ಆಳ್ವಾಸ್ ವಿದ್ಯಾರ್ಥಿನಿ ಕಾವ್ಯಳದ್ದು ಅಸ್ವಾಭಾವಿಕ ಸಾವು: ಉಗ್ರಪ್ಪ
ಮಂಗಳೂರು, ಆಗಸ್ಟ್ 01 : ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಪುಜಾರಿ ಆತ್ಮಹತ್ಯೆ ಪ್ರಕರಣ ಗಂಭೀರ ಸ್ವರೂಪ ಪಡೆದು ಕೊಳ್ಳುತ್ತಿದೆ. ಇಂದು (ಮಂಳವಾರ) ಮಹಿಳಾ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಅಧ್ಯಕ್ಷ ವಿ.ಎಸ್ ಉಗ್ರಪ್ಪ ಮುಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಸಂಸ್ಥೆಯ ವಿರುದ್ದ ಕಿಡಿಕಾರಿದರು.
ಆಳ್ವಾಸ್ ನ ಕಾವ್ಯ ನಿಗೂಢ ಸಾವಿನ ತನಿಖೆ ಕೈಗೆತ್ತಿಕೊಂಡ ಮಕ್ಕಳ ಆಯೋಗ
ನಂತರ ಮಂಗಳೂರಿನ ಜಿಲ್ಲಾಧಿಕಾರಿ ಕಚೇರಿಯಲ್ಲಿ ಆಧಿಕಾರಿಗಳ ಸಭೆ ನಡೆಸಿದ ಅವರು, "ಆಳ್ವಾಸ್ ಶಿಕ್ಷಣ ಸಂಸ್ಥೆ ಭೇಟಿ ವೇಳೆ ನನಗೆ ಆಘಾತಕಾರಿ ಮಾಹಿತಿಗಳು ಲಭ್ಯವಾಗಿವೆ. ಮಾಹಿತಿಗಳ ಪ್ರಕಾರ ಕಾವ್ಯಳದ್ದು ಅಸ್ವಾಭವಿಕ ಸಾವು ಅಂತ ಕಾಣುತ್ತದೆ. ಆದರೆ, ಇದರಲ್ಲಿ ಆಡಳಿತ ಮಂಡಳಿ ನಿರ್ಲಕ್ಷ್ಯ ಸ್ಪಷ್ಟವಾಗಿ ಕಾಣುತ್ತಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.
ಅಲ್ಲದೇ ಈ ಸಂಸ್ಥೆಗೆ ವಸತಿ ಶಾಲೆ ನಡೆಸುವ ಯಾವುದೇ ಅನುಮತಿಯಿಲ್ಲ, ಇಲ್ಲಿ ನಡೆಯುತ್ತಿರುವ ಹಾಸ್ಟೆಲ್ ಗಳು ಕಾನೂನಿನ ಚೌಕಟ್ಟು ಮೀರಿ ನಡೆಯುತ್ತಿದೆ. ಈ ನಿಟ್ಟಿನಲ್ಲಿ ಜಿಲ್ಲಾಡಳಿತ ಏನು ಕ್ರಮ ಕೈಗೊಂಡಿದೆ ಎಂದು ಪ್ರಶ್ನಿಸಿದರು.
ಹಾಸ್ಟೆಲ್ ಸುರಕ್ಷತೆಗೆ ಸಂಬಂಧಿಸಿ ಎಲ್ಲಾ ಕಾನೂನುಗಳನ್ನು ಗಾಳಿಗೆ ತೂರಲಾಗಿದೆ ಎಂದು ಆರೋಪಿಸಿದ ಅವರು, ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಕೆಲಸ ಮಾಡುವ ಸಿಬ್ಬಂದಿಗೆ ಕನಿಷ್ಠ ವೇತನ ಕೂಡ ಕೊಡುತ್ತಿಲ್ಲ ಎಂದು ಕಿಡಿಕಾರಿದರು.
ಸಂಬಂಧ ಪಟ್ಟ ಪೋಲೀಸರಿಗೆ ಸೂಕ್ತ ತನಿಖೆಗೆ ಸೂಚಿಸಿದ್ದೇನೆ ಈ ಅಸ್ವಾಭವಿಕ ಸಾವಿನಲ್ಲಿ ಆಡಳಿತ ಮಂಡಳಿ ನಿರ್ಲಕ್ಷ್ಯದ ವಿರುದ್ಧ ಕ್ರಮಕ್ಕೆ ಸೂಚನೆ ನೀಡಿದ್ದೆನೆ ಎಂದು ಹೇಳಿದರು.
ಕಾವ್ಯ ನಿಗೂಢ ಸಾವು ಪ್ರಕರಣ: ಆಳ್ವಾಸ್ ಹೈಸ್ಕೂಲ್ ಗೆ ಉಗ್ರಪ್ಪ ಭೇಟಿ
ಪ್ರಕರಣದ ಕುರಿತು ಜಿಲ್ಲಾಡಳಿತ 3 ವಾರದೊಳಗೆ ಸಮಿತಿಗೆ ವರದಿ ನೀಡುವಂತೆ ಅವರು ಸೂಚನೆ ನೀಡಿದರು. ಕಾವ್ಯ ಪ್ರಕರಣದಲ್ಲಿ ಜಿಲ್ಲಾಡಳಿತ ಸಂಪೂರ್ಣ ವಿಫಲವಾಗಿದೆ ಎಂದು ವಾಗ್ದಾಳಿ ನಡೆಸಿದ ಉಗ್ರಪ್ಪ ಶಿಕ್ಷಣ ಇಲಾಖೆಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಆಳ್ವಾಸ್ ಸಂಸ್ಥೆಯ ಲೋಪದಿಂದ ಕಾವ್ಯ ಸಾವಾಗಿದೆ. ಈ ಹಿನ್ನೆಲೆಯಲ್ಲಿ ಕಾವ್ಯ ಕುಟುಂಬಕ್ಕೆ 50 ಲಕ್ಷ ರೂಪಾಯಿ ಪರಿಹಾರ ನೀಡಬೇಕೆಂದು ಸೂಚನೆ ನೀಡಿದರು.
ಉಗ್ರಪ್ಪರ ಉಗ್ರ ಪ್ರತಾಪಕ್ಕೆ ಕುಸ್ತು ಬಿದ್ದ ಅಧಿಕಾರಿ : ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಉಗ್ರಪ್ಪ ಅವರ ವಾಗ್ದಾಳಿಗೆ ಬೆದರಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಸುಂದರ ಪೂಜಾರಿ ಅಸ್ವಸ್ಥಗೊಂಡು ಕುಸಿದು ಬಿದ್ದರು. ವರ್ಷದ ಹಿಂದೆ ಕೂಡಾ ಉಗ್ರಪ್ಪರ ಉಗ್ರವತಾರಕ್ಕೆ ಇದೇ ಅಧಿಕಾರಿ ಕುಸಿದು ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು.
ಡಾ. ಮೋಹನ್ ಆಳ್ವಾ ವಿಚಾರಣೆ: ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಆತ್ಮಹತ್ಯೆ ಪ್ರಕರಣದ ಕುರಿತು ಮಹಿಳಾ ಹಾಗೂ ಮಕ್ಕಳ ಮೇಲಿನ ದೌರ್ಜನ್ಯ ತಡೆ ಸಮಿತಿ ಆಳ್ವಾಸ್ ಶಿಕ್ಷಣ ಸಂಸ್ಥೆ ಅದ್ಯಕ್ಷ ಡಾ. ಮೋಹನ್ ಆಳ್ವಾ ಅವರ ವಿಚಾರಣೆ ನಡೆಸಿದೆ.
ಆಳ್ವಾರಿಂದ ಪ್ರಕರಣದ ಕುರಿತು ತನಿಖಾ ಸಮಿತಿ ವಿವರವಾಗಿ ಹೇಳಿಕೆ ಪಡೆದು ಕೊಂಡಿದೆ ಎಂದು ತಿಳಿದು ಬಂದಿದೆ.