ಕೋಮುವಾದ, ಜಾತಿವಾದವೇ ಮೋದಿ ಮಾದರಿ: ಜಿಗ್ನೇಶ್ ಮೆವಾನಿ
ಮಂಗಳೂರು, ಫೆಬ್ರವರಿ, 14 ; 'ಮೋದಿ ಮಾದರಿಯ ಅಭಿವೃದ್ಧಿ ಕೋಮುವಾದ, ಜಾತಿವಾದವನ್ನು ಒಳಗೊಂಡಿದೆ. ರೈತರು,ಕಾರ್ಮಿಕರನ್ನು ಲೂಟಿ ಹೊಡೆಯುವ ಅಭಿವೃದ್ಧಿ ನಮಗೆ ಬೇಕಾಗಿಲ್ಲ.
ಬಡವ -ಶ್ರೀಮಂತ ಎನ್ನುವ ತಾರತಮ್ಯವಿಲ್ಲದೆ ಎಲ್ಲರಿಗೂ ಸಮಾನ ಶಿಕ್ಷಣ, ಊಟ, ಉಡುಪು ದೊರೆಯುವ ಮಾದರಿ ಬೇಕಾಗಿದೆ. ಅಚ್ಛೇ ದಿನ್ ಹೆಸರಿನಲ್ಲಿ ಪ್ರಧಾನಿ ಮೋದಿ, ಅಂಬಾನಿ-ಅದಾನಿ ಯಂತಹ ಉದ್ಯಮಿಗಳನ್ನ ಪೋಷಿಸುತ್ತಿದ್ದಾರೆ ಎಂದು ಸಾಮಾಜಿಕ ಹೋರಾಟಗಾರ ಜಿಗ್ನೇಶ್ ಮೇವಾನಿ ಕಿಡಿಕಾರಿದ್ದಾರೆ.
ಅವರು ಮಂಗಳವಾರ ಸಂಜೆ ನಗರದ ಪುರಭವನದಲ್ಲಿ ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಸಂಘಟನೆಯ ವತಿಯಿಂದ ಹಮ್ಮಿಕೊಂಡ ವಿದ್ಯಾರ್ಥಿ ಜಾಗೃತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
'ನೋಟು ನಿಷೇಧದ ಸಂದರ್ಭದಲ್ಲಿ ಕಪ್ಪು ಹಣ ತರುತ್ತೇನೆ ಎಂದರು. ಭವ್ಯ ಬಂಗಲೆಯಲ್ಲಿ ವಾಸ ಮಾಡುತ್ತಿದ್ದ ಅಂಬಾನಿಯಯಂತಹ ಉದ್ಯಮಿಗಳ ಕೋಟ್ಯಾಂತರ ಹಣ, ಭೂಮಿಯನ್ನು ವಾಪಾಸು ಪಡೆಯಲು ಸಾಧ್ಯವಾಗಿಲ್ಲ.
ಮನುವಾದಿ ಮನಸ್ಥಿತಿಯ ಸರಕಾರ ನಮ್ಮನ್ನಾಳುತ್ತಿರುವ ಕಾರಣ ಪ್ರಜಾಪ್ರಭುತ್ವ ವ್ಯವಸ್ಥೆಗೆ ಹೋರಾಟ ನಡೆಸಿ ಕಣ್ಮರೆಯಾದ ನಝೀಬನ ತಾಯಿಯನ್ನು ಬಂಧಿಸುತ್ತಾರೆ. ರೋಹಿತ್ ವೇಮುಲನ ತಾಯಿಗೆ ಕಿರುಕುಳ ನೀಡುತ್ತಾರೆ' ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದೇ ವೇಳೆ ' ದೇಶದ ಆಂತರಿಕ ಭದ್ರತೆಗೆ ಹಿಂದುತ್ವದ ಅಜೆಂಡಾ ಹೊಂದಿರುವ ಸಂಘಪರಿವಾರದಿಂದ ಅಪಾಯವಿದೆ. ಮಾಲೆಗಾಂವ್ ಸ್ಫೋಟದಲ್ಲಿ ಸಂಘಪರಿವಾರದ ರಾಷ್ಟ್ರ ವಿರೋಧಿ ಕೃತ್ಯ ಸಾಬೀತಾಗಿದೆ.
ಜಾತಿವಾದ, ಕೋಮುವಾದ ನಾಶವಾಗದೆ ಸಂವಿಧಾನದ ಆಶಯಗಳು ಜಾರಿಗೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯ ಪಟ್ಟರು. ಸಂವಿಧಾನದ ಉಳಿವಿಗಾಗಿ ದಲಿತರು, ಅಲ್ಪ ಸಂಖ್ಯಾತರು ಜೊತೆಯಾಗಿ ಹೋರಾಡಬೇಕಾಗಿದೆ.
ಅದಕ್ಕಾಗಿ ಆರ್ಎಸ್ಎಸ್ಗೆ ವಿರುದ್ಧವಾಗಿ ಸಂವಿಧಾನ ಸುರಕ್ಷಾ ಸಮಿತಿ ರಚನೆಗೆ ದೇಶಾದ್ಯಂತ ಜಲ್ಲಾ ಮಟ್ಟದಲ್ಲೂ ಚಾಲನೆ ನೀಡಲಾಗುವುದು ಎಂದು ಜಿಗ್ನೇಶ್ ಮೆವಾನಿ ತಿಳಿಸಿದರು.