ಆಳ್ವಾಸ್ ನ ಕಾವ್ಯ ನಿಗೂಢ ಸಾವಿನ ತನಿಖೆ ಕೈಗೆತ್ತಿಕೊಂಡ ಮಕ್ಕಳ ಆಯೋಗ
ಮಂಗಳೂರು, ಆಗಸ್ಟ್ 1: ಆಳ್ವಾಸ್ ವಿದ್ಯಾರ್ಥಿನಿ ಕಾವ್ಯ ಪೂಜಾರಿ ನಿಗೂಢ ಸಾವಿನ ಪ್ರಕರಣದ ತನಿಖೆಯನ್ನು ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಕೈಗೆತ್ತಿಕೊಂಡಿದೆ. ಪೊಲೀಸ್ ಇಲಾಖೆ ವಿದ್ಯಾರ್ಥಿನಿಯ ಆತ್ಮಹತ್ಯೆ ಪ್ರಕರಣದ ಜಾಡು ಹಿಡಿದು ತನಿಖೆ ಆರಂಭಿಸಿದ ಬೆನ್ನಿಗೆ ಇದೀಗ ಮಕ್ಕಳ ಹಕ್ಕುಗಳ ಆಯೋಗವೂ ಈ ತನಿಖೆಯನ್ನು ಕೈಗೆತ್ತಿಕೊಂಡಿದೆ.
ಆಳ್ವಾಸ್ ಕಾಲೇಜ್ ವಿದ್ಯಾರ್ಥಿನಿ ನಿಗೂಢ ಸಾವಿನ ಸುತ್ತ 'ಅನುಮಾನ'ದ ಹುತ್ತ
ಮಾಧ್ಯಮಗಳಲ್ಲಿ ಕಾವ್ಯ ನಿಗೂಢ ಸಾವಿನ ಕುರಿತು ಹಲವಾರು ಪ್ರಶ್ನೆಗಳನ್ನು ಮುಂದಿಟ್ಟು ಗಂಭೀರ ಚರ್ಚೆ ಆರಂಭಗೊಳ್ಳುತ್ತಿದ್ದಂತೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ಎಸಿಪಿ ರಾಜೇಂದ್ರ ಅವರ ನೇತೃತ್ವದಲ್ಲಿ ತಂಡ ರಚಿಸಿ ತನಿಖೆ ಚುರುಕುಗೊಳಿಸಲಾಗಿದೆ.
ಈ ನಡುವೆ ಮೂಡಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ಕಾವ್ಯ ಆತ್ಮಹತ್ಯೆ ಪ್ರಕರಣ ತನಿಖೆಯನ್ನು ರಾಜ್ಯ ಮಕ್ಕಳ ಹಕ್ಕು ರಕ್ಷಣಾ ಆಯೋಗ ಕೈಗೆತ್ತಿಕೊಂಡಿದೆ. ಈ ಪ್ರಕರಣದ ತನಿಖೆಗೆ ಆಯೋಗ ಅಧ್ಯಕ್ಷರಾದ ಡಾ.ಕೃಪಾ ಅಮರ್ ಆಳ್ವಾ ಸಮಿತಿಯೊಂದನ್ನು ರಚಿಸಿದ್ದಾರೆ. ಕಾವ್ಯ ನಿಗೂಢ ಸಾವಿನ ಪ್ರಕರಣ ಕುರಿತು ಮಾಧ್ಯಮಗಳಲ್ಲಿ ಬಂದ ವರದಿ ಆಧರಿಸಿ ಆಯೋಗ ಸ್ವ ಪ್ರೇರಣೆಯಿಂದ ದೂರನ್ನು ದಾಖಲಿಸಿ ತನಿಖೆಗೆ ಸಮಿತಿ ರಚಿಸಿದೆ.
ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಗಳ ಕಾಯ್ದೆ 2005 ರ ಸೆಕ್ಷನ್ 14 (1)(ಇ) ರನ್ವಯ ಸಾಕ್ಷ್ಯಗಳ ಮತ್ತು ದಸ್ತಾವೇಜುಗಳ ವಿಚಾರಣೆಗಾಗಿ ಕಮಿಷನ್ ಗಳನ್ನು ನೇಮಿಸುವ ಅಧಿಕಾರವನ್ನು ಆಯೋಗ ಹೊಂದಿದ್ದು ಈ ಹಿನ್ನೆಲೆಯಲ್ಲಿ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ 3 ಸದಸ್ಯರ ಸಮಿತಿಯನ್ನು ರಚಿಸಿದೆ.
ಆತ್ಮಹತ್ಯೆಯೋ ಕೊಲೆಯೋ: ಕಾವ್ಯಾ ಪೋಷಕರ ಆರೋಪ, ಆಳ್ವ ಪ್ರತಿಕ್ರಿಯೆ
ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಸದಸ್ಯರಾದ ಆನಂದ .ಬಿ. ಲೋಬೋ, ಡಾ. ವನಿತಾ ಎನ್. ತೊರವಿ ಹಾಗು ಕೆ.ಬಿ.ರೂಪಾ ನಾಯ್ಕ ಅವರ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದ್ದು ಆಗಸ್ಟ್ 2 ರಂದು ಸಮಿತಿ ಮಂಗಳೂರಿಗೆ ಭೇಟಿ ನೀಡಲಿದೆ. ಸಮಿತಿಯ ಸದಸ್ಯರು ಆಳ್ವಾಸ್ ಶಿಕ್ಷಣ ಸಂಸ್ಥೆ , ಹಾಸ್ಟೆಲ್ ಸೇರಿದಂತೆ ಕಾವ್ಯ ಅವರ ಮನೆಗೆ ಭೇಟಿನೀಡಿ ಮಾಹಿತಿ ಕಲೆಹಾಕಿ 15 ದಿನಗಳ ಒಳಗೆ ಆಯೋಗಕ್ಕೆ ವರದಿ ಸಲ್ಲಿಸಲಿದ್ದಾರೆ.