ಮಂಗಳೂರು: ಚುರುಮುರಿ ತಿನ್ನಿ, ಹಣ ಟ್ರಾನ್ಸ್ ಫರ್ ಮಾಡಿ
ಮಂಗಳೂರು, ಡಿಸೆಂಬರ್ 25: ಪ್ರಧಾನಿ ನರೇಂದ್ರ ಮೋದಿ ಕ್ಯಾಶ್ ಲೆಸ್ ಸಮಾಜದ ಪರಿಕಲ್ಪನೆಗೆ ಪೂರಕವಾಗಿ ಮಂಗಳೂರಿನ ಸಣ್ಣ ವ್ಯಾಪಾರಿಗಳೂ ನಗದುರಹಿತ ವ್ಯವಹಾರಕ್ಕೆ ಮುಂದಾಗುತ್ತಿದ್ದಾರೆ. ಈ ಬಗ್ಗೆ ಅಂತಹ ವ್ಯಾಪಾರಿಗಳಿಗೆ ತರಬೇತಿ ನಡೆಯುತ್ತಿರುವಾಗಲೇ ನಗರದ ಕಾರ್ ಸ್ಟ್ರೀಟ್ ರಥ ಬೀದಿಯ ಚುರುಮುರಿ ವ್ಯಾಪಾರಿ ಗೋಕುಲ್ ದಾಸ್ ಪ್ರಭು ಕ್ಯಾಶ್ ಲೆಸ್ ದುನಿಯಾಕ್ಕೆ ಮೊದಲ ಹೆಜ್ಜೆ ಇಟ್ಟಿದ್ದಾರೆ.
ರಥಬೀದಿ ವೆಂಕಟರಮಣ ದೇವಸ್ಥಾನದ ಬಳಿ ಕಳೆದ 15 ವರ್ಷಗಳಿಂದ ಕಾಮತ್ ಹೆಸರಿನ ಅಂಗಡಿಯಲ್ಲಿ ಚುರುಮುರಿ ವ್ಯಾಪಾರ ನಡೆಸುತ್ತಿರುವ ಗೋಕುಲ್ ದಾಸ್ ಪ್ರಭು ಅಧಿಕೃತವಾಗಿ ನಗದುರಹಿತ ವ್ಯವಹಾರಕ್ಕೆ ಮುಂದಡಿಯಿಟ್ಟಿದ್ದಾರೆ. ಇದಕ್ಕಾಗಿ ಕೆನರಾ ಬ್ಯಾಂಕ್ ನ ಇ - ಎಂಪವರ್ ಆಪ್ ಡೌನ್ ಲೋಡ್ ಮಾಡಿಕೊಂಡಿದ್ದಾರೆ. ಯಾವುದೇ ರಾಷ್ಟ್ರೀಕೃತ ಬ್ಯಾಂಕ್ ನ ಆಪ್ ನಿಂದ ಇದಕ್ಕೆ ಹಣ ಕಳುಹಿಸಲು ಸಾಧ್ಯ.[ಇನ್ಮುಂದೆ ಮಂಡ್ಯದ ಹೊಸಹೊಳಲು ಕ್ಯಾಷ್ ಲೆಸ್ ಗ್ರಾಮ!]
ನಗದುರಹಿತ ವ್ಯಾಪಾರಕ್ಕೆ ಮುಂದಾಗಿರುವುದರ ಬಗ್ಗೆ ಒನ್ ಇಂಡಿಯಾಗೆ ಪ್ರತಿಕ್ರಿಯಿಸಿದ ಗೋಕುಲ್ ದಾಸ್, ಕೆಲ ದಿನಗಳ ಹಿಂದೆ ಸೇವಾಂಜಲಿ ಪ್ರತಿಷ್ಠಿತ ಮತ್ತು ಯುವ ಬ್ರಿಗೇಡ್ ಆಯೋಜಿಸಿದ್ದ ಕ್ಯಾಶ್ ಲೆಸ್ ದುನಿಯಾ ಕಾರ್ಯಕ್ರಮಕ್ಕೆ ಹೋಗಿ ಆಪ್ ಬಳಕೆ ಮಾಡುವುದು ಹೇಗೆಂದು ತಿಳಿದುಕೊಂಡೆ. ಅ ನಂತರ ಇಬ್ಬರು ಯುವಕರು ಬಂದು ಆಪ್ ಬಳಕೆಯ ಬಗ್ಗೆ ಸಂಪೂರ್ಣ ಮಾಹಿತಿ ನೀಡಿದರು ಎಂದು ತಿಳಿಸಿದರು.