ಆಕ್ರೋಶ ದಿನಕ್ಕೆ ಕ್ಯಾರೆ ಎನ್ನದ ಮಂಗಳೂರು ಜನ
ಮಂಗಳೂರು, ನವೆಂಬರ್. 28 : ಸೋಮವಾರ ಆಕ್ರೋಶ ದಿನದ ಬಿಸಿ ದಕ್ಷಿಣ ಕನ್ನಡ ಜಿಲ್ಲೆಗೆ ತಟ್ಟಿಲ್ಲ. ಎಂದಿನಂತೆ ವಾಹನಗಳ ಸಂಚಾರ, ವ್ಯಾಪಾರ ವಹಿವಾಟುಗಳು ನಡೆದವು. ಇದರಿಂದ ಜಿಲ್ಲೆಯಲ್ಲಿ ಆಕ್ರೊಶ ದಿನಕ್ಕೆ ಮಿಶ್ರ ಪ್ರತಿಕ್ರಿಯೆ ಕಂಡು ಬಂದಿದ್ದು.
ಬ್ಯಾಂಕ್ ಸಹಿತ ಸರಕಾರಿ ಕಚೇರಿಗಳು ಕೂಡಾ ಎಂದಿನಂತೆ ಕಾರ್ಯ ನಡೆಸಸಿವೆ. ಒಟ್ಟಾರೆಯಾಗಿ ಜಿಲ್ಲೆಯ ಜನರು ನೋಟು ನಿಷೇಧಿಸಿರುವುದಕ್ಕೆ ಪರೋಕ್ಷವಾಗಿ ಬೆಂಬಲ ನೀಡಿರುವ ದೃಶ್ಯ ಕಂಡಿದ್ದು ಜನಜೀವನ ಎಂದಿನಂತೆ ಸಾಗಿತು.
ಇನ್ನೊಂದು ಕಡೆ ಹೈಕಮಾಂಡ್ ಆದೇಶದಂತೆ ಅನಿವಾರ್ಯವಾಗಿ ಜಿಲ್ಲಾ ಕಾಂಗ್ರೆಸ್ ನಗರದ ಪುರಭವನ ಎದುರಿನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿತು.
ಕೇಂದ್ರ ಸರ್ಕಾರ 500ರೂ. ಹಾಗೂ 1000ರೂ. ನೋಟು ನಿಷೇಧಿಸಿದ ಹಿನ್ನಲೆಯಲ್ಲಿ ಅದನ್ನು ವಿರೋಧಿಸಿ ಮತ್ತು ನೋಟುಗಳ ಮೇಲಿನ ನಿಷೇಧವನ್ನು ಹಿಂಪಡೆಯಬೇಕೆಂದು ಒತ್ತಾಯಿಸಿ ವಿಪಕ್ಷಗಳು ಮತ್ತು ಕಾರ್ಮಿಕ ಸಂಘಟನೆಗಳು ನವೆಂಬರ್ 28ರಂದು "ಆಕ್ರೋಶ ದಿನ" ಆಚರಣೆ ನಡೆಸಬೇಕೆಂದು ಕರೆ ಕೊಟ್ಟಿತ್ತು.
ಎಂದಿನಂತೆ ಕೆಎಸ್ಸಾರ್ಟಿಸಿ ಬಸ್ಗಳು ಹಾಗೂ ಖಾಸಗಿ ಬಸ್ಸುಗಳು ಬೆಳಗ್ಗೆಯಿಂದ ಓಡಾಟ ಪ್ರಾರಂಭಿಸಿದೆ. ಇದಲ್ಲದೆ ದ.ಕ. ಜಿಲ್ಲೆಯ ಶಾಲಾ ಕಾಲೇಜುಗಳಿಗೆ ರಜೆ ಇರುವುದಿಲ್ಲ ಎಂದು ದ.ಕ. ಜಿಲ್ಲಾಡಳಿತ ಸ್ಪಷ್ಟಪಡಿಸಿತ್ತು.
ಪ್ರಧಾನಮಂತ್ರಿ ನರೇಂದ್ರ ಮೋದಿಯವರು ದೇಶದಲ್ಲಿ ಶೇ. 40ರಷ್ಟು ಕೂಡಿಟ್ಟಿದ್ದ ಕಪ್ಪು ಹಣ ಹೊರಬರುವಂತೆ ಮತ್ತು ನಕಲಿ ನೋಟು ಹಾವಳಿ ವಿರುದ್ದ ಈ ಕ್ರಮ ಕೈಗೊಂಡಿದ್ದಾರೆ. ಅವರ ಈ ಕ್ರಮವನ್ನು ದೇಶದ ಜನತೆ ಶ್ಲಾಘಿಸಿದೆ.
ಕೇಂದ್ರದ ಈ ಕ್ರಮದಿಂದ ಬಡವರು, ಮಧ್ಯಮ ವರ್ಗದವರು ಅಥವಾ ಶ್ರೀಮಂತರಿಗೆ ಯಾವುದೇ ರೀತಿಯಲ್ಲೂ ತೊಂದರೆಯಾಗಿಲ್ಲ. ಕಪ್ಪು ಹಣ ಇಟ್ಟುಕೊಂಡವರಿಗೆ, ತೆರಿಗೆ ವಂಚಕರಿಗೆ ತೊಂದರೆಯಾಗಿರಬಹುದು. ಕೇಂದ್ರದ ಈ ಕ್ರಮವನ್ನು 'ಆಕ್ರೋಶ ದಿನ'ದ ಬದಲು ಸಂತಸದ ದಿನವನ್ನಾಗಿ ಆಚರಿಸಬೇಕು.
ಆದ್ದರಿಂದ ಯಾರೂ ಕೂಡ ಈ ಆಕ್ರೋಶದ ದಿನದಲ್ಲಿ ಪಾಲ್ಗೊಳ್ಳಬಾರದು ಎಂದು ಬಿಜೆಪಿ ಉಡುಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಜಿಲ್ಲೆಯ ಜನತೆಯಲ್ಲಿ ಮನವಿ ಮಾಡಿದ್ದರು. ಅದರಂತೆಯೇ ಜಿಲ್ಲೆಯ ಜನರು ಎಂದಿನಂತೆ ತಮ್ಮ ಕೆಲಸ ಕಾರ್ಯಗಳಲ್ಲಿ ತೊಡಗಿದ್ದರು.
ಆಕ್ರೋಶ ದಿನಾಚರಣೆ: ಕೇಂದ್ರ ಸರ್ಕಾರದ ನೋಟು ನಿಷೇಧದ ವಿರುದ್ಧ ಇಂದು ಆಕ್ರೋಶ ದಿನಾಚರಣೆಯನ್ನು ಆಚರಿಸುವುದಾಗಿ ಜಿಲ್ಲಾ ಕಾಂಗ್ರೆಸ್ ಹಂಗಾಮಿ ಅಧ್ಯಕ್ಷ ಇಬ್ರಾಹೀಂ ಕೋಡಿಜಾಲ್ ತಿಳಿಸಿದ್ದರು. ಈ ಹಿನ್ನಲೆಯಲ್ಲಿ ಇಂದು ಬೆಳಗ್ಗೆ 10:30ಕ್ಕೆ ನೇತೃತ್ವದಲ್ಲಿ ಕಾಂಗ್ರೆಸ್ ವತಿಯಿಂದ ನಗರದ ಪುರಭವನ ಎದುರಿನ ಗಾಂಧಿ ಪ್ರತಿಮೆ ಬಳಿ ಪ್ರತಿಭಟನೆ ನಡೆಸಿದರು.