ಕೊಲೆಗಡುಕರ ಜೊತೆ ಪಿತೂರಿದಾರರನ್ನೂ ಬಂಧಿಸಿ: ರೈ
ಮಂಗಳೂರು, ಜೂನ್ 27 : ಜಿಲ್ಲೆಯಲ್ಲಿ ಶಾಂತಿ ಕದಡುತ್ತಿರುವ ಕೊಲೆಗಡುಕರ ಜೊತೆ ಕೃತ್ಯ ಎಸಗಲು ಪ್ರಚೋದನೆ ನೀಡಿದವರನ್ನೂ ಬಂಧಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ.ರಮಾನಾಥ ರೈ ಆಗ್ರಹಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಭವನದಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, "ಜಿಲ್ಲೆಯ ಶಾಂತಿ, ಸುವ್ಯವಸ್ಥೆಯ ನಿಟ್ಟಿನಲ್ಲಿ ಜಿಲ್ಲಾ ಉಸ್ತುವಾರಿ ಸಚಿವನಾಗಿ ನಾನು ಜಿಲ್ಲಾ ಎಸ್ಪಿ ಜೊತೆ ಮಾತನಾಡಿದ್ದರಲ್ಲಿ ತಪ್ಪಿಲ್ಲ. ಅದನ್ನು ನಾನು ಈಗಲೂ ಸಮರ್ಥಿಸುತ್ತಿದ್ದೇನೆ ಎಂದು ವಿಡಿಯೋ ಬಗ್ಗೆ ಸಮರ್ಥನೆ" ಮಾಡಿಕೊಂಡರು.
ಪ್ರಭಾಕರ ಭಟ್ ವಿರುದ್ಧ ಕೇಸ್ ಜಡಿದು ಬಂಧಿಸಿ, ರೈ ವಿಡಿಯೋ ವೈರಲ್
ನಾನು ಬಂಟ್ವಾಳ ಐಬಿಯಲ್ಲಿ ಎಸ್ಪಿ ಜೊತೆ ಮಾತನಾಡಿದ ಒಂದು ಭಾಗವನ್ನು ಮಾತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದು ಬಿಡಲಾಗಿದೆ. ಅದನ್ನೇ ಮುಂದಿಟ್ಟುಕೊಂಡು ಕೆಲವರು ವಿರೋಧ ವ್ಯಕ್ತಪಡಿಸತೊಡಗಿದರು. ಆದರೆ, ವಾಸ್ತವ ವಿಚಾರವನ್ನು ಮರೆಮಾಚಲಾಗಿದೆ ಎಂದು ರೈ ಹೇಳಿದರು.
ನಾನು ಯಾವ ಕೊಲೆಗಾರನಿಗೂ ಆಶ್ರಯ ಕೊಟ್ಟವನಲ್ಲ. ಪ್ರಚೋದನಕಾರಿ ಭಾಷಣವನ್ನೂ ಮಾಡಿದವನಲ್ಲ. ಕೊಲೆಗಾರರಿಗೆ ಆಶ್ರಯ ಕೊಟ್ಟವರು, ಪ್ರಚೋದನಕಾರಿ ಭಾಷಣ ಮಾಡಿದವರನ್ನು ಬಂಧಿಸುವ ಬಗ್ಗೆ ನಾನು ಮುಖ್ಯಮಂತ್ರಿ, ಡಿಜಿಪಿ ಹಾಗೂ ಮತ್ತಿತರ ಹಿರಿಯ ಅಧಿಕಾರಿಗಳ ಜೊತೆ ಮಾತನಾಡಿದ್ದೇನೆ ಎಂದರು.
ನನ್ನನ್ನು ಹಿಂದು ಮತ್ತು ಮುಸ್ಲಿಂ ಮತೀಯವಾದಿಗಳು ಟೀಕಿಸುತ್ತಲೇ ಇದ್ದಾರೆ. ಆ ಮೂಲಕ ನಾನು ಅಪ್ಪಟ ಜಾತ್ಯತೀತ ಎಂಬುದು ಸಾಬೀತಾಗಿದೆ. ಸಾಮರಸ್ಯಕ್ಕಾಗಿ ಜೀವ ಬದಿಗಿಟ್ಟು ಕೆಲಸ ಮಾಡಲು ನಾನು ತಯಾರಿದ್ದೇನೆ ಯಾವ ಬೆದರಿಕೆ ಕರೆ ಬಂದರೂ ನಾನೇನು ಹೇಳಿಕೊಂಡಿಲ್ಲ ಅಥವಾ ಕರೆಗಳಿಗೆ ಭಯಪಡುವವನ್ನು ನಾನಲ್ಲ .
ಕೊಲೆಗಾರರನ್ನು ಹಿಡಿದರೆ ಸಾಮರಸ್ಯ ಸಾಧ್ಯವಿಲ್ಲ. ಕೊಲೆಗೆ ಪಿತೂರಿ ಮಾಡಿದವರನ್ನು ಬಂಧಿಸಿದರೆ ಮಾತ್ರ ಸಾಮರಸ್ಯ ಸಾಧ್ಯ ಎಂದರು.