ಮೇಟಿ ಲೈಂಗಿಕ ಹಗರಣ, ಸರ್ಕಾರಕ್ಕೆ ಸಂಬಂಧವಿಲ್ಲ: ಗುಂಡೂರಾವ್
ಮಂಗಳೂರು, ಡಿಸೆಂಬರ್. 15 : ಮಾಜಿ ಸಚಿವ ಹೆಚ್ ವೈ ಮೇಟಿ ಲೈಂಗಿಕ ಹಗರಣ ಮೇಟಿಯವರ ವೈಯುಕ್ತಿಕ ವಿಚಾರವಾಗಿದ್ದು ಸರಕಾರಕ್ಕೆ ಸಂಬಂಧಿಸಿದ್ದಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಸರಕಾರಕ್ಕೆ ಹಾಗೂ ಮೇಟಿ ಸಂಬಂಧವಿಲ್ಲ ಎಂಬಂತೆ ಹೇಳಿದರು.
ಗುರುವಾರ ಬಂಟ್ವಾಳ ತಾಲೂಕಿನ ಕಳ್ಳಿಗೆಯಲ್ಲಿ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ದಿನೇಶ್ ಗುಂಡೂರಾವ್ ಅವರು, ಮೇಟಿ ಪ್ರಕರಣ ನೋವು ತಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರೂ ನೋವು ವ್ಯಕ್ತಪಡಿಸಿದ್ದಾರೆ. ಆದರೆ, ಇದು ಮೇಟಿ ಅವರ ವೈಯುಕ್ತಿಕ ವಿಚಾರವಾಗಿದ್ದು ಸರಕಾರಕ್ಕೆ ಸಂಬಂಧಿಸಿದ್ದಲ್ಲ ಎಂದರು. [ಮತ್ತಷ್ಟು ಪುಢಾರಿಗಳ ರಾಸಲೀಲೆ ಬಯಲಾಗಲಿ : ಪೂಜಾರಿ]
ಸಚಿವ ಬಿ.ರಮಾನಾಥ ರೈ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಈಗಾಗಲೇ ರಾಸಲೀಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೇಟಿಯವರಿಂದ ರಾಜೀನಾಮೆ ಪಡೆದುಕೊಂಡಾಗಿದೆ. ಇದಕ್ಕೂ ಸರಕಾರದ ಆಡಳಿತಕ್ಕೂ ಸಂಬಂಧ ಇಲ್ಲ ಎಂದು ಅವರು ಸ್ಪಷ್ಟಪಡಿಸಿದರು.
ಮುಂಬರುವ ಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಈಗಾಗಲೇ ತಯಾರಿ ನಡೆಯುತ್ತಿದೆ. ವಿವಿಧೆಡೆಗಳಲ್ಲಿ ಸಮಾವೇಶಗಳನ್ನು ಸಂಘಟಿಸಲಾಗುತ್ತಿದ್ದು ಕಾಂಗ್ರೆಸ್ ಸರಕಾರ ಸಾಧನೆ ಬಗ್ಗೆ ಪ್ರಚಾರ ಇದರ ಉದ್ದೇಶವಾಗಿದೆ.
ರಾಜ್ಯ ಸರಕಾರ ಹಲವಾರು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದರೂ ಅವುಗಳಿಗೆ ಸಾಕಷ್ಟು ಪ್ರಚಾರು ದೊರೆತಿಲ್ಲ ಎಂದು ಹೇಳಿದರು.