ಸಂಸದ ನಳಿನ್ ಕುಮಾರ್ ವಿರುದ್ದ ಕಾನೂನು ಕ್ರಮ : ಸಚಿವ ರೈ
ಮಂಗಳೂರು, ಜನವರಿ 2 : ' ದಕ್ಷಿಣ ಕನ್ನಡ ಜಿಲ್ಲೆಗೆ ಬೆಂಕಿ ಹಚ್ಚಲು ನಮಗೂ ಗೊತ್ತು' ಎಂಬ ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಕರಾವಳಿಯಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಸಚಿವ ಯು.ಟಿ.ಖಾದರ್ ತಿರುಗೇಟು ನೀಡಿದ ಬಳಿಕ ಸಚಿವ ರಮಾನಾಥ ರೈ ಸಹ ಸೋಮವಾರ ಆಕ್ರೋಶ ವ್ಯಕ್ತಪಡಿಸಿದ್ದಾರೆ. 'ಜವಾಬ್ದಾರಿಯುತ ಲೋಕಸಭಾ ಸದಸ್ಯ ಸಾಮರಸ್ಯ ಕಾಪಾಡಬೇಕು.
ಚುನಾಯಿತ ಪ್ರತಿನಿಧಿಯಾಗಿ ಈ ರೀತಿಯ ಹೇಳಿಕೆ ಸಲ್ಲದು. ಈ ಬಗ್ಗೆ ಗೃಹ ಸಚಿವರ ಬಳಿ ದೂರು ನೀಡಿದ್ದು, ಶೀಘ್ರವೇ ಕಾನೂನು ಕ್ರಮ ತೆಗೆದುಕೊಳ್ಳಲಾಗುವುದು' ಎಂದರು.
ಅವರು ಬೆಂಕಿ ಹಚ್ಚುವಾಗ ಅದನ್ನು ಶಮನ ಮಾಡುವ ಶಕ್ತಿ ರಾಜ್ಯ ಸರ್ಕಾರಕ್ಕಿದೆ. ಪೊಲೀಸ್ ಠಾಣೆ ಮುಂದೆ ನಡೆದ ಪ್ರತಿಭಟನೆ ಕಾನೂನು ವ್ಯವಸ್ಥೆಗೆ ಗಂಭೀರ ಸವಾಲಾಗಿದೆ. ಕಾರ್ತಿಕ್ ರಾಜ್ ಕೊಲೆ ಪ್ರಕರಣದ ತನಿಖೆಯನ್ನ ಸಿಓಡಿಗೆ ವಹಿಸಲು ಸಿಎಂ ಜೊತೆ ಮಾತನಾಡುತ್ತೇನೆ ಎಂದು ಹೇಳಿದರು.
ಮೋದಿ ವಿರುದ್ಧ ಕಿಡಿ: ಇದೇ ವೇಳೆ ಸಚಿವ ರೈ, ನೋಟು ರದ್ದತಿ ಬಗ್ಗೆ ಮಾತನಾಡಿದರು. ' ಪ್ರಧಾನಿ ನೀಡಿದ ಗಡುವು ಐವತ್ತು ದಿನ ಕಳೆದರೂ ಇನ್ನೂ ಪರಿಸ್ಥಿತಿ ಸುಧಾರಿಸಿಲ್ಲ.
ವಿದೇಶಿ ಕಪ್ಪು ಹಣ ತರುವ ಬದಲು ದೇಶದ ಕೋಟಿ-ಕೋಟಿ ಜನರಿಗೆ ತೊಂದರೆಯನ್ನುಂಟು ಮಾಡಿರುವ ಪ್ರಧಾನಿ ಮೋದಿ, ಕಪ್ಪು ಹಣ ಬಿಳಿ ಮಾಡಲು ಕಾಳಧನಿಕರಿಗೆ ಮೋದಿ ಅವಕಾಶ ಮಾಡಿಕೊಟ್ಟಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.