ಪ್ರೀತಿಸಿದ ಯುವತಿಯನ್ನು ಕೊಂದು, ಯುವಕ ಆತ್ಮಹತ್ಯೆ
ಮಂಗಳೂರು, ಜನವರಿ 4: ಪ್ರೀತಿಸಿದ ಯುವತಿಯನ್ನು ಚೂರಿಯಿಂದ ಇರಿದು ಕೊಂದ ಯುವಕನೊಬ್ಬ ತಾನೂ ಆತ್ಮಹತ್ಯೆ ಮಾಡಿಕೊಂಡ ಘಟನೆ ಕೊಯ್ಲ ತಾಲೂಕಿನ ಪಾಂಡವಗುಡ್ಡೆಯಲ್ಲಿ ನಡೆದಿದೆ. ಬಂಟ್ವಾಳದ ಪುದನಗುಡ್ಡೆಯ ನಿವಾಸಿ ದಿವ್ಯಾ (23) ಕೊಲೆಗೀಡಾದ ಯುವತಿ ಎಂದು ಗುರುತಿಸಲಾಗಿದೆ.
ಇನ್ನು ಯುವತಿಯನ್ನು ಕೊಲೆ ಮಾಡಿದ ನಂತರ ತಾನೂ ಆತ್ಮಹತ್ಯೆ ಮಾಡಿಕೊಂಡ ಯುವಕ ಕೊಯ್ಲದ ಕುಡಮಾಣಿ ನಿವಾಸಿ ಮೋಹನ ಪೂಜಾರಿ ಅವರ ಮಗ ಸುಜಿತ್ (28). ಈ ಇಬ್ಬರೂ 3 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ ಯುವತಿಯು ಇತ್ತೀಚೆಗೆ ಪ್ರೀತಿಯನ್ನು ನಿರಾಕರಿಸಿ, ಹುಡುಗನಿಂದ ದೂರವಾಗಿದ್ದಳು.[ಮರಕ್ಕೆ ನೇಣು ಬಿಗಿದುಕೊಂಡು ಪ್ರಿಯಕರನೊಂದಿಗೆ ವಿವಾಹಿತೆ ಆತ್ಮಹತ್ಯೆ]
ಇದರಿಂದ ಕ್ರುದ್ಧಗೊಂಡ ಯುವಕನು ಯುವತಿಯನ್ನು ಪಾಂಡವಗುಡ್ಡೆಗೆ ಕರೆದುಕೊಂಡು ಹೋಗಿ, ಚೂರಿಯಿಂದ ಇರಿದು ಕೊಲೆ ಮಾಡಿದ್ದಾನೆ. ಆ ಬಳಿಕ ಪಕ್ಕದಲ್ಲಿರುವ ಗೇರು ಮರಕ್ಕೆ ನೇಣು ಹಾಕಿಕೊಂಡು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಘಟನಾ ಸ್ಥಳಕ್ಕೆ ಬಂಟ್ವಾಳ ಸರ್ಕಲ್ ಇನ್ ಸ್ಪೆಕ್ಟರ್ ಮಂಜಯ್ಯ, ಸಬ್ ಇನ್ ಸ್ಪೆಕ್ಟರ್ ಎ.ಕೆ.ರಕ್ಷಿತ್ ಗೌಡ ಮತ್ತು ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಜಿಲ್ಲಾ ಪೊಲೀಸ್ ವರಿಷ್ಥಾಧಿಕಾರಿ ಕೂಡ ಸ್ಥಳಕ್ಕೆ ಭೇಟಿ ನೀಡಿದ್ದಾರೆ.