ಪವಿತ್ರ ಕ್ಷೇತ್ರ ಮಕ್ಕಾದಲ್ಲಿ ಕರ್ನಾಟಕ ಸಂಘದಿಂದ ರಕ್ತದಾನ
ಮುಸ್ಲಿಂರ ಪವಿತ್ರ ಕ್ಷೇತ್ರ ಮಕ್ಕಾ ಮದೀನಾದಲ್ಲಿ ಕರ್ನಾಟಕ ಕಲ್ಚರಲ್ ಫೌಂಡೇಷನ್ ಕೆಸಿಎಫ್ ರಕ್ತದಾನ ಶಿಬಿರವನ್ನು ಹಮ್ಮಿಕೊಂಡಿತ್ತು. ಕರ್ನಾಟಕದ ಸಚಿವ ಯುಟಿ ಖಾದರ್ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮಕ್ಕಾ, ಫೆಬ್ರವರಿ 18 : ಕರ್ನಾಟಕ ಕಲ್ಚರಲ್ ಫೌಂಡೇಶನ್ ಕೆ.ಸಿ.ಎಫ್ ಡೇ ಪ್ರಯುಕ್ತ ಮಕ್ಕತುಲ್ ಮುಕರ್ರಮಃ ಸೆಕ್ಟರ್ ವತಿಯಿಂದ ರಕ್ತದಾನ ಶಿಬಿರ ಮಕ್ಕಾದ ಕಿಂಗ್ ಅಬ್ದುಲ್ ಅಝೀಝ್ ಹಾಸ್ಪಿಟಲ್ ಝಾಹಿರ್ ನಲ್ಲಿ ಇತೀಚೆಗೆ ಆಯೋಜಿಸಲಾಯಿತು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕರ್ನಾಟಕ ರಾಜ್ಯ ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಯು.ಟಿ ಖಾದರ್, ಈ ಪವಿತ್ರ ಭೂಮಿಯಲ್ಲಿ ಉದ್ಯೋಗ ಮಾಡಲು ದೊರಕಿದ ಸದಾವಕಾಶವನ್ನು ಬಳಸಿ ಕೆ.ಸಿ.ಎಫ್ ಎಂಬ ಸಂಘಟನೆಯನ್ನು ಕಟ್ಟಿಕೊಂಡಿರುವುದು ಸಂಸತದ ಸಂಗತಿ ಎಂದರು.
ಸಂಘಟನೆಯ ಮೂಲಕ ಮಹತ್ವ ಪೂರ್ಣವಾದ ಕಾರ್ಯಗಳನ್ನು ನಡೆಸುತ್ತಾ ಬಂದಿರುವುದು, ತಾಯಿನಾಡಿನಲ್ಲೂ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕಾರ್ಯಗಳಲ್ಲಿ ಸಹಕರಿಸುತ್ತಾ ಅನಾಥ, ನಿರ್ಗತಿಕರ ಕಣ್ಣೀರೊರೆಸುವ ಕಾರ್ಯಗಳಲ್ಲಿ ಕೆಸಿಎಫ್ ಮುಂದಾಗಿರುವುದು ನಿಜಕ್ಕೂ ಶ್ಲಾಘನೀಯ ಎಂದು ಖಾದರ್ ಬೆನ್ನುತಟ್ಟಿದರು.
ಅನ್ನದಾನ, ಶಿಕ್ಷಣ ಇವುಗಳಿಗಿಂತ ಅತ್ಯಂತ ಮಹತ್ವದ್ದಾಗಿದೆ ರಕ್ತದಾನ ಎಂಬುವುದು. ಅನ್ನವು ಸರಕಾರದಿಂದಲೇ ದಾನವಾಗಿ ಲಭಿಸಿದರೆ, ಶಿಕ್ಷಣ ಸೈಬರ್ ಕೇಂದ್ರಗಳಲ್ಲಿ ಹೇರಳವಾಗಿ ದೊರೆಯಬಹುದು, ಆದ್ರೆ ರಕ್ತವು ಈ ರೀತಿ ಲಭಿಸದು. ಇದನ್ನು ಆಯೋಜಿಸಿದ ಕೆಸಿಎಫ್ ನಿಜಕ್ಕೂ ಅಭಿನಂದನಾರ್ಹ. ಇನ್ನು ಮುಂದಕ್ಕೂ ಕೆಸಿಎಫ್ ಮಾದರಿಯೋಗ್ಯ ಸಂಘಟನೆಯಾಗಿ ಬೆಳೆದು ಬರಲಿ ಎಂದು ಹಾರೈಸಿ ರಕ್ತ ತಪಾಸಣೆ ಮಾಡುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು.
ಬಳಿಕ ದಾರುಲ್ ಉಲೂಮ್ ರಹ್ಮಾನಿಯ ಪ್ರಿನ್ಸಿಪಾಲ್ ಬಿ.ಎ ಇಬ್ರಾಹೀಮ್ ಸಖಾಫಿ ದಾವಣಗೆರೆ ಮಾತನಾಡಿ, ಧಾರ್ಮಿಕ ಮತ್ತು ಶೈಕ್ಷಣಿಕ ಬೆಳವಣಿಗೆಯಲ್ಲಿ ಹಿಂದುಳಿದ ಉತ್ತರ ಕರ್ನಾಟಕವನ್ನು ಪ್ರತೇಕವಾಗಿ ಗಮನವಿಟ್ಟು ಹಾಗೂ ಹಜ್ ಸಂದರ್ಭದಲ್ಲಿ ಸ್ವಯಂಸೇವಕರಾಗಿ ಕಾರ್ಯಚರಿಸುತ್ತಾ ಬಂದಿರುವ ಕೆ.ಸಿ.ಎಫ್ ಎಂಬ ಸಂಘಟನೆಯನ್ನು ಬಿಟ್ಟು ಬೇರೆ ಯಾವ ಸಂಘಟನೆಯು ಕೊಲ್ಲಿ ರಾಷ್ಟದಲ್ಲಿ ಕಾಣಲು ಸಾಧ್ಯವಿಲ್ಲ. ಇಸ್ಲಾಮಿನಲ್ಲಿ ರಕ್ತವನ್ನು ಯಾವತ್ತೂ ವ್ಯಾಪಾರ ಮಾಡಬಾರದು ಅದನ್ನು ದಾನವಾಗಿ ಕೊಡಬಹುದೆಂದು ನಮ್ಮ ಉಲಾಮಗಳು ಅಭಿಪ್ರಾಯ ಪಟ್ಟಿದ್ದಾರೆ ಎಂದು ಹೇಳಿ ಕೆ.ಸಿ.ಎಫ್ ಸೇವೆಯನ್ನು ಅಭಿನಂದಿಸಿ ಶುಭ ಹಾರೈಸಿದರು.
ನಂತರ ಕೆ.ಸಿ.ಎಫ್ ಮಕ್ಕಾ ಸೆಕ್ಟರಿನ 20 ಕಾರ್ಯಕರ್ತರು ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು ರಕ್ತದಾನ ಮಾಡಿದರು.
ಕೆ.ಸಿ.ಎಫ್ ಮಕ್ಕತುಲ್ ಮುಕರ್ರಮಃ ಅಧ್ಯಕ್ಷರು ಹನೀಫ್ ಸಖಾಫಿ ಬೊಳ್ಮಾರ್ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇಕ್ಬಾಲ್ ಕಕ್ಕಿಂಜೆ, ಕೋಶಾಧಿಕಾರಿ ಸುಲೈಮಾನ್ ಪಾದೆಕಲ್ಲು, ಶಿಕ್ಷಣ ವಿಭಾಗ ಕನ್ವೀನರ್ ಮುಸ್ತಾಕ್ ಸಾಗರ್, ಸಾಂತ್ವನ ವಿಭಾಗ ಕನ್ವೀನರ್ ಮೂಸಾ ಹಾಜಿ ಕಿನ್ಯ ಹಾಗೂ ಕೆ.ಸಿ.ಎಫ್ ಜಿದ್ದಾ ಝೋನ್ ಸಾರ್ವಜನಿಕ ಸಂಪರ್ಕ ಚೆರ್ಮೇನ್ ಇಬ್ರಾಹೀಮ್ ಕಿನ್ಯ, ಹಾಗೂ ಕೆ.ಸಿ.ಎಫ್ ಸದಸ್ಯರು ಮೊದಲಾದವರು ಉಪಸ್ಥಿತರಿದ್ದರು. [PICTURES: ಹಕೀಂ ಬೋಳಾರ್, ಮೆಕ್ಕಾ]