ಕಾಶ್ಮೀರದಿಂದ ಶಬರಿಮಲೆಗೆ ಪಾದಯಾತ್ರೆ ಹೊರಟ ಬಂಟ್ವಾಳದ ವ್ರತಧಾರಿ
ಕಾಶ್ಮೀರದ ವೈಷ್ಣೋದೇವಿ ಕ್ಷೇತ್ರದಿಂದ ಶಬರಿಮಲೆಗೆ ಪಾದಯಾತ್ರೆ ಹೊರಟಿರುವ ಬಂಟ್ವಾಳ ಮೂಲದ ನವೀನ್ ಎನ್ನುವ ಅಯ್ಯಪ್ಪ ವ್ರತಧಾರಿ ಮಂಗಳೂರಿನ ತೊಕ್ಕೊಟ್ಟಿಗೆ ಬಂದು ತಲುಪಿದ್ದಾರೆ.
ಮಂಗಳೂರು, ಜನವರಿ. 04 : ಬಂಟ್ವಾಳ ತಾಲೂಕಿನ ಕುರ್ನಾಡುವಿನ ನವೀನ್ ಎನ್ನುವ ಅಯ್ಯಪ್ಪ ಸ್ವಾಮಿ ವ್ರತಧಾರಿ ಕಳೆದ ಹತ್ತು ವರ್ಷಗಳಿಂದಲೂ ನಿರಂತರವಾಗಿ ವಿವಿಧ ಪುಣ್ಯ ಕ್ಷೇತ್ರಗಳಿಂದ ಶಬರಿಮಲೆಗೆ ಪಾದಾಯಾತ್ರೆಗಳನ್ನು ಕೈಗೊಳ್ಳುತ್ತಾ ಬಂದಿದ್ದಾರೆ.
ಶಿರಡಿ ಸಾಯಿಬಾಬಾ, ಕೊಲ್ಲೂರು ಮೂಕಾಂಬಿಕೆ, ತಿರುಪತಿ, ಸೇರಿದಂತೆ ನಾನಾ ಕಡೆಗಳಿಂದ ನಿರಂತರ 10 ವರ್ಷ ಶಬರಿಮಲೆಗೆ ಪಾದಾಯಾತ್ರೆ ನಡೆಸಿ ಅಯ್ಯಪ್ಪನ ದರ್ಶನ ಪಡೆಯುತ್ತ ಬಂದಿದ್ದಾರೆ.
ಈ ಬಾರಿ ಅಕ್ಟೋಬರ್ 29ರಿಂದ ಜಮ್ಮು ಕಾಶ್ಮೀರದ ವೈಷ್ಣೋದೇವಿಯಿಂದ ಶಬರಿಮಲೆ ಯಾತ್ರೆ ಕೈಗೊಂಡು ಸುಮಾರು 3,500 ಕಿ.ಮೀ ದಾರಿಯನ್ನು ಪಾದಾಯಾತ್ರೆ ಮುಖಾಂತರ ಕ್ರಮಿಸಲು ಮುಂದಾಗಿರುವ ಇವರು ಮಂಗಳವಾರದಂದು ತೊಕ್ಕೊಟ್ಟಿಗೆ ಬಂದು ತಲುಪಿದರು.
ಈ ವೇಳೆ ದೇರಳಕಟ್ಟೆ ಅಯ್ಯಪ್ಪ ಸ್ವಾಮಿ ಮಂದಿರದ ಅಯ್ಯಪ್ಪ ಮಾಲಾಧಾರಿಗಳು ಸೇರಿದಂತೆ ಅನೇಕರು ನವೀನ್ ಅವರ ಆಶೀರ್ವಾದ ಪಡೆದರು. ಇನ್ನು ಗುರು ಸ್ವಾಮಿಗಳಾದ ವಿಶ್ವನಾಥ ಕಾಯರ್ ಪಳಿಕೆ ಅವರು ನವೀನ್ ಅವರ ಪಾದಪೂಜೆ ನೆರವೇರಿಸಿ ಮಂಗಳಾರತಿ ಎತ್ತಿದರು.
ನೋಟ್ ಬ್ಯಾನ್ ಸಂಕಷ್ಟದಲ್ಲಿ ನೆರವಾದರು: ನವೀನ್ ಅವರು ಕಳೆದ ಅಕ್ಟೋಬರ್ ತಿಂಗಳ 29ನೇ ತಾರೀಖಿನಂದು ವೈಷ್ಣೋದೇವಿ ಕ್ಷೇತ್ರದಿಂದ ಪಾದಾಯಾತ್ರೆ ಹೊರಟಿದ್ದು, ಯಾತ್ರೆಯ ಸಂಧರ್ಭ ಕೇಂದ್ರದ ನೋಟ್ ಬ್ಯಾನ್ ನಿಂದಾಗಿ ಸಂಕಷ್ಟಕ್ಕೊಳಗಾಗಿದ್ದರು.
ದಾರಿಯಲ್ಲಿ ಸಾಗುತ್ತಿದ್ದ ವೇಳೆ ದೇವಸ್ಥಾನದ ಅರ್ಚಕರೊಬ್ಬರು ನವೀನ್ ಅವರ ಸಂಕಷ್ಟವನ್ನು ತಿಳಿದು ಎರಡು ಸಾವಿರ ರೂಪಾಯಿಯ ಚಿಲ್ಲರೆಯನ್ನು ನೀಡಿ ಸಹಕರಿಸಿದ್ದರು.
ಹಾಗೆ ಮುಂದೆ ಪೆಟ್ರೋಲ್ ಬಂಕ್ ಗಳಲ್ಲಿ ಐನೂರು ರೂಪಾಯಿಗಳ ಚಿಲ್ಲರೆಯನ್ನು ಪಡೆಯುತ್ತಾ ಸಾಗಿದರು. ಸಮಸ್ಯೆಗಳೆಲ್ಲವೂ ಅಯ್ಯಪ್ಪ ಸ್ವಾಮಿ ಮತ್ತು ಗುರುಸ್ವಾಮಿಗಳ ದಯೆಯಿಂದ ಎಲ್ಲಾ ತೊಂದರೆಗಳು ತನ್ನಷ್ಟಕ್ಕೇ ದೂರವಾದವು ಎಂದರು.
ದೆಹಲಿಯ ಯೋಧ ತಿಲಕ್ ಎಂಬುವರು ತನಗೆ ಆರ್ಥಿಕವಾಗಿ ತುಂಬಾನೆ ಸಹಾಯ ಮಾಡಿ ಯಾತ್ರೆ ಯುದ್ಧಕ್ಕೂ ಫೋನ್ ಮೂಲಕ ಕುಶಲೋಪರಿ ವಿಚಾರಿಸುತ್ತಾ ಇದ್ದಾರೆ ಎಂದು ಯೋಧ ತಿಲಕ್ ಅವರನ್ನು ನೆನೆದರು.
ಅಪರಿಚಿತರು ನೂರರ 6 ನೋಟು ಕೊಟ್ಟರು: ವೈಷ್ಣೋದೇವಿ ಕ್ಷೇತ್ರದಿಂದ ಬೆಳಿಗಿನ ಜಾವ 5 ಗಂಟೆ ವೇಳೆ ಶಬರಿಮಲೆಗೆ ಪಾದಾಯಾತ್ರೆ ಹೊರಟ ಅಯ್ಯಪ್ಪ ಸ್ವಾಮಿ ವ್ರತದಾರಿ ನವೀನ್ ಕೇವಲ 1 ಕಿ.ಮೀ ಕ್ರಮಿಸಿದಾಗಲೇ ಇಬ್ಬರು ಸೈಕಲ್ ಸವಾರರು ಇವರನ್ನು ತಡೆದರು.
ಇದರಿಂದ ಭಯಗೊಂಡಿದ್ದ ನವೀನ್ ಸುಮ್ಮನೆ ನಿಂತು ಬಿಟ್ಟರಂತೆ.ಆಗ ಆ ಅಪರಿಚಿತ ವ್ಯಕ್ತಿ ಹತ್ತಿರಕ್ಕೆ ಬಂದು ನೂರರ ಆರು ನೋಟುಗಳನ್ನು ಕೈಯಲಿಟ್ಟು ಪಕ್ಕದಲ್ಲೇ ನನ್ನ ಕ್ಷೇತ್ರವಿದೆ ಸಂದರ್ಶಿಸು ಎಂದು ಹೇಳಿ ದಾರಿಯಲ್ಲೇ ಮುಂದೆ ಸಾಗಿದರಂತೆ.
ಕೂಡಲೇ ಅವರನ್ನು ಮತ್ತೆ ನೋಡಲೆಂದು ಅತೀ ಉತ್ಸಾಹದಿಂದ ಅವರತ್ತ ಟಾರ್ಚ್ ಹಾಕಿದೆ. ಆದರೆ ಆ ವ್ಯಕ್ತಿ ಕಣ್ಮರೆಯಾಗಿದ್ದರು. ಎಷ್ಟು ಹುಡುಕಿದರೂ ಕಣ್ಣಿಗೆ ಕಾಣಲಿಲ್ಲವೆಂದು ನವೀನ್ ಭಾವೋದ್ರೇಕದಿಂದ ಹೇಳಿದರು
ಅದೊಂದು ತನ್ನ ಶಬರಿಮಲೆ ಯಾತ್ರೆಯ ಅವಿಸ್ಮರಣೀಯ ರೋಮಾಂಚನದ ಮರೆಯಲಾರದ ಕ್ಷಣ ಎಂದು ನೆನಪಿಸಿಕೊಂಡರು.