ಸಿಎಂ ಇಬ್ರಾಹಿಂನ ಕಾಂಗ್ರೆಸ್ ನಿಂದ ಉಚ್ಚಾಟಿಸಿ: ಪೂಜಾರಿ
ತಕ್ಷಣವೇ ಇಬ್ರಾಹಿಂನನ್ನು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿ, ಪಕ್ಷದಿಂದ ಉಚ್ಚಾಟನೆ ಮಾಡಬೇಕು: ಜನಾರ್ದನ ಪುಜಾರಿ
ಮಂಗಳೂರು, ಅಕ್ಟೋಬರ್ 22: ಕಾಂಗ್ರೆಸ್ ಆಡಳಿತ ಸಮಾಧಾನಕಾರವಾಗಿಲ್ಲ, ತೃಪ್ತಿ ತಂದಿಲ್ಲ ಎಂಬ ಹೇಳಿಕೆಗೆ ಹಿರಿಯ ಮುಖಂಡರಾದ ಜನಾರ್ದನ ಪೂಜಾರಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ತಕ್ಷಣವೇ ಇಬ್ರಾಹಿಂನನ್ನು ಯೋಜನಾ ಆಯೋಗದ ಉಪಾಧ್ಯಕ್ಷ ಸ್ಥಾನದಿಂದ ಕಿತ್ತು ಹಾಕಿ, ಪಕ್ಷದಿಂದ ಉಚ್ಚಾಟನೆ ಮಾಡಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಅಗ್ರಹಿಸಿದ್ದಾರೆ.
ಕಾಂಗ್ರೆಸ್ ಪಕ್ಷಕ್ಕೆ ಇಬ್ರಾಹಿಂ ಕೊಡುಗೆ ಏನು ಎಂದು ಪ್ರಶ್ನಿಸಿರುವ ಅವರು, ಈ ರೀತಿ ಪಕ್ಷದ ವಿರುದ್ಧವಾಗಿ ಮಾತನಾಡಿರುವವರನ್ನು ಯಾವ ಕಾರಣಕ್ಕೂ ಉಳಿಸಿಕೊಳ್ಳಬಾರದು. ಕೂಡಲೇ ಅವರ ವಿರುದ್ಧ ಕ್ರಮಕ್ಕೆ ಮುಂದಾಗಬೇಕು ಎಂದು ಜನಾರ್ದನ ಪುಜಾರಿ ಅವರು ಒತ್ತಾಯಿಸಿದ್ದಾರೆ.[ಸಿದ್ದು ಫ್ರೆಂಡ್ ಇಬ್ರಾಹಿಂಗೆ ಕಾಂಗ್ರೆಸ್ ಆಡಳಿತ ತೃಪ್ತಿಯಿಲ್ಲವಂತೆ...]
ಈ ಹೇಳಿಕೆ ಗಮನಿಸಿದರೆ ಎಚ್.ಡಿ.ದೇವೇಗೌಡ ಅವರು ಕಾಂಗ್ರೆಸ್ ಸರಕಾರ ಉರುಳಿಸಲು ಸಂಚು ರೂಪಿಸಿದ್ದಾರೆ. ಜೊತೆಗೆ ಮುಖ್ಯಮಂತ್ರಿಗಳ ಆಪ್ತರೇ ಹೀಗೆ ಹೇಳಿರುವುದರಿಂದ ರಾಜೀನಾಮೆ ಪಡೆಯಬೇಕಾಗುತ್ತದೆ ಎಂದು ಜನಾರ್ದನ ಪೂಜಾರಿ ಹೇಳಿದ್ದಾರೆ.
ನಾವು ನೋಡಿದ ಸಿದ್ದರಾಮಯ್ಯ ಇವರಲ್ಲ ಬಿಡ್ರೀ. ಯಾವುದೋ ಮಂಕು ಕವಿದಂತೆ ಅಗಿಬಿಟ್ಟಿದ್ದಾರೆ ಅವರು. ಯಾವ ನಿರೀಕ್ಷೆ ಇಟ್ಟುಕೊಂಡು ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತಂದೆವೋ ಅದು ಸಾಧ್ಯವಾಗಿಲ್ಲ. ಈ ವಿಷಯ ಸ್ವತಃ ಸಿದ್ದರಾಮಯ್ಯನವರಿಗೆ ಗೊತ್ತಾಗಿದೆ ಎಂದು ಶುಕ್ರವಾರ ಸಿಎಂ ಇಬ್ರಾಹಿಂ ಹೇಳಿಕೆ ನೀಡಿದ್ದರು.[ಯೋಜನಾ ಆಯೋಗಕ್ಕೆ ಇಬ್ರಾಹಿಂ, ದಿಲ್ಲಿಗೆ ನಾಡಗೌಡ]
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತರಾದ ಸಿ.ಎಂ.ಇಬ್ರಾಹಿಂ ಮಾಧ್ಯಮದವರ ಪ್ರಶ್ನೆಯೊಂದಕ್ಕೆ ಉತ್ತರಿಸಿ, ದೇವೇಗೌಡರ ಆಡಳಿತದ ಹತ್ತಿರಕ್ಕೂ ಸಿದ್ದರಾಮಯ್ಯ ಅವರ ಆಡಳಿತ ಬರೋಕೆ ಸಾಧ್ಯವಿಲ್ಲ ಎಂದು ಕೂಡ ಹೇಳಿದ್ದರು. ಆ ನಂತರ ಈ ಬಗ್ಗೆ ಪ್ರತಿಕ್ರಿಯಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲರನ್ನೂ ತೃಪ್ತಿ ಪಡಿಸುವುದಕ್ಕೆ ಅಗಲ್ಲ ಎಂದಿದ್ದರು.