ಬಂಟ್ವಾಳ ರಸ್ತೆ ವಿಸ್ತರಣೆ ಸಭೆ ಜನವರಿ 17ಕ್ಕೆ, ಈ ಬಾರಿ ಏನಾಗುತ್ತೋ?
ಮಂಗಳೂರು, ಜನವರಿ 1: ಕರಾವಳಿಯಲ್ಲಿ ಫುಟ್ಪಾತ್ ಇಲ್ಲದ ಏಕೈಕ ನಗರ ಅಂದರೆ ಬಂಟ್ವಾಳ. ಈ ಪೇಟೆಯ ರಸ್ತೆ ವಿಸ್ತರಣೆ ಆಗಬೇಕು ಎಂದು ನಗರ ವಾಸಿಗಳ ಬಹುಕಾಲದ ಬೇಡಿಕೆಯಾಗಿತ್ತು. ಭರತ್ಲಾಲ್ ಮೀನ ಜಿಲ್ಲಾಧಿಕಾರಿ ಆಗಿರುವಾಗ ಬಂಟ್ವಾಳ ನಗರ ರಸ್ತೆ ವಿಸ್ತರಣೆ ಮಾಡಿ, ಫುಟ್ಪಾತ್ ನಿರ್ಮಿಸಬೇಕು ಎಂದು ರಸ್ತೆ ಅತಿಕ್ರಮಿಸಿರುವ ಅಂಗಡಿಗಳನ್ನು ತೆರವುಗೊಳಿಸಿದ್ದರು.
ವಿಪರ್ಯಾಸವೆಂದರೆ ಆ ಕಾರ್ಯಾಚರಣೆ ಬೆನ್ನಲ್ಲೇ ಮೀನ ವರ್ಗಾವಣೆಗೊಂಡರು. ಹೀಗಾಗಿ ಬಂಟ್ವಾಳ ಪೇಟೆ ವಿಸ್ತರಣೆ ಪ್ರಸ್ತಾವ ನನೆಗುದಿಗೆ ಬಿದ್ದಿತು. ಪೊನ್ನುರಾಜ್ ಜಿಲ್ಲಾಧಿಕಾರಿಯಾಗಿ ಬಂದ ಬಳಿಕ ಮತ್ತೆ ಇದಕ್ಕೆ ಚಾಲನೆ ಸಿಕ್ಕಿತು. ಆ ವೇಳೆ ಬಂಟ್ವಾಳ ರಸ್ತೆ ವಿಸ್ತರಣೆ ಆಗಬಹುದು ಎಂಬ ನಿರೀಕ್ಷೆ ಮತ್ತೆ ಹುಟ್ಟಿತು.
ಜಿಲ್ಲಾಧಿಕಾರಿ ಡಾ.ಜಗದೀಶ್, ಕಳೆದ ನವೆಂಬರ್ ತಿಂಗಳಲ್ಲಿ ಬಂಟ್ವಾಳ ಪೇಟೆ ವಿಸ್ತರಣೆಗೆ ಸಂಬಂಧಿಸಿದಂತೆ ಎರಡು ಸರಣಿ ಸಭೆ ನಡೆಸಿದ್ದರು. ಇದಾದ ಬಳಿಕ ಕಾರ್ಯಪ್ರವೃತ್ತಗೊಂಡ ಬಂಟ್ವಾಳ ಲೋಕೋಪಯೋಗಿ ಹಾಗೂ ಸರ್ವೇ ಇಲಾಖೆ, ಸರಕಾರಿ ಸ್ಥಳವನ್ನು ಅತಿಕ್ರಮಣಗೊಳಿಸಿರುವ ಅಂಗಡಿಗಳನ್ನು ಗುರುತು ಮಾಡಿತ್ತು.[ಹೆದ್ದಾರಿ ಪ್ರಾಧಿಕಾರ ಅಧಿಕಾರಿಗಳ ವಿರುದ್ಧ ರಮಾನಾಥ ರೈ ಗರಂ]
15 ದಿನದ ಗಡುವು: ಇದಾದ ಕೆಲವೇ ದಿನಗಳಲ್ಲಿ ಲೋಕೋಪಯೋಗಿ ಇಲಾಖೆ, ಸ್ವಯಂ ಪ್ರೇರಿತವಾಗಿ 15 ದಿನದ ಒಳಗೆ ಅಂಗಡಿಗಳನ್ನು ತೆರವುಗೊಳಿಸುವಂತೆ ಗಡುವು ನೀಡಿತ್ತು. 15 ಕಳೆದರೂ ಲೋಕೋಪಯೋಗಿ ಇಲಾಖೆ ಮಾತ್ರ ತೆರವು ಕಾರ್ಯಾಚರಣೆಗೆ ಮುಂದಾಗಿರಲಿಲ್ಲ. ಇದಾದ ಬೆನ್ನಲ್ಲೇ ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಉಪಸ್ಥಿತಿಯಲ್ಲಿ ಜಿಲ್ಲಾಧಿಕಾರಿ ಕಚೇರಿಯಲ್ಲೇ ಕಳೆದ ವಾರ ಅಧಿಕಾರಿಗಳ ಸಭೆಯೊಂದು ನಡೆದಿತ್ತು.
ಇದರಲ್ಲಿ ಬಂಟ್ವಾಳ ಪೇಟೆಯ ವಿಸ್ತರಣೆಗೆ ಮುನ್ನ ಇಲ್ಲಿನ ವರ್ತಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಅವರೊಂದಿಗೆ ಚರ್ಚಿಸಿ ಮುಂದುವರಿಯುವಂತೆ ಸಚಿವರು ಅಧಿಕಾರಿಗಳಿಗೆ ಆದೇಶಿಸಿದ್ದರು. ಸಚಿವರ ಸೂಚನೆಯ ಮೇರೆಗೆ ಮಂಗಳೂರು ಸಹಾಯಕ ಆಯುಕ್ತ ರೇಣುಕಾಪ್ರಸಾದ್ ಅಧ್ಯಕ್ಷತೆಯಲ್ಲಿ ಶುಕ್ರವಾರ ಬಂಟ್ವಾಳ ಪ್ರವಾಸಿ ಮಂದಿರದಲ್ಲಿ ಬೆರಳೆಣಿಕೆಯ ವರ್ತಕರನ್ನು ಸೇರಿಸಿ ರಹಸ್ಯ ಸಭೆಯೊಂದು ನಡೆದಿತ್ತು.[ಜನವರಿ 3 ರಿಂದ ಬೆಂಗಳೂರು-ಮಂಗಳೂರು ಶಿರಾಡಿ ಘಾಟ್ ಬಂದ್]
ಈ ಸಭೆಗೆ ಪುರಸಭೆಯ ಸ್ಥಳೀಯ ಸದಸ್ಯರನ್ನು ಕರೆಯದೆ ಕಡೆಗಣಿಸಲಾಗಿತ್ತು. ಪುರಸಭಾಧ್ಯಕ್ಷ ರಾಮಕೃಷ್ಣ ಆಳ್ವ, ಉಪಾಧ್ಯಕ್ಷ ಮಹಮ್ಮದ್ ನಂದರಬೆಟ್ಟು, ಮಂಗಳೂರು ಯೋಜನಾ ನಿರ್ದೇಶಕ ಪ್ರಸನ್ನ, ಬಂಟ್ವಾಳ ತಹಶೀಲ್ದಾರ್ ಪುರಂದರ ಹೆಗ್ಡೆ, ಮುಖ್ಯಾಧಿಕಾರಿ ಸುಧಾಕರ್, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಅರುಣ್ ಪ್ರಕಾಶ್, ಸರ್ವೇ ಇಲಾಖೆಯ ಸೂಪರ್ವೈಸರ್ ಅಹ್ಮದ್, ಕಂದಾಯ ಇಲಾಖೆಯ ಗ್ರಾಮ ಕರಣಿಕರಾದ ಜನಾರ್ದನ್, ಯೋಗಾನಂದ, ತೌಫಿಕ್ ಈ ಸಭೆಯಲ್ಲಿ ಉಪಸ್ಥಿತರಿದ್ದರು.
ಜನವರಿ 17 ಕ್ಕೆ ಸಭೆ: ಈ ಸಭೆಯಲ್ಲಿ ಹಾಜರಿದ್ದ ವರ್ತಕರ ಸಂಘದ ಕೆಲವು ಪ್ರಮುಖರು ತಾವು ಎಲ್ಲ ವರ್ತಕರನ್ನು ಸೇರಿಸಿ ಸಭೆ ನಡೆಸುವ ಮೂಲಕ ಒಂದು ತೀರ್ಮಾನಕ್ಕೆ ಬಂದು, ಬಳಿಕ ಮುಂದಿನ ಸಭೆಯಲ್ಲಿ ನಿರ್ಧಾರವನ್ನು ತಿಳಿಸುವುದಾಗಿ ಹೇಳಿದ್ದರು. ಹೀಗಾಗಿ ಇದೇ ಜನವರಿ 17 ರಂದು ಮತ್ತೆ ಸಭೆಯನ್ನು ನಡೆಸಲು ನಿರ್ಧರಿಸಲಾಗಿದ್ದು, ಅಂದು ವರ್ತಕರು ತಮ್ಮ ಅಭಿಪ್ರಾಯ ಮಂಡಿಸಲಿದ್ದಾರೆ.