ನಟ ಪ್ರಕಾಶ್ ರೈ ಸೇರಿದಂತೆ 6 ಜನರಿಗೆ 2017ನೇ ಸಂದೇಶ ಪ್ರಶಸ್ತಿ
ಮಂಗಳೂರು, ಡಿಸೆಂಬರ್, 23 : ನಟ ಪ್ರಕಾಶ್ ರೈ, ಹಿರಿಯ ಸಾಹಿತಿ ಕಮಲಾ ಹಂಪನಾರನ್ನು ಸೇರಿದಂತೆ ಒಟ್ಟು 6 ಮಂದಿ ಗಣ್ಯರನ್ನು ಪ್ರಸಕ್ತ ಸಾಲಿನ 2017ರ ಸಂದೇಶ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.
ಮಂಗಳೂರಿನ ಸಂಸ್ಕೃತಿ ಮತ್ತು ಶಿಕ್ಷಣ ಸಂದೇಶ ಪ್ರತಿಷ್ಠಾನವು ಪ್ರತಿ ವರ್ಷ ವಿವಿಧ ಕ್ಷೇತ್ರಗಳಲ್ಲಿ ಸಾಧನೆಗೈದ ಸಾಧಕರಿಗೆ ಪ್ರಶಸ್ತಿ ನೀಡಿ ಗೌರವಿಸುತ್ತ ಬಂದಿದೆ. ಅದೇ ರೀತಿಯಾಗಿ 2017ನೇ ಸಾಲಿನ ಪ್ರಶಸ್ತಿಗಳನ್ನು ಪ್ರಕಟಿಸಿದೆ.
ಡಾ. ಕಮಲಾ ಹಂಪನಾ(ಸಾಹಿತ್ಯ), ಪ್ರಕಾಶ್ ರೈ(ಮಾಧ್ಯಮ ಪ್ರಶಸ್ತಿ) ಯುವರಾಜ್ ಕೆ(ಕಲಾ), ಅನಿಲ್ ಪತ್ರಾವೊ(ಕೊಂಕಣಿ ಮ್ಯೂಸಿಕ್), ಜಾನ್ ದೇವರಾಜ್ (ವಿಶೇಷ ಪ್ರಶಸ್ತಿ), ಮದರ್ ಥೆರೆಸಾ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್ (ಶಿಕ್ಷಣ ಪ್ರಶಸ್ತಿ) ಇವರಿಗೆ 2017ನೇ ಸಾಲಿನ ಸಂದೇಶ ಪ್ರಶಸ್ತಿ ಸಂದಿದೆ.
2017 ಜನವರಿ 13ರಂದು ಸಾಯಂಕಾಲ 5.30 ಗಂಟೆಗೆ ಮಂಗಳೂರಿನ ಸಂದೇಶ ಆವರಣದಲ್ಲಿ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಲಿದೆ ಎಂದು ಸಂದೇಶ ಪ್ರತಿಷ್ಠಾನದ ನಿರ್ದೇಶಕ ಫಾ. ವಿಕ್ಟರ್ ವಿಜಯ್ ಲೋಬೊ ತಿಳಿಸಿದ್ದಾರೆ.
ಕಲೆ,ಸಂಸ್ಕ್ರತಿ ಮತ್ತು ಶಿಕ್ಷಣವನ್ನು ಪೋಷಿಸಲು 1989ರಲ್ಲಿ ಕರ್ನಾಟಕ ಪ್ರಾಂತೀಯ ಕೆಥೋಲಿಕ್ ಬಿಷಪರ ಮಂಡಳಿಯಿಂದ ಆರಂಭಿಸಲ್ಪಟ್ಟ ಸಂದೇಶ ಪ್ರತಿಷ್ಠಾನವು ವಿವಿಧ ಚಟುವಟಿಕೆಗಳ ಜೊತೆಗೆ ಈ ಪ್ರಶಸ್ತಿ ವಿತರಿಸುತ್ತಿದೆ.
ಕಳೆದ 26 ವರ್ಷಗಳಿಂದ ಕನ್ನಡ, ಕೊಂಕಣಿ ಹಾಗೂ ತುಳು ಸಾಹಿತ್ಯ, ಸಂಸ್ಕ್ರತಿಗೆ ಹಾಗೂ ಸಮಾಜಕ್ಕೆ ವಿವಿಧ ಕೊಡುಗೆ ನೀಡಿದ ನಾಡಿನ ಹಿರಿಯ ಸಾಹಿತಿಗಳನ್ನು, ಕಲಾವಿದರನ್ನು, ಶಿಕ್ಷಕರನ್ನು ಹಾಗೂ ಸಮಾಜ ಸೇವಕರನ್ನ ಗುರುತಿಸಿ ರಾಜ್ಯ ಮಟ್ಟದ ಪ್ರಶಸ್ತಿ ಗೌರವ ನೀಡಿ ಸನ್ಮಾನಿಸುತ್ತ ಬಂದಿದೆ.
ಈ ಪ್ರಶಸ್ತಿಗಳಿಗೆ ಯಾವುದೇ ಆರ್ಜಿಗಳನ್ನ ಪಡೆದುಕೊಳ್ಳದೇ ಈ ವರ್ಷ ಹಿರಿಯ ಸಾಹಿತಿ ನಾ. ಡಿಸೋಜಾರ ನೇತೃತ್ವದ ಆಯ್ಕೆ ಸಮಿತಿಯು ಸಾಧಕರನ್ನ ಆಯ್ಕೆ ಮಾಡಿದೆ.