ಪೊಲೀಸ್ ಅಧಿಕಾರಿಯೊಬ್ಬರ ಪುತ್ರ ಕಂಠಪೂರ್ತಿ ಕುಡಿದು ಮಾಡಿದ್ದೇನು?
ಮಂಗಳೂರು, ಡಿಸೆಂಬರ್. 04 : ಪೊಲೀಸ್ ಅಧಿಕಾರಿಯೊಬ್ಬರ ಪುತ್ರ ಕಂಠಪೂರ್ತಿ ಕುಡಿದು ತನ್ನ ಸ್ನೇಹಿತರ ಜೊತೆ ಸೇರಿಕೊಂಡು ರಾ.ಹೆ. 66ರಲ್ಲಿ ಯದ್ವಾತದ್ವಾ ಬೈಕ್ ಚಲಾಯಿಸಿದ್ದಲ್ಲದೆ, ಸರ್ಕಾರಿ ಸಾರಿಗೆ ಬಸ್ ಸೈಡ್ ನೀಡಿಲ್ಲವೆಂಬ ನೆಪವೊಡ್ಡಿ ಬಸ್ ಸಿಬ್ಬಂದಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ.
ಇಲ್ಲಿನ ಪಡುಬಿದ್ರಿ ಭವ್ಯ ಪೆಟ್ರೋಲ್ ಪಂಪ್ ಬಳಿ ಈ ಪ್ರಕರಣ ನಡೆದಿದೆ ಎನ್ನಲಾಗಿದೆ. ಪಡುಬಿದ್ರಿ ಠಾಣಾ ಪೊಲೀಸರು ಪ್ರಕರಣಕ್ಕೆ ಸಂಬಂಧಿಸಿದಂತೆ ನಿಹಾಲ್, ಕೌಶಿಕ್, ಜೋಯೆಲ್, ಚಿಂತನ್, ಹಿತೇಶ್, ಸೌರವ್, ಆಕಾಶ್, ಆದಿತ್ಯ ಹಾಗೂ ಧಣೇಶ್ ಎಂಬುವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.
ಆರೋಪಿಗಳ ವಿರುದ್ಧ ದೊಂಬಿ, ಅಕ್ರಮ ಕೂಟ, ಹಲ್ಲೆ ಪ್ರಕರಣ ದಾಖಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಘಟನೆಯ ವಿವರ: ಬೆಂಗಳೂರಿನಿಂದ ಭಟ್ಕಳಕ್ಕೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸನ್ನು ಶನಿವಾರ ಮುಂಜಾನೆ ಸುಮಾರು 4:30ರರ ವೇಳೆಗೆ ಸುರತ್ಕಲ್ ಸಮೀಪದ ಮುಕ್ಕಾದಿಂದ ವಿದ್ಯಾರ್ಥಿಗಳ ತಂಡ ಫಾಲೋ ಮಾಡಿದೆ ಎಂದು ಹೇಳಲಾಗಿದೆ.
ಈ ತಂಡವು ಅಡ್ಡಾದಿಡ್ಡಿಯಾಗಿ ನಾಲ್ಕೈದು ದ್ವಿಚಕ್ರ ವಾಹನಗಳಲ್ಲಿ ಸಂಚರಿಸುತ್ತಿದ್ದು, ಈ ವೇಳೆ ಚಾಲಕರನ್ನು ಕೈಸನ್ನೆ ಮಾಡಿ ಬಾಟಲಿ ಪ್ರದರ್ಶಿಸುತ್ತಾ ಬೆದರಿಸುತ್ತಿತ್ತೆನ್ನಲಾಗಿದೆ. ಪಡುಬಿದ್ರೆಯ ಭವ್ಯಾ ಪೆಟ್ರೋಲ್ ಬಂಕ್ ಮುಂದೆ ಬಸ್ಸನ್ನು ತಡೆದ ತಂಡ ಚಾಲಕನನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಸಿ ಹಲ್ಲೆ ನಡೆಸಿದ್ದಾರೆ.
ತಡೆಯಲು ಬಂದ ಸಹಚಾಲಕ ವಿಠಪ್ಪ ಮತ್ತು ನಿರ್ವಾಹಕ ನಾಗರಾಜ್ ಮೇಲೆಯೂ ಹಲ್ಲೆ ನಡೆಸಿ ಅವರಲ್ಲಿದ್ದ ಹಣವನ್ನು ದೋಚಿರುವುದಾಗಿ ಎಂದು ಚಾಲಕ ಗಿರೀಶ್ ಬಾಬು ದೂರಿದ್ದಾರೆ.
ಪಡುಬಿದ್ರಿ ಠಾಣಾ ಪೊಲೀಸರು ಬಂಧಿತನ ಮುಖಾಂತರ ಉಪಾಯವಾಗಿ ನಿಹಾಲ್ ಮತ್ತು ಇತರರನ್ನು ಠಾಣೆಗೆ ಕರೆಸಿದ್ದಾರೆ. ಗಾಯಾಳು ಚಾಲಕನಿಗೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.