ಮಂಗಳೂರು ಬಂದರು ಅಭಿವೃದ್ಧಿಗೆ ಕೇಂದ್ರದ ಅಸಹಕಾರ
ಮಂಗಳೂರು, ಆಗಸ್ಟ್ 28 : 'ಮಂಗಳೂರು ಮೀನುಗಾರಿಕಾ ಬಂದರು ಅಭಿವೃದ್ದಿ ಯೋಜನೆಯ ಮೂರನೇ ಹಂತದ ಕಾಮಗಾರಿಗೆ ಕೇಂದ್ರ ಮೀನುಗಾರಿಕಾ ಇಲಾಖೆಯು 33 ಕೋಟಿ ರೂ. ಅನುದಾನ ಬಿಡುಗಡೆಗೆ ವಿಳಂಬ ಮಾಡುತ್ತಿದೆ' ಎಂದು ಮೀನುಗಾರಿಕೆ ಮತ್ತು ಬಂದರು ಸಚಿವ ಪ್ರಮೋದ್ ಮಧ್ವರಾಜ್ ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳೂರು ಮೀನುಗಾರಿಕಾ ಬಂದರಿಗೆ ಶುಕ್ರವಾರ ಭೇಟಿ ನೀಡಿದ ಬಳಿಕ ಮಾತನಾಡದಿ ಅವರು, 'ಹೊಯ್ಗೆ ಬಜಾರ್ ಸಂಪರ್ಕ ರಸ್ತೆ ಅಭಿವೃದ್ದಿ, ಬೀದಿ ದೀಪಗಳ ಅಳವಡಿಕೆ ಕುಡಿಯುವ ನೀರಿನ ಪೂರೈಕೆ ಮತ್ತಿತರ ಕಾಮಗಾರಿಗಳು ಮೂರನೇ ಹಂತದಲ್ಲಿ ಸೇರಿವೆ. ಕೇಂದ್ರ ಸರ್ಕಾರ ಬಾಕಿ ಅನುದಾನ ಬಿಡುಗಡೆ ಮಾಡಿದರೆ ಕಾಮಗಾರಿಗೆ ವೇಗ ನೀಡಲು ಸಾಧ್ಯವಾಗುತ್ತದೆ' ಎಂದರು.[ಕರ್ನಾಟಕ ಬಜೆಟ್: ನಿಮ್ಮ ಜಿಲ್ಲೆಗೆ ಯಾವ ಭಾಗ್ಯ ಸಿಕ್ತು?]
'ಈಗ ಮೀನುಗಾರಿಕೆಗೆ ತೊಂದರೆ ಆಗುವುದನ್ನು ತಪ್ಪಿಸಲು ರಾಜ್ಯದ ಅನುದಾನ ಬಳಸಿಕೊಂಡು ಕೆಲವು ತುರ್ತು ಕಾಮಗಾರಿ ಕೈಗೊಳ್ಳುವ ಸಂಬಂಧ ವರದಿ ಸಿದ್ಧಪಡಿಸುವಂತೆ ಇಂಜಿನಿಯರ್ಗಳಿಗೆ ಸೂಚಿಸಲಾಗಿದೆ' ಎಂದರು.['ಕರಾವಳಿಯ ಬಂದರು ಅಭಿವೃದ್ಧಿಗೆ 92 ಕೋಟಿ ಯೋಜನೆ']
'230 ಕೋಟಿ ವೆಚ್ಚದಲ್ಲಿ ಕುಲಾಯಿ ಮೀನುಗಾರಿಕಾ ಬಂದರು ಅಭಿವೃದ್ದಿಗೆ ಯೋಜನೆ ರೂಪಿಸಲಾಗಿತ್ತು. ಕೇಂದ್ರ ಸರ್ಕಾರ ಶೇ. 50 ರಷ್ಟು ಮತ್ತು ಕೇಂದ್ರ ಬಂದರು ಇಲಾಖೆ ಶೇ. 30 ರಷ್ಟು ಮತ್ತು ರಾಜ್ಯ ಸರ್ಕಾರ ಶೇ. 20 ರಷ್ಟು ವೆಚ್ಚ ಭರಿಸುವ ತೀರ್ಮಾನ ಮಾಡಲಾಗಿತ್ತು' ಎಂದು ಸಚಿವರು ವಿವರಣೆ ನೀಡಿದರು.
'ಕೇಂದ್ರ ಸರ್ಕಾರ ತನ್ನ ಒಟ್ಟೂ ಅನುದಾನವನ್ನು ಶೇ. 50ಕ್ಕೆ ಮಿತಿಗೊಳಿಸುವ ತೀರ್ಮಾನಕ್ಕೆ ಬಂದಿದೆ. 115 ಕೋಟಿಯಷ್ಟು ದೊಡ್ಡ ಮೊತ್ತವನ್ನು ಭರಿಸಲು ರಾಜ್ಯ ಸರ್ಕಾರಕ್ಕೆ ಅಸಾಧ್ಯವಾಗಿದ್ದು, ಯೋಜನೆಗೆ ತೊಡಕು ಉಂಟಾಗಿದೆ' ಎಂದು ಸಚಿವರು ಹೇಳಿದರು.
'ವೆಚ್ಚ ಹಂಚಿಕೆ ಯೋಜನೆಗಳಲ್ಲಿ ಕೇಂದ್ರ ಸರಕಾರದ ಪಾಲನ್ನು ಶೇ. 75 ರಿಂದ ಶೇ. 50ಕ್ಕೆ ಕಡಿತ ಮಾಡುವ ಕೇಂದ್ರದ ತೀರ್ಮಾನ ಅಪಾಯಕಾರಿಯಾದುದು. ಇದರಿಂದ ರಾಜ್ಯಗಳ ಮೇಲೆ ಹೊರೆ ಹೆಚ್ಚಲಿದೆ. ದೆಹಲಿಗೆ ಮುಂದಿನ ತಿಂಗಳು ನಿಯೋಗ ಕರೆದೊಯ್ದ ಸಂದರ್ಭದಲ್ಲಿ ಅನುದಾನದ ಪ್ರಮಾಣ ಕಡಿತಕ್ಕೆ ರಾಜ್ಯದ ವಿರೋಧ ವಿರುವುದನ್ನು ತಿಳಿಸಲಾಗುವುದು' ಎಂದರು.