ಮಂಗಳೂರು: ಬಿಜೆಪಿ ಕಾರ್ಯಕರ್ತನ ಮೇಲೆ ಹಲ್ಲೆ, ಇಂದು ಕಡಬ ಬಂದ್
ಪುತ್ತೂರು, ಜುಲೈ 17: ದಕ್ಷಿಣ ಕನ್ನಡದ ಕಡಬದಲ್ಲಿ ಬಿಜೆಪಿ ಯುವ ನಾಯಕರೊಬ್ಬರ ಮೇಲೆ ಭಾನುವಾರ ದುಷ್ಕರ್ಮಿಗಳು ಹಲ್ಲೆ ನಡೆಸಿದ್ದಾರೆ. ಈ ಹಿನ್ನಲೆಯಲ್ಲಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳು ಇಂದು ಕಡಬ ಬಂದ್ ಗೆ ಕರೆ ನೀಡಿವೆ.
ಕಡಬದ ಸ್ಥಳೀಯ ಸಿಎ ಬ್ಯಾಂಕಿನ ಉಪಾಧ್ಯಕ್ಷರಾದ ರಮೇಶ್ ಕಲ್ಪುರೆ (45) ಗಾಯಗೊಂಡ ವ್ಯಕ್ತಿಯಾಗಿದ್ದಾರೆ.
ರಮೇಶ್ ಭಟ್ ಕಲ್ಪುರೆ ಇಲ್ಲಿನ ಸ್ಥಳೀಯ ಅಂಗಡಿಯಿಂದ ಸಾಮಾನು ಖರೀದಿಸಿ ಮರಳಿ ಜೀಪು ಹತ್ತುವಾಗ 5 ಜನರ ತಂಡ ಬಂದು ಹಲ್ಲೆ ಮಾಡಿದೆ. ತಕ್ಷಣ ಸ್ಥಳೀಯರು ಸ್ಥಳಕ್ಕೆ ಧಾವಿಸಿದ್ದು ಹಲ್ಲೆ ಮಾಡಿದ ದುಷ್ಕರ್ಮಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.
ಸ್ಥಳೀಯರಾದ ಪ್ರಕಾಶ್, ಟೀನ್ಸನ್, ಸನೋಶ್, ಲಿಜೋ ಮತ್ತು ಸಂತೋಶ್ ರನ್ನು ಹಲ್ಲೆ ಮಾಡಿದ ಆರೋಪದಲ್ಲಿ ಪೊಲೀಸರು ಬಂಧಿಸಿಲಾಗಿದೆ.
ಹಲ್ಲೆಯ ತೀವ್ರತೆಗೆ ರಮೇಶ್ ಅವರ ಮೂಗು ಮತ್ತು ಎಡ ಕಣ್ಣಿಗೆ ಗಾಯವಾಗಿದ್ದು ಪುತ್ತೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನನ್ನ 55,000 ರೂಪಾಯಿ, ಚಿನ್ನದ ಚೈನು ಹಾಗೂ ಬ್ರೇಸ್ ಲೆಟ್ ನ್ನು ಹಲ್ಲೆಕೋರರು ಎಗರಿಸಿದ್ದಾರೆ ಎಂದು ರಮೇಶ್ ದೂರಿನಲ್ಲಿ ತಿಳಿಸಿದ್ದಾರೆ.
ಘಟನೆ ಬೆನ್ನಿಗೆ ಹಲ್ಲೆಕೋರರ ಬೆಂಬಲಿಗರು ಮತ್ತು ರಮೇಶ್ ಬೆಂಬಲಿಗರ ನಡುವೆ ಕಡಬ ಪೊಲೀಸ್ ಠಾಣೆಯಲ್ಲಿ ವಾಗ್ವಾದ ನಡೆದಿದೆ ಎಂದು ತಿಳಿದು ಬಂದಿದೆ. ನಂತರ ಪೊಲೀಸರು ಬೆಂಬಲಿಗರನ್ನು ಸ್ಥಳದಿಂದ ಕಳುಹಿಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತೆಗೆದುಕೊಂಡಿದ್ದಾರೆ.