ನನ್ನ ಪೊಲೀಸರ ಮೇಲೆ ಹಲ್ಲೆ ಮಾಡಿದ್ರೆ ಸಹಿಸಲ್ಲ -ಗುಡುಗಿದ ಕಮಿಷನರ್
ಪೊಲೀಸ್ ಆಯುಕ್ತನಾಗಿ ಪೊಲೀಸರ ರಕ್ಷಣೆ ನನ್ನ ಜವಾಬ್ದಾರಿ. ನನ್ನ ಪೊಲೀಸರ ಮೇಲೆ ಯಾರೇ ಹಲ್ಲೆ ಮಾಡಿದರೂ ನಾನು ಸಹಿಸಲು ಸಾಧ್ಯವಿಲ್ಲ,” ಎಂದು ಮಂಗಳೂರು ಪೊಲೀಸ್ ಆಯುಕ್ತ ಎಂ ಚಂದ್ರಶೇಖರ್ ಗುಡುಗಿದ್ದಾರೆ.
ಮಂಗಳೂರು, ಏಪ್ರಿಲ್ 7: "ಪೊಲೀಸ್ ಆಯುಕ್ತನಾಗಿ ಪೊಲೀಸರ ರಕ್ಷಣೆ ನನ್ನ ಜವಾಬ್ದಾರಿ. ನನ್ನ ಪೊಲೀಸರ ಮೇಲೆ ಯಾರೇ ಹಲ್ಲೆ ಮಾಡಿದರೂ ನಾನು ಸಹಿಸಲು ಸಾಧ್ಯವಿಲ್ಲ," ಎಂದು ಮಂಗಳೂರು ಪೊಲೀಸ್ ಆಯುಕ್ತ ಎಂ ಚಂದ್ರಶೇಖರ್ ಗುಡುಗಿದ್ದಾರೆ.
ಪೊಲೀಸರು ಭಯ ಮುಕ್ತ ವಾತಾವರಣದಲ್ಲಿ, ನಿಷ್ಪಕ್ಷಪಾತವಾಗಿ ಕೆಲಸ ಮಾಡುವಂತೆ ನೋಡಿಕೊಂಡು ಅವರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುವುದು ನನ್ನ ಕರ್ತವ್ಯ ಎಂದು ಮಂಗಳೂರು ಪೊಲೀಸ್ ಆಯುಕ್ತ ಚಂದ್ರಶೇಖರ್ ಹೇಳಿದ್ದಾರೆ.[ಮಂಗಳೂರು: ಖುರೇಶಿಯನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಿ - ಕೋರ್ಟ್]
ಶುಕ್ರವಾರ ಪೊಲೀಸ್ ಆಯುಕ್ತರ ಕಚೇರಿಯಲ್ಲಿ ಕರೆದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಅವರು ಮಾತನಾಡುತ್ತಿದ್ದರು. "ಉರ್ವ ಠಾಣಾ ಎಎಸ್ಸೈ ಐತಪ್ಪ ಬುಧವಾರ ಮುಂಜಾನೆ ಕರ್ತವ್ಯದಲ್ಲಿದ್ದಾಗ ಅವರ ಬಳಿ ಯಾವುದೇ ಆಯುಧವಿರಲಿಲ್ಲ. ಸಾಮಾನ್ಯವಾಗಿ ರಾತ್ರಿ ಗಸ್ತಿಗೆ ಇಬ್ಬರು ಪೊಲೀಸರು ಜೊತೆಯಾಗಿ ಹೋಗಬೇಕಾಗುತ್ತದೆ. ಆ ಪೈಕಿ ಒಬ್ಬ ಪೊಲೀಸ್ ಬಳಿ ರಿವಾಲ್ವರ್ ಅಥವಾ ರೈಫಲ್ ಇರಬೇಕು. ದುಷ್ಕೃತ್ಯ ನಡೆದ ದಿನ ಐತಪ್ಪರ ಬಳಿ ಆಯುಧವಿದ್ದಿದ್ದರೆ ಅವರು ಅಪಾಯವನ್ನು ತಪ್ಪಿಸಬಹುದಿತ್ತು. ಭವಿಷ್ಯದ ಹಿತದೃಷ್ಟಿಯಿಂದ ರಾತ್ರಿ ಗಸ್ತು ಪೊಲೀಸರಿಗೆ ಆತ್ಮರಕ್ಷಣಾ ಆಯುಧ ನೀಡಲಾಗುವುದು," ಎಂದರು.
ಇಬ್ಬರು ಆರೋಪಿಗಳ ಬಂಧನ
ಉರ್ವ ಪೊಲೀಸ್ ಠಾಣೆಯ ಎಎಸ್ಐ ಐತಪ್ಪರ ಮೇಲೆ ಹಲ್ಲೆ ನಡೆಸಿದ ಆರೋಪಿಗಳ ಪೈಕಿ ಕಾಟಿಪಳ್ಳದ ಶಮೀರ್ (28), ಕಾನದ ಮಹಮ್ಮದ್ ನಿಯಾಜ್ (20) ಎಂಬಿಬ್ಬರನ್ನು ಬಂಧಿಸಲಾಗಿದೆ. ಪ್ರಕರಣದ ಹಿಂದೆ ಯಾರೇ ಇರಲಿ, ಎಷ್ಟೇ ಪ್ರಭಾವಿಗಳಿರಲಿ ಅವರನ್ನು ಬಯಲಿಗೆ ತಂದೇ ತರುತ್ತೇವೆ ಎಂದು ಹೇಳಿದರು.
ಬಂಧಿತರಾಗಿರುವ ಶಮೀರ್ ಮತ್ತು ನಿಯಾಜ್ನನ್ನು ಪೊಲೀಸ್ ವಶಕ್ಕೆ ಪಡೆದುಕೊಂಡು ತನಿಖೆ ನಡೆಸುತ್ತಿದ್ದೇವೆ. ಆರೋಪಿಗಳು ಯಾವುದಾದರೂ ಸಂಘಟನೆಗೆ ಸೇರಿದವರೇ, ಹಲ್ಲೆಯ ಉದ್ದೇಶ, ಹಲ್ಲೆ ವೇಳೆ ಶಸ್ತ್ರಾಸ್ತ್ರ ಹೊಂದಿದ್ದರೆ ಎಂಬಿತ್ಯಾದಿ ಕುರಿತು ತನಿಖೆ ನಡೆಸಿ ವಿವರ ನೀಡುತ್ತೇವೆ. ಆರೋಪಿಗಳಿಂದ ಕೃತ್ಯಕ್ಕೆ ಬಳಿಸಿದ ಬೈಕನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.
ಬಂಧಿತರು ಕುಖ್ಯಾತರು
ಆರೋಪಿಗಳಿಬ್ಬರು ಕುಖ್ಯಾತರಾಗಿದ್ದು, ಶಮೀರ್ ವಿರುದ್ಧ ಜಿಲ್ಲೆಯ ವಿವಿಧ ಠಾಣೆಗಳಲ್ಲಿ ಒಂಭತ್ತು ಪ್ರಕರಣ, ನಿಯಾಜ್ ವಿರುದ್ಧ 5 ಪ್ರಕರಣ ದಾಖಲಾಗಿದೆ. ಇದರಲ್ಲಿ ಕೊಲೆ ಯತ್ನ, ಹಲ್ಲೆಯಂತಹ ಪ್ರಕರಣಗಳು ಕೂಡಾ ಸೇರಿದೆ ಎಂದು ತಿಳಿಸಿದರು.
ಇನ್ನು ಎಎಸ್ಐ ಐತಪ್ಪರ ಹಲ್ಲೆ ಪ್ರಕರಣದ ಆರೋಪಿಗಳನ್ನು ಬಂಧಿಸಲು ಪೊಲೀಸ್ ಅಧಿಕಾರಿಗಳ ವಿಶೇಷ ತಂಡ ರಚಿಸಲಾಗಿದೆ. ಉರ್ವ ಠಾಣಾ ಪೊಲೀಸ್ ನಿರೀಕ್ಷಕ ರವೀಶ್ ನಾಯಕ್ ನೇತೃತ್ವದ ತಂಡ ಈ ಇಬ್ಬರು ಪ್ರಮುಖ ಆರೋಪಿಗಳನ್ನು ಬಂಧಿಸಿದೆ ಎಂದು ಮಾಹಿತಿ ನೀಡಿದರು.['ಅನುಮತಿ ಇಲ್ಲದೇ ಪ್ರತಿಭಟಿಸಿದ್ದಕ್ಕೆ ಲಾಠಿಚಾರ್ಜ್' - ಪೊಲೀಸ್ ಆಯುಕ್ತರ ಸ್ಪಷ್ಟನೆ]
ಖುರೈಷಿ ಮೇಲೆ ಹಲ್ಲೆ ನಡೆದಿಲ್ಲ
ವೈದ್ಯಕೀಯ ವರದಿಯಂತೆ ಖುರೈಷಿಯ ಮೇಲೆ ಯಾವುದೇ ಪೊಲೀಸ್ ದೌರ್ಜನ್ಯ ನಡೆದಿಲ್ಲ. ಖುರೈಷಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗಲೂ ಆತ ಈ ಬಗ್ಗೆ ಹೇಳಿಕೆ ನೀಡಿದ್ದಾನೆ. ಖುರೈಷಿಯ ಸಹೋದರ ನಿಷಾದ್ ನೀಡಿದ ದೂರಿನಂತೆ ಪೊಲೀಸ್ ದೌರ್ಜನ್ಯದ ಬಗ್ಗೆ ಡಿಸಿಪಿ ಕೆ. ಎಂ. ಶಾಂತರಾಜು ನೇತೃತ್ವದಲ್ಲಿ ತನಿಖೆ ನಡೆಯುತ್ತಿದೆ ಎಂದು ಚಂದ್ರಶೇಖರ್ ಹೇಳಿದರು.
ಮುಖ್ಯಮಂತ್ರಿ ಭೇಟಿಯಾದ ಎಸ್ಡಿಪಿಐ
ಮಂಗಳೂರಿನ ಸಿಸಿಬಿ ಪೊಲೀಸರು ಅಮಾಯಕ ಮುಸ್ಲಿಂ ಯುವಕ ಅಹ್ಮದ್ ಖುರೇಷಿಗೆ ಅಮಾನವೀಯವಾಗಿ ಎರಡು ಕಿಡ್ನಿ ವೈಫಲ್ಯವಾಗುವವರೆಗೆ ದೈಹಿಕ ದೌರ್ಜನ್ಯ ನಡೆಸಿದ್ದಾರೆ ಎಂಬ ಪ್ರಕರಣದಲ್ಲಿ ಮಂಗಳೂರು ಎಸ್ಡಿಪಿಐ ಸದಸ್ಯರು ಮುಖ್ಯಮಂತ್ರಿ ಸಿದ್ದರಾಮಯ್ಯರನ್ನು ಮೈಸೂರಿನ ಅವರ ನಿವಾಸದಲ್ಲಿ ಭೇಟಿಯಾದರು.
ಈ ವೇಳೆ ಶಾಂತ ರೀತಿಯಲ್ಲಿ ಪ್ರತಿಭಟಿಸುತ್ತಿದ್ದ ಪ್ರತಿಭಟನಾಕಾರರ ಮೇಲೆ ಯಾವುದೇ ಮುನ್ಸೂಚನೆ ನೀಡದೆ ಲಾಠಿಚಾರ್ಜ್ ನಡೆಸಿ ಬಂಧಿಸಿರುವ ಬಗ್ಗೆಯೂ ಮುಖ್ಯಮಂತ್ರಿಯವರಿಗೆ ನಿಯೋಗವು ವಿವರಿಸಿತು.
ಮುಖ್ಯಮಂತ್ರಿಗೆ ಲಾಠಿ ಜಾರ್ಜ್ ತುಣುಕು
ಮುಖ್ಯಮಂತ್ರಿ ಭೇಟಿ ಸಂದರ್ಭ ಲಾಠಿಚಾರ್ಜ್ನ ವೀಡಿಯೊ ತುಣುಕನ್ನು ಮುಖ್ಯಮಂತ್ರಿಯವರ ಗಮನಕ್ಕೆ ತರಲಾಯಿತು.
ಖುರೇಷಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ ಮಂಗಳೂರು ಸಿಸಿಬಿ ಪೊಲೀಸ್ ಅಧಿಕಾರಿ ಹಾಗೂ ಪೇದೆಗಳನ್ನು ಅಮಾನತುಗೊಳಿಸಿ ಅವರ ಮೇಲೆ ಕ್ರಿಮಿನಲ್ ಕೇಸು ದಾಖಲಿಸಬೇಕು. ಶಾಂತಿಯುತ ಪ್ರತಿಭಟನೆ ನಡೆಸಿದವರ ಮೇಲೆ ಹಾಕಿರುವ ಸುಳ್ಳು ಮೊಕದ್ದಮೆಗಳನ್ನು ಹಿಂಪಡೆಯಬೇಕು. ಖುರೈಷಿಯ ಆಸ್ಪತ್ರೆಯ ಸಂಪೂರ್ಣ ವೆಚ್ಚವನ್ನು ಸರಕಾರ ಭರಿಸಬೇಕು ಹಾಗೂ ಆತನಿಗೆ ಸೂಕ್ತ ಪರಿಹಾರವನ್ನು ನೀಡಲು ಕ್ರಮ ಕೈಗೊಳ್ಳುವಂತೆ ನಿಯೋಗವು ಮುಖ್ಯಮಂತ್ರಿಗೆ ಮನವಿ ಮಾಡಿದ್ದಾರೆ.
ಎಸ್ಡಿಪಿಐ ದಕ್ಷಿಣ ಕನ್ನಡ ಜಿಲ್ಲಾಧ್ಯಕ್ಷ ಹನೀಫ್ ಖಾನ್ ಕೊಡಾಜೆ, ರಾಜ್ಯ ಕಾರ್ಯದರ್ಶಿ ಅಪ್ಸರ್ ಕೊಡ್ಲಿಪೇಟೆ, ಎಸ್ಡಿಪಿಐ ಮೈಸೂರು ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಪಸ್ಥಿತರಿದ್ದರು.