ಜಾತ್ರೋತ್ಸವಕ್ಕೂ ಮುನ್ನ ಪುತ್ತೂರಿನಲ್ಲಿ ಎದ್ದ ಚಪ್ಪರ ವಿವಾದ
ಪುತ್ತೂರು, ಮಾರ್ಚ್ 24 : ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಾಲಯದ ವಾರ್ಷಿಕ ಜಾತ್ರೋತ್ಸವ ಆಮಂತ್ರಣ ಪತ್ರಿಕೆ ವಿವಾದ ಜೀವಂತವಾಗಿರುವಾಗಲೇ ಇದೀಗ ಚಪ್ಪ ವಿವಾದ ತಲೆ ಎತ್ತಿದೆ.
ಪ್ರತಿ ವರ್ಷ ದೇವಳದ ಜಾತ್ರೆಗೆ ಪೂರ್ವ ಸಂಪ್ರದಾಯದಂತೆ ತೆಂಗಿನ ಗರಿಯ ತಟ್ಟೆಯಿಂದ ಭವ್ಯ ಚಪ್ಪರ ಹಾಕಲಾಗುತ್ತಿತ್ತು. ಆದರೆ ಇದೆ ಮೊದಲ ಬಾರಿಗೆ ಆಧಿಕಾರಿಗಳು ಪ್ಲಾಸ್ಟಿಕ್ ಶೇಡ್ ನೆಟ್ ಚಪ್ಪರ ಹಾಕುತ್ತಿರುವುದಕ್ಕೆ ಭಾರೀ ಆಕ್ಷೇಪಗಳು ಬರುತ್ತಿದ್ದು, ತಕ್ಷಣ ಅದನ್ನು ತೆರವು ಮಾಡಿ ಸಂಪ್ರದಾಯ ಪಾಲಿಸಲು ಆಗ್ರಹಿಸಲಾಗುತ್ತಿದೆ.
ಲಿಖಿತ ಮನವಿ : ಚಪ್ಪರದ ವಿಚಾರದಲ್ಲಿ ಸಂಪ್ರದಾಯ ಮುರಿಯುತ್ತಿರುವುದನ್ನು ಆಕ್ಷೇಪಿಸಿ ಪುತ್ತೂರಿನ ಧಾರ್ಮಿಕ ಮುಂದಾಳು ಪಿ. ಶ್ರೀಧರ ಹೆಗ್ಡೆ, ಈ ಬಗ್ಗೆ ದೇವಳದ ಆಡಳಿತಾಧಿಕಾರಿ ಜಗದೀಶ್ ಎಸ್. ಅವರಿಗೆ ಲಿಖಿತ ದೂರು ನೀಡಿದ್ದಾರೆ. [ಪುತ್ತೂರು ಮಹಾಲಿಂಗೇಶ್ವರ ಜಾತ್ರೆ ವಿವಾದ ಎಲ್ಲಿಗೆ ಬಂತು?]
ದೇವಳದ ಪಾವಿತ್ರ್ಯತೆ ಉಳಿಸಿಕೊಳ್ಳಲು ತಟ್ಟಿ ಚಪ್ಪರವನ್ನೇ ಹಾಕಲು ಭಕ್ತರಿಗೆ ಅನುಮತಿ ನೀಡುವಂತೆ ಕೋರಿದ್ದಾರೆ. ಅನುಮತಿ ನೀಡಿದಲ್ಲಿ ಭಕ್ತರೇ ಸೇರಿಕೊಂಡು ಉಚಿತವಾಗಿ ಕರಸೇವೆ ಮೂಲಕ ಸಾಂಪ್ರದಾಯಿಕ ಚಪ್ಪರ ಹಾಕಿ ಕೊಡುವುದಾಗಿ ಭರವಸೆ ನೀಡಿದ್ದಾರೆ.
ಇದೇ ವೇಳೆ ಬಜರಂಗ ದಳದ ಯುವ ಮುಖಂಡ ದಿನೇಶ್ ಕುಮಾರ್ ಜೈನ್ ಅವರೂ ಧಾರ್ಮಿಕ ದತ್ತಿ ಇಲಾಖೆಯ ಜಿಲ್ಲಾ ಸಹಾಯಕ ಆಯುಕ್ತರಿಗೆ ದೂರು ನೀಡಿದ್ದಾರೆ. ದೇವಳದ ಆಮಂತ್ರಣ ಪತ್ರಿಕೆ ವಿವಾದ ಈಗಾಗಲೇ ಹೈಕೋರ್ಟ್ ನಲ್ಲಿದ್ದು, ಮಾ.24 ವಿಚಾರಣೆಗೆ ಬರಲಿದೆ. ಈ ವಿಚಾರ ಜೀವಂತವಾಗಿ ಇರುವಾಗಲೇ ಚಪ್ಪರ ವಿವಾದಕ್ಕೆ ಆಸ್ಪದ ನೀಡುವುದು ಸೀಮೆಯ ಭಕ್ತರ ಅಸಮಾಧಾನಕ್ಕೆ ಕಾರಣವಾಗಿದೆ.