ದಕ್ಷಿಣ ಕನ್ನಡ ಪೊಲೀಸ್ ಕ್ರೀಡಾಕೂಟಕ್ಕೆ ಡಿಸಿ ಜಗದೀಶ್ ಚಾಲನೆ
ಮಂಗಳೂರು, ಜನವರಿ. 09 : ಮಂಗಳೂರು ನಗರ ಪೊಲೀಸ್ ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಜಂಟಿ ಆಶ್ರಯದಲ್ಲಿ ನಡೆಯುತ್ತಿರುವ ವಾರ್ಷಿಕ ಪೊಲೀಸ್ ಕ್ರೀಡಾಕೂಟಕ್ಕೆ ಸೋಮವಾರ ಜಿಲ್ಲಾಧಿಕಾರಿ ಜಗದೀಶ್ ಚಾಲನೆ ನೀಡಿದರು.
ಈ ಕುರಿತು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಇಡೀ ಕರ್ನಾಟಕದಲ್ಲಿ ದಕ್ಷಿಣ ಕನ್ನಡ ಪೊಲೀಸರು ತಮ್ಮ ಕರ್ತವ್ಯವನ್ನು ಕಟ್ಟು ನಿಟ್ಟಾಗಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಅದ್ಬುತ ಕೆಲಸ ಮಾಡುತ್ತಿದ್ದಾರೆ.
ಐದು ತಿಂಗಳ ಹಿಂದೆ, ನಾನು ಡಿಸಿ ಆಗಿ ಇಲ್ಲಿ ಬಂದಾಗ, ಅನೇಕ ಸವಾಲುಗಳನ್ನು ಎದುರಿಸಬೇಕಾಯಿತು. ಆಗಲೂ ಪೊಲೀಸ್ ಇಲಾಖೆ ದಿಟ್ಟ ನಿಲುವಿನಿಂದ ಪರಿಣಾಮಕಾರಿಯಾಗಿ ಕೆಲಸ ಮಾಡಿದೆ. ಪೊಲೀಸ್ ಇಲಾಖೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಶ್ರಮಿಸುತ್ತದೆ ಎಂದರು.
ಪೊಲೀಸ್ ಕೆಲಸ ಸುಲಭದ ಕೆಲಸವಲ್ಲ. ಪೊಲೀಸ್ ಕೆಲಸದಲ್ಲಿ ದೈಹಿಕ ಹಾಗು ಮಾನಸಿಕ ಒತ್ತಡ ಯಾವಾಗಲೂ ಇರುತ್ತದೆ. ಪರಿಣಾಮಕಾರಿಯಾಗಿ ಕೆಲಸ ಮಾಡಬೇಕಾದರೆ ನಾವು ಭೌತಿಕವಾಗಿ ಮತ್ತು ಮಾನಸಿಕವಾಗಿ ಸದೃಢರಾಗಿರಬೇಕು.
ಸದೃಢರಾಗಬೇಕಾದರೆ ವ್ಯಾಯಾಮ ಅತ್ಯಗತ್ಯ. ಕ್ರೀಡೆ ಕೇವಲ ಸ್ಪರ್ಧೆಗಳಿಗೆ ಸೀಮಿತವಲ್ಲ ಬದಲಿಗೆ ನಾವು ನಮ್ಮ ದೈನಂದಿನ ಜೀವದಲ್ಲಿ ಕೂಡಾ ಕ್ರೀಡೆಗಳು ಅಗತ್ಯವಾಗಿದೆ ಎಂದು ಹೇಳಿದರು.