ಸುಳ್ಯ: ಕಾರ್ ದರೋಡೆ, ಬಂದೂಕುಧಾರಿಗಳು 3 ದಿನ ಪೊಲೀಸ್ ಕಸ್ಟಡಿಗೆ
ಬೆಳಗಾವಿಯಲ್ಲಿ ಬಂಧಿಸಲಾಗಿದ್ದ ಸುಳ್ಯ ಐವರ್ನಾಡಿ ಬಳಿ ಕಾರ್ ದರೋಡೆ ಆರೋಪಿಗಳನ್ನು ಮೂರು ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ನೀಡಿ ಮಂಗಳೂರು ಜಿಲ್ಲಾ ನ್ಯಾಯಾಲಯ ಆದೇಶ ಹೊರಡಿಸಿದೆ.
ಮಂಗಳೂರು, ಫೆಬ್ರವರಿ. 17 : ಸುಳ್ಯ ಬಳಿಯ ಐವರ್ನಾಡಿ ಬಳಿ ಕಾರೊಂದನ್ನು ಅಡ್ಡಗಟ್ಟಿ ಐದು ಲಕ್ಷ ರು. ದೋಚಿದ್ದ ನಾಲ್ವರು ಬಂದೂಕುಧಾರಿಗಳನ್ನು 3 ದಿನ ಪೊಲೀಸ್ ಕಸ್ಟಡಿಗೆ ನೀಡಿ ಜಿಲ್ಲಾ ನ್ಯಾಯಾಲಯ ಗುರುವಾರ ಆದೇಶ ಹೊರಡಿಸಿದೆ.
ಮುಂಬೈಯ ಅವಿನಾಶ್ ಜಗನ್ನಾಥ ಮಾರ್ಕೆ (35), ಪುತ್ತೂರು ತಾಲೂಕಿನ ಬೆಳಂದೂರಿನ ಅಬ್ದುಲ್ ಕರೀಂ (24), ಮುಹಮ್ಮದ್ ಹನೀಫ್(33) ಬೆಂಗಳೂರಿನ ತಾಹಿರ್ ಹುಸೇನ್ ಎನ್ನುವರು ಇತ್ತೀಚೆಗೆ ಸುಳ್ಯದ ಐವರ್ನಾಡಿ ಬಳಿ ಕಾರನ್ನು ಅಡ್ಡಗಟ್ಟಿ ಪಿಸ್ತೂಲು ಹಾಗೂ ತಲವಾರುನಿಂದ ಬೆದರಿಸಿ ಐದು ಲಕ್ಷ ರು. ದರೋಡೆ ಮಾಡಿ ಪರಾರಿಯಾಗಿದ್ದರು.[ಸುಳ್ಯ : ಕಾರು ಅಡ್ಡಗಟ್ಟಿ 5 ಲಕ್ಷ ದೋಚಿದ ಬಂದೂಕುಧಾರಿಗಳು]
ಬಳಿಕ ಆರೋಪಿಗಳನ್ನು ಫೆಬ್ರವರಿ 4ರಂದು ಬೆಳಗಾವಿಯಲ್ಲಿ ಬಂಧಿಸಲಾಗಿತ್ತು.
ಘಟನೆ ವಿವರ: ಗುತ್ತಿಗಾರಿನ ಅಡಕೆ ವ್ಯಾಪಾರಿ ಅಬ್ದುಲ್ ಖಾದರ್ ಎನ್ನವುರು ಜನವರಿ 23ರಂದು ತಮ್ಮ ಕಾರಿನಲ್ಲಿ ಬೆಳ್ಳಾರೆಯಿಂದ ಗುತ್ತಿಗಾರುಗೆ ಹೋಗುತ್ತಿದ್ದರು.
ಅಬ್ದುಲ್ ಖಾದರ್ ಅವರ ಕಾರನ್ನು ಹಿಂಬಾಲಿಸಿ ಸುಳ್ಯ ಬಳಿಯ ಐವರ್ನಾಡಿ ಬಳಿ ತಡೆದು ಮಾರಕಾಸ್ತ್ರಗಳನ್ನು ತೋರಿಸಿ ಅವರಲ್ಲಿದ್ದ 5 ಲಕ್ಷ ರು ಹಾಗೂ ಮೊಬೈಲ್ ನ್ನು ದೋಚಿ ಪರಾರಿಯಾಗಿದ್ದರು.