ಸಂತರ ಸಮ್ಮೇಳನದಲ್ಲಿ ಮರು ಮತಾಂತರಕ್ಕೆ ಚಾಲನೆ
ಮಂಗಳೂರು, ಡಿ. 27: ಮುಂದಿನ ವರ್ಷ ದಕ್ಷಿಣ ಕನ್ನಡದಲ್ಲಿ ವಿಶ್ವ ಸಾಧು ಸಂತರ ಸಮ್ಮೇಳನ ಆಯೋಜಿಸಲಾಗಿದೆ. ಅದೇ ಸಂದರ್ಭ ಮರು ಮತಾಂತರಕ್ಕೆ ಜಿಲ್ಲೆಯಿಂದಲೇ ಅಧಿಕೃತ ಚಾಲನೆ ನೀಡಲಾಗುವುದು ಎಂದು ಅಖಿಲ ಭಾರತ ಹಿಂದೂ ಮಹಾಸಭಾ ವಕ್ತಾರ ಧರ್ಮೇಂದ್ರ ಕೆ. ಹೇಳಿದ್ದಾರೆ.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಹಿಂದೂ ಮಹಾಸಭಾ ವತಿಯಿಂದ ಈಗಾಗಲೇ 150 ಮಂದಿಯನ್ನು ಮರು ಮತಾಂತರಕ್ಕಾಗಿ ಗುರುತಿಸಲಾಗಿದೆ. ಹಿಂದೂ ಮಹಾಸಭಾ ಹಿಂದಿನಿಂದಲೂ ಈ ಕೆಲಸ ಮಾಡುತ್ತಿದೆ. ಐದು ವರ್ಷಗಳ ಹಿಂದೆ 40 ಮಂದಿಯನ್ನು ಮರು ಮತಾಂತರ ಮಾಡಲಾಗಿದೆ ಎಂದು ತಿಳಿಸಿದರು. [ಮರು ಮತಾಂತರಕ್ಕೆ ಕರೆದರೆ ಸ್ಪಂದಿಸುತ್ತೇನೆ]
ಮರು ಮತಾಂತರಗೊಂಡವರು ಯಾವುದೇ ಜಾತಿಯೊಂದಿಗೆ ಗುರುತಿಸಿಕೊಳ್ಳುವ ಅಗತ್ಯವಿಲ್ಲ. ಆದರೆ, ಅವರು ಯಾವುದೇ ಜಾತಿಗೆ ಸೇರಲು ಇಚ್ಛಿಸಿದರೆ ಆ ಜಾತಿಯ ದೀಕ್ಷೆಯನ್ನೂ ನೀಡಲಾಗುವುದು ಎಂದು ತಿಳಿಸಿದರು.
ಗೋಡ್ಸೆ ಮೂರ್ತಿ, ಮಂದಿರ : ಹಿಂದೂ ಮಹಾಸಭಾದ ಕೇಂದ್ರ ಸಮಿತಿ ವತಿಯಿಂದ ಉತ್ತರ ಪ್ರದೇಶದಲ್ಲಿ ನಾಥೂರಾಮ್ ಗೋಡ್ಸೆ ಮೂರ್ತಿ ಪ್ರತಿಷ್ಠಾಪಿಸಿ, ಮಂದಿರ ನಿರ್ಮಿಸಲಾಗುತ್ತಿದೆ. ಕೇಂದ್ರ ಸರ್ಕಾರ ಗೋಡ್ಸೆಯನ್ನು ರಾಷ್ಟ್ರೀಯ ವ್ಯಕ್ತಿ ಎಂದು ಘೋಷಿಸಬೇಕೆಂದು ಅವರು ಆಗ್ರಹಿಸಿದರು. [ಸಂಘ ಪರಿವಾರದಿಂದ ಉಡುಪಿಯಲ್ಲಿ ಘರ್ ವಾಪಸಿ]
ಹಿಂದೂ ಮಹಾಸಭಾ ನಿಷೇಧಿಸಬೇಕು ಎಂದು ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ನೀಡಿರುವ ಹೇಳಿಕೆಯನ್ನು ಧರ್ಮೇಂದ್ರ ಕೆ. ಖಂಡಿಸಿದರು.
ಮಠ ವಿಧೇಯಕ ವಾಪಸ್ ಪಡೆಯಲಿ : ರಾಜ್ಯ ಸರ್ಕಾರ ಮಠ ಮಂದಿರವನ್ನು ಹಿಡಿತಕ್ಕೆ ತೆಗೆದುಕೊಳ್ಳಲು ಮಂಡಿಸಿರುವ ವಿಧೇಯಕವನ್ನು ವಾಪಾಸ್ ಪಡೆಯಬೇಕು. ಸಚಿವ ಆಂಜನೇಯ ಸ್ವಾಮಿ ಅವರನ್ನು ಕಾಂಗ್ರೆಸ್ನಿಂದ ಉಚ್ಛಾಟಿಸಬೇಕು. ಗೋ ಹತ್ಯೆ ತಡೆಯಲು ಕಠಿಣ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು. [ಮರು ಮತಾಂತರಕ್ಕೂ ಕರ್ನಾಟಕಕ್ಕೂ ಇದೆ ಲಿಂಕ್]
ಹಿಂದೂ ಮಹಾಸಭಾ ಜಿಲ್ಲಾಧ್ಯಕ್ಷ ಶ್ರವಣ್ ಕುಮಾರ್, ಉಪಾಧ್ಯಕ್ಷ ಮಂಜುನಾಥ ಹೊಸಬೆಟ್ಟು, ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್ ನೀರುಮಾರ್ಗ, ಕಾರ್ಯಾಧ್ಯಕ್ಷ ಚೇತನ್ ಮಲ್ಯ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.