ಸರಣಿ ಹತ್ಯೆ: ಕೇರಳ ಸಿಎಂಗೆ ಬಿಜೆಪಿಯಿಂದ ಕಪ್ಪು ಬಾವುಟ ಪ್ರದರ್ಶನ
ಮಂಗಳೂರು, ಜನವರಿ. 20 : ಇಲ್ಲಿನ ಕಂಕನಾಡಿ ರೈಲ್ವೆ ಜಂಕ್ಷನ್ ನಿಲ್ದಾಣಕ್ಕೆ ಆಗಮಿಸಿದ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ವಿರುದ್ಧ ಬಿಜೆಪಿ ಕಾರ್ಯಕರ್ತರು ದಿಢೀರ್ ಪ್ರತಿಭಟನೆ ನಡೆಸಿ ಕಪ್ಪು ಬಾವುಟ ಪ್ರದರ್ಶಿಸಿ ಧಿಕ್ಕಾರ ಕೂಗಿದರು.
ಮಂಜೇಶ್ವರದಲ್ಲಿ ಗುರುವಾರ ನಡೆದ ಗಿಳಿವಿಂಡು ಕಾರ್ಯಕ್ರಮ ಉದ್ಘಾಟನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಬಳಿಕ ತಿರುವನಂತಪುರಂಗೆ ತೆರಳುತ್ತಿದ್ದ ವೇಳೆ ಸಿಎಂ ಪಿಣರಾಯಿ ವಿರುದ್ಧ ಏಕಾಏಕಿ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ರೈಲ್ವೆ ನಿಲ್ದಾಣದ ಹೊರಗೆ ಕಪ್ಪುಬಾವುಟ ಪ್ರದರ್ಶಿಸಿದರು.
ಕೇರಳದಲ್ಲಿ ರಾಜಕೀಯ ದ್ವೇಷದಿಂದ ಬಿಜೆಪಿ ಕಾರ್ಯಕರ್ತರನ್ನು ಸಿಪಿಎಂ ಮುಖಂಡರು ಕೊಲೆ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿ ಬಿಡುಗಡೆಗೊಳಿಸಿದರು.
ಮಂಗಳೂರು ನಗರ ದಕ್ಷಿಣ ಬಿಜೆಪಿ ಅಧ್ಯಕ್ಷ ವೇದವ್ಯಾಸ ಕಾಮತ್ ಮಾತನಾಡಿ, ಕೇರಳದಲ್ಲಿ ಅಮಾಯಕ ಬಿಜೆಪಿ ಮತ್ತು ಸಂಘ ಪರಿವಾರದ ಕಾರ್ಯಕರ್ತರ ಹತ್ಯೆಯಾಗುತ್ತಿದೆ. ಅದಕ್ಕೆ ಅಲ್ಲಿನ ಸಿಎಂ ಪಿಣರಾಯಿ ವಿಜಯನ್ ಮೌನ ಸಮ್ಮತಿ ಸೂಚಿಸುತ್ತಿದ್ದಾರೆ ಎಂದು ದೂರಿದರು.
ಈ ಸಂದರ್ಭದಲ್ಲಿ ಜಿತೇಂದ್ರ ಕೊಠಾರಿ, ಹರೀಶ್ ಪೂಂಜಾ, ಸಂದೀಪ್ ಶೆಟ್ಟಿ, ನಂದನ್ ಮಲ್ಯ, ಭಾಸ್ಕರ್ ಚಂದ್ರ ಶೆಟ್ಟಿ, ಹರೀಶ್ ಮೂಡುಶೆಡ್ಡೆ, ಗುರುಚರಣ್, ಸಂದೀಪ್ ಗರೋಡಿ, ಶಿವಾಜಿ ರಾವ್, ಕಿರಣ ಸಾಲಿಯಾನ್, ಗುರುಪ್ರಸಾದ್ ಕಾಮತ್ ಸಹಿತ 50ಕ್ಕೂ ಹೆಚ್ಚು ಬಿಜೆಪಿ ಮುಖಂಡರಿದ್ದರು.