧಿಸುತ್ತೇವೆ. ಕೆಲವು ಮಹತ್ತರ ಸುಳಿವು ಲಭ್ಯವಾಗಿದೆ ಎಂದು ಹೇಳಿದರು.
ಶರತ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸ್ ವ್ಯವಸ್ಥೆಯಲ್ಲಿ ಕೊಂಚ ನ್ಯೂನತೆಗಳು ಇರುರುವುದನ್ನು ಒಪ್ಪಿಕೊಂಡ ಅವರು, ಕಳೆದ ಐದು ವರ್ಷಗಳಲ್ಲಿ ಮಂಗಳೂರು ಕಮಿಷನರೇಟ್ ಹಾಗೂ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವ್ಯಾಪ್ತಿಯಲ್ಲಿ ನಡೆದ ಗೂಂಡಾ ಪ್ರಕರಣಗಳೆಲ್ಲವನ್ನೂ ಪುನರ್ ಪರಿಶೀಲನೆ ನಡೆಸುವಂತೆ ಈಗಾಗಲೇ ಆದೇಶ ನೀಡಲಾಗಿದೆ ಎಂದು ಹೇಳಿದರು.
ಇಂಥ ಪ್ರಕರಣದಲ್ಲಿ ತೊಡಗಿಕೊಂಡಿದ್ದವರು ಇದೀಗ ಏನು ಮಾಡುತ್ತಿದ್ದಾರೆ? ಒಂದು ವೇಳೆ ಸಮಾಜ ವಿದ್ರೋಹಿ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದರೆ ಅಂಥವರ ಮೇಲೆ ಗೂಂಡಾ ಕಾಯ್ದೆ, ಗಡೀಪಾರು ಮಾಡುವುದು ಹಾಗೂ ಕೋಕಾ ಕಾಯ್ದೆಯ ಮೂಲಕ ಕ್ರಮ ಜರಗಿಸುವಂತೆಯೂ ತಿಳಿಸಿರುವುದಾಗಿ ಹೇಳಿದರು.
ಜಿಲ್ಲೆಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ವ್ಯಕ್ತಿಗಳು ಮಾಧ್ಯಮಗಳಲ್ಲಿ ಉದ್ರೇಕಕಾರಿ ಹೇಳಿಕೆಗಳನ್ನು ನೀಡುತ್ತಿದ್ದು, ಇಂಥ ಹೇಳಿಕೆಗಳನ್ನು ಪ್ರಸಾರ ಮಾಡಬಾರದು ಎಂದು ಮಾಧ್ಯಮಗಳಿಗೆ ದತ್ತಾ ಮನವಿ ಮಾಡಿದರು.
ತಪ್ಪು ಮಾಡದವರನ್ನು ಪ್ರಕರಣದಲ್ಲಿ ಸಿಲುಕಿಸಲು ಅವಕಾಶ ಇಲ್ಲ. ಇದೇ ಕಾರಣಕ್ಕಾಗಿ ಶರತ್ ಹತ್ಯೆಯ ಆರೋಪಿಗಳ ಪತ್ತೆ ಕಾರ್ಯ ವಿಳಂಬವಾಗಿದೆ ಎಂದರು.
ಎಡಿಜಿಪಿ ಅಲೋಕ್ ಮೋಹನ್, ಪಶ್ಚಿಮ ವಲಯ ಪೊಲೀಸ್ ಮಹಾನಿರೀಕ್ಷಕ ಹರಿಶೇಖರನ್, ಮಂಗಳೂರು ಪೊಲೀಸ್ ಕಮಿಷನರ್ ಟಿ.ಆರ್.ಸುರೇಶ್ ಇದ್ದರು.