ಗುರುವಾಯನಕೆರೆ ಬಳಿ ಹಿಟ್ & ರನ್: ವಾಕಿಂಗ್ ಹೋಗುತ್ತಿದ್ದ ಶಿಕ್ಷಕ ಸಾವು
ಮಂಗಳೂರು, ಡಿಸೆಂಬರ್. 20 : ಬೆಳ್ತಂಗಡಿ ತಾಲೂಕಿನ ಗುರುವಾಯನಕೆರೆಯಲ್ಲಿ ಮಂಗಳವಾರ ಬೆಳ್ಳಂಬೆಳಗ್ಗೆ ಹಿಟ್ & ರನ್ ಪ್ರಕರಣ ಜರುಗಿದೆ.
ಗುರುವಾಯನಕೆರೆ ಸಸ್ಯೋದ್ಯಾನ ನಿವಾಸಿ 48 ವರ್ಷದ ದಿನಕರ್ ಹೆಗ್ಡೆ ಎಂಬುವವರು ಬೆಳಗ್ಗೆ ವಾಕಿಂಗ್ ಎಂದು ಗುರುವಾಯನಕೆರೆ ಶೆಣೈ ಹೋಟೆಲ್ ಬಳಿ ದಿನಕರ್ ಹೋಗುತ್ತಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಎಸ್ಕೇಪ್ ಆಗಿದೆ. ಡಿಕ್ಕಿಯ ತೀವ್ರತೆಗೆ ದಿನಕರ್ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಡಿಕ್ಕಿ ಹೊಡೆದು ಪರಾರಿಯಾಗಿದ್ದ ಬಸ್ ಉಡುಪಿಯ ಮಲ್ಪೆಯಲ್ಲಿ ಪತ್ತೆಯಾಗಿದೆ. ಮುಂಡೂರು ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯೋಪಾಧ್ಯಾಯರಾಗಿ ದಿನಕರ್ ಕಾರ್ಯ ನಿರ್ವಹಿಸುತ್ತಿದ್ದರು. ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಡುಪಿಯಲ್ಲಿ ವಾಹನ ಪತ್ತೆ: ಕ್ಷಿಪ್ರ ಕಾರ್ಯಾಚರಣೆ ನಡೆಸಿದ ಪೊಲೀಸರು ಹಿಟ್ ಆಂಡ್ ರನ್ ನಡೆಸಿದ ವಾಹನವನ್ನ ಉಡುಪಿಯ ಮಲ್ಪೆಯಲ್ಲಿ ಪತ್ತೆಹಚ್ಚಿದ್ದಾರೆ. ಈ ವಾಹನ ಕೋಲಾರದಿಂದ ಮಕ್ಕಳ ಪ್ರವಾಸಕ್ಕೆಂದು ಹೊರಟ್ಟಿತ್ತು ಎಂದು ತಿಳಿದು ಬಂದಿದೆ.
ಚಾಲಕನ ನಿರ್ಲಕ್ಷ್ಯ ದಿಂದ ಈ ದುರ್ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ ಹಾಗೂ ಬಸ್ ಚಾಲಕನನ್ನು ವಶಪಡಿಸಿಕೊಂಡ ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.