ಶರತ್ ಕೊಲೆ ಪ್ರಕರಣ: ನಗರ ಪೊಲೀಸರ ಜತೆ ಸಿಐಡಿ ಐಜಿಪಿ ಪ್ರತಾಪ್ ರೆಡ್ಡಿ ಚರ್ಚೆ
ಮಂಗಳೂರು: ಸಿ.ಐ.ಡಿ ವಿಭಾಗದ ಎಡಿಜಿಪಿ ಪ್ರತಾಪ್ ರೆಡ್ಡಿ ಭಾನುವಾರ ಮಂಗಳೂರಿಗೆ ಆಗಮಿಸಿದ್ದು, ದಕ್ಷಿಣ ಕನ್ನಡ ಜಿಲ್ಲಾ ಮತ್ತು ಮಂಗಳೂರು ನಗರ ಪೊಲೀಸ್ ಅಧಿಕಾರಿಗಳ ಜೊತೆಗೆ ಶರತ್ ಮಡಿವಾಳ ಕೊಲೆ ಪ್ರಕರಣದ ಬಗ್ಗೆ ಮಾತುಕತೆ ನಡೆಸಿದ್ದಾರೆ.
ಕಾಂಗ್ರೆಸ್ ಸಮಾವೇಶಕ್ಕಾಗಿ ಶರತ್ ಮಡಿವಾಳ ಸಾವನ್ನು ಮುಚ್ಚಿಟ್ಟ ಆಸ್ಪತ್ರೆ?
ಸರ್ಕಾರಿ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಎಡಿಜಿಪಿ ಪ್ರತಾಪ್ ರೆಡ್ಡಿ ಜಿಲ್ಲೆಯ ಪೊಲೀಸ್ ಅಧಿಕಾರಿಗಳ ಜತೆ ಶರತ್ ಮಡಿವಾಳ ಹತ್ಯೆ ಪ್ರಕರಣದ ತನಿಖೆಯ ಕುರಿತಂತೆ ಚರ್ಚಿಸಿದರು ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಪ್ರತಾಪ್ ರೆಡ್ಡಿ ಅವರು ಈ ಹಿಂದೆ ಮಂಗಳೂರಿನಲ್ಲಿ ಪಶ್ಚಿಮ ವಲಯದ ಐಜಿಪಿಯಾಗಿ ಸೇವೆ ಸಲ್ಲಿಸಿದ್ದರು.
ಶರತ್ ಕೊಲೆ ಪ್ರಕರಣವನ್ನು ಎನ್ಐಎಗೆ ಒಪ್ಪಿಸು ವಂತೆ ಒತ್ತಡಗಳು ಬರುತ್ತಿವೆ. ಒಂದೆರಡು ದಿನಗಳಲ್ಲಿ ಈ ಬಗ್ಗೆ ಆದೇಶ ಆಗಬಹುದೆಂದು ಮೂಲಗಳು ವಿವರಿಸಿವೆ. ರಾಜ್ಯ ಸರಕಾರ ಇದಕ್ಕೆ ಒಪ್ಪಿಗೆ ನೀಡದಿದ್ದರೆ ಕೇಂದ್ರ ಸರಕಾರವು ನ್ಯಾಯಾಲಯದ ಆದೇಶ ತಂದು ಎನ್ಐಎಗೆ ಒಪ್ಪಿಸುವ ಬಗ್ಗೆ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.
ಸಿಐಡಿ ಎಡಿಜಿಪಿ ಅವರು ಮಂಗಳೂರಿಗೆ ಆಗಮಿಸಿ ಚರ್ಚಿಸುತ್ತಿರುವುದನ್ನು ಗಮನಿಸಿದರೆ ಪ್ರಕರಣದ ತನಿಖೆಯನ್ನು ಸಿಐಡಿಗೆ ಒಪ್ಪಿಸುವ ಬಗ್ಗೆ ಸರಕಾರ ಚಿಂತನೆ ನಡೆಸುತ್ತಿದೆಯೇ ಎಂಬ ಸಂಶಯವನ್ನು ಹುಟ್ಟು ಹಾಕಿದೆ.
ಆರೆಸ್ಸೆಸ್ ಶರತ್ ಮಡಿವಾಳ ಶವ ಯಾತ್ರೆಯ ಗ್ರೌಂಡ್ ರಿಪೋರ್ಟ್
ಶರತ್ ಕೊಲೆ ಪ್ರಕರಣಕ್ಕೆ ಐದು ವಿಶೇಷ ತಂಡಗಳನ್ನು ರಚಿಸಲಾಗಿದ್ದು, ಇನ್ನೂ ಆರೋಪಿಗಳ ಪತ್ತೆಯಾಗಿಲ್ಲ. ಈಗಾಗಲೇ 12ಕ್ಕೂ ಹೆಚ್ಚು ಮಂದಿ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗಿದೆ. ಕೆಲವರ ವಿಚಾರಣೆಯಿಂದ ಕೆಲವೊಂದು ಸುಳಿವುಗಳ ಲಭ್ಯವಾಗಿದ್ದರೂ ಯಾವುದೂ ಅಂತಿಮಗೊಂಡಿಲ್ಲ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಹಿಂದೂ ಸಂಘಟನೆಗಳಿಂದ ಎನ್ಐಎಗೆ ವಹಿಸಲು ಒತ್ತಡ
ಈ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸಬೇಕೆಂದು ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ಆಗ್ರಹಿಸಿದ್ದು, ಸಂಸದ ಹಾಗೂ ಬಿಜೆಪಿ ರಾಜ್ಯ ಅಧ್ಯಕ್ಷ ಬಿ. ಎಸ್. ಯಡಿಯೂರಪ್ಪ ನೇತೃತ್ವದ ಸಂಸದರ ನಿಯೋಗ ಜು. 18ರಂದು ದಿಲ್ಲಿಗೆ ತೆರಳಿ ಸಂಸತ್ ಭವನದ ಎದುರು ಪ್ರತಿಭಟನೆ ನಡೆಸಿ ಈ ಬಗ್ಗೆ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಿತ್ತು.
ದೇಶದ ಆಂತರಿಕ ಭದ್ರತೆಗೆ ಅಪಾಯ ತರುವ ಅಥವಾ ಭಯೋತ್ಪಾದಕ ಚಟುವಟಿಕೆಗಳಿಗೆ ಸಂಬಂಧಿಸಿದ ಪ್ರಕರಣಗಳ ತನಿಖೆಯನ್ನು ಸಾಮಾನ್ಯವಾಗಿ ಎನ್ಐಎಗೆ ವಹಿಸಲಾಗುತ್ತದೆ. ಆದರೆ ಕೇಂದ್ರ ಸರಕಾರವು ರಾಜ್ಯ ಸರಕಾರಗಳ ಅನುಮತಿ ಇಲ್ಲದೆ ನೇರವಾಗಿ ಪ್ರಕರಣಗಳನ್ನು ಎನ್ಐಎಗೆ ವಹಿಸುವಂತಿಲ್ಲ. ರಾಜ್ಯ ಸರಕಾರವು ಎನ್ಐಎಗೆ ವಹಿಸುವ ಬಗ್ಗೆ ನಿರ್ಣಯ ಕೈಗೊಂಡು ಕೇಂದ್ರ ಸರಕಾರಕ್ಕೆ ವರದಿ ಸಲ್ಲಿಸಬೇಕಾಗುತ್ತದೆ.
ಕರ್ನಾಟಕ ಸರಕಾರ ಈಗಾಗಲೇ ಶರತ್ ಪ್ರಕರಣದ ತನಿಖೆಯನ್ನು ಎನ್ಐಎಗೆ ವಹಿಸುವುದಿಲ್ಲ; ನಮ್ಮ ಪೊಲೀಸರು ತನಿಖೆ ನಡೆಸಲು ಸಮರ್ಥರಿದ್ದಾರೆ ಎಂದು ಹೇಳಿದೆ. ಆದರೆ ಕೊಲೆ ನಡೆದು 17 ದಿನಗಕಳೆದರೂ ಆರೋಪಿಗಳ ಪತ್ತೆಯಾದಿರುವ ಹಿನ್ನೆಲೆಯಲ್ಲಿ ಪ್ರಕರಣವನ್ನು ಎನ್ಐಎಗೆ ವಹಿಸುವಂತೆ ಒತ್ತಡಗಳು ಬರುತ್ತಿವೆ.