ಸ್ವಾತಂತ್ರ್ಯೋತ್ಸವ ವಿಶೇಷ: ಪುತ್ತೂರಿನಲ್ಲಿ ಯೋಧರಿಗೊಂದು ದೇಗುಲ!
ವಿಶ್ವದ ಅತೀ ಎತ್ತರದ ಯುದ್ಧ ಭೂಮಿ ಸಿಯಾಚಿನ್ ನಲ್ಲಿರುವಂತೆ ಪುತ್ತೂರಿನಲ್ಲೂ ಯೋಧರಿಗಾಗಿ ಒಂದು ದೇವಾಲಯ ನಿರ್ಮಾಣಗೊಂಡಿದೆ. ಪುತ್ತೂರಿನಲ್ಲಿ ಸಿದ್ಧಗೊಂಡಿರುವ ಈ ಅಮರ್ ಜವಾನ್ ಜ್ಯೋತಿ ದೇಶದ ಮೂರನೇ ಅಮರ್ ಜವಾನ್ ಜ್ಯೋತಿ ಸ್ಮಾರಕವಾಗಿಯೂ ಹೆಸರು ಪಡ
ಮಂಗಳೂರು, ಆಗಸ್ಟ್ 15: ವಿಶ್ವದ ಅತೀ ಎತ್ತರದ ಯುದ್ಧ ಭೂಮಿ ಸಿಯಾಚಿನ್ ನಲ್ಲಿರುವಂತೆ ಪುತ್ತೂರಿನಲ್ಲೂ ಯೋಧರಿಗಾಗಿ ಒಂದು ದೇವಾಲಯ ನಿರ್ಮಾಣಗೊಂಡಿದೆ.
ಪ್ರಾಣವನ್ನೆ ದೇಶಕ್ಕಾಗಿ ಮುಡಿಪಾಗಿಟ್ಟು ದೇಶದ ಗಡಿಕಾಯುವ ಸೈನಿಕರು ಸದಾ ಅಮರ ಎನ್ನುವ ಸಂದೇಶ ಸಾರುವ ದೇಗುಲ ಇದಾಗಿದೆ. ವರ್ಷದ 365 ದಿನವೂ ಈ ದೇಗುಲದಲ್ಲಿ ಜ್ಯೋತಿ ಸದಾ ಪ್ರಜ್ವಲಿತವಾಗಿರಲಿದೆ.
ದಕ್ಷಿಣಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಲೋಕಾರ್ಪಣೆಗಾಗಿ ಸಿದ್ಧಗೊಂಡಿರುವ ಯೋಧರ ದೇಗುಲ. ಮಳೆ, ಚಳಿ, ಬಿಸಿಲು ಹೀಗೆ ಎಲ್ಲಾ ವಾತಾವರಣದಲ್ಲೂ ತನ್ನ ಪ್ರಾಣವನ್ನೂ ಲೆಕ್ಕಿಸದೆ ದೇಶದ ಗಡಿಕಾಯುವ ಯೋಧರು ಯಾವತ್ತಿಗೂ ಅಮರರು ಎನ್ನುವ ಸಂದೇಶವನ್ನು ಈ ದೇಗುಲ ರಲಿದೆ.
ಜಗತ್ತಿನ ಅತೀ ಎತ್ತರದ ಯುದ್ಧಭೂಮಿ ಸಿಯಾಚಿನ್ ನಲ್ಲಿ ಯಾವ ರೀತಿಯಲ್ಲಿ ಓ ಪಿ ಬಾಬಾನ ಮಂದಿರವಿದೆಯೆ ಅದೇ ರೀತಿಯಲ್ಲಿ ಪುತ್ತೂರಿನಲ್ಲಿ ನಿರ್ಮಾಣಗೊಂಡ ಈ ಸ್ಮಾರಕವಿರಲಿದೆ.
ಪುತ್ತೂರಿನಲ್ಲಿ ಸಿದ್ಧಗೊಂಡಿರುವ ಈ ಅಮರ್ ಜವಾನ್ ಜ್ಯೋತಿ ದೇಶದ ಮೂರನೇ ಅಮರ್ ಜವಾನ್ ಜ್ಯೋತಿ ಸ್ಮಾರಕವಾಗಿಯೂ ಹೆಸರು ಪಡೆದಿದೆ. ವರ್ಷದ 365 ದಿನವೂ 24 ಗಂಟೆ ಸದಾಕಾಲ ಉರಿಯಲಿರುವ ಸ್ಮಾರಕದ ಈ ಜ್ಯೋತಿ ಯೋಧರ ದೇಗುಲವೂ ಆಗಲಿದೆ.
ಯಾವ ರೀತಿಯಲ್ಲಿ ದೇವಸ್ಥಾನದ ಮೇಲೆ ಶಿಖರ ಕಳಶವಿರುತ್ತದೋ ಅದೇ ಪ್ರಕಾರ ಈ ಸ್ಮಾರಕದ ಮೇಲೂ ಶಿಖರ ಕಳಶವನ್ನು ಪ್ರತಿಷ್ಟಾಪನೆ ಮಾಡುವ ಮೂಲಕ ಇದಕ್ಕೆ ಸ್ಮಾರಕಕ್ಕಿಂತ ದೇಗುಲದ ಸ್ಪರ್ಷವನ್ನು ಕೊಡಲಾಗಿದೆ. ಇಂದು ಸ್ವಾತಂತ್ರ ದಿನಾಚರಣೆ ಅಂಗವಾಗಿ ಈ ದೇಗುಲ ಲೋಕಾರ್ಪಣೆಗೊಂಡಿದೆ. ಕಳಶದ ಪ್ರತಿಷ್ಟಾಪನೆಯೂ ನಡೆದಿದೆ.
ಪುತ್ತೂರಿನಲ್ಲಿ ನಿರ್ಮಾಣಗೊಂಡ ದೇಶದ ಮೂರನೇ ಅಮರ್ ಜವಾನ್ ಜ್ಯೋತಿ ಸ್ಮಾರಕದ ಉದ್ಘಾಟನೆ ಇಂದು ನೆರವೇರಿದೆ. ಶೃಂಗೇರಿ ಮಠದ ಯತೀವರ್ಯರ ನೇತೃತ್ವದಲ್ಲಿ ಸ್ಮಾರಕಕ್ಕೆ ಕಲಶವನ್ನು ಇಡುವ ಪ್ರಕ್ರಿಯೆಯೂ ಶಾಸ್ತ್ರೋಕ್ತವಾಗಿ ನೆರವೇರಿಸಲಾಯಿತು.
ಗಣ್ಯರು ಉಪಸ್ಥಿತಿ
ನಿವೃತ್ತ ಸೇನಾಧಿಕಾರಿ ಬ್ರಿಗೇಡಿಯರ್ ಎನ್.ಕೆ. ಹೆಗ್ಡೆ ಈ ಸ್ಮಾರಕದಲ್ಲಿ ವರ್ಷ ಪೂರ್ತಿ ನಿರಂತರವಾಗಿ ಬೆಳಗುವಂಥ ಅಮರ ಜ್ಯೋತಿಯನ್ನು ಬೆಳಗುವ ಮೂಲಕ ಚಾಲನೆ ನೀಡಿದರು. ಪುತ್ತೂರು ಶಾಸಕಿ ಶಕುಂತಲಾ ಶೆಟ್ಟಿ, ಸಹಾಯಕ ಕಮಿಷನರ್ ರಘುನಂದನ್ ಮೂರ್ತಿ, ಮಾಜಿ ಸೈನಿಕರು ಸೇರಿದಂತೆ ಹಲವು ಗಣ್ಯರು ಹಾಗೂ ವಿದ್ಯಾರ್ಥಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ನಗರಸಭೆಯಿಂದ ಭೂಮಿ
ಪುತ್ತೂರಿನ ಅಂಬಿಕಾ ವಿದ್ಯಾಸಮೂಹ ಸಂಸ್ಥೆ ತನ್ನ ದೇಶಭಕ್ತಿಯ ದ್ಯೋತಕವಾಗಿ ಈ ಸ್ಮಾರಕವನ್ನು ನಿರ್ಮಿಸಿದ್ದು, ಪುತ್ತೂರು ನಗರಸಭೆಯ ಇದಕ್ಕೆ ಬೇಕಾದ ಭೂಮಿ ನೀಡಿದೆ.
ಅಮರ್ ಜವಾನ್ ನುಡಿ
ಈ ದೇಗುಲ ಕಪ್ಪು ಅಮೃತಶಿಲೆಯ ಸ್ಮಾರಕ ಸಮಾಧಿಯಾಗಿದ್ದು, ಮೇಲ್ಬಾಗದಲ್ಲಿ ಒಂದು ಬಂದೂಕನ್ನು ಇರಿಸಿ ಯೋಧರ ಶಿರಸ್ತ್ರಾಣವೊಂದನ್ನು ಅದರ ನೆತ್ತಿಗೇರಿಸಲಾಗಿದೆ. ಸ್ಮಾರಕ ಸಮಾಧಿಯ ಪ್ರತಿ ಮುಖವೂ ಬಂಗಾರದಲ್ಲಿ ಕೆತ್ತಲಾಗಿರುವ 'ಅಮರ್ ಜವಾನ್' ಎಂಬ ಪದಗಳನ್ನು ಹೊಂದಿದೆ.
ಜಿಲ್ಲಾಡಳಿತದ ಜತೆ ಮಾತುಕತೆ
ಯೋಧರಿಗೆ ಸಂಬಂದಪಟ್ಟ ಎಲ್ಲಾ ಕಾರ್ಯಕ್ರಮಗಳು ಇನ್ನು ಮುಂದೆ ಇದೇ ಸ್ಥಳದಲ್ಲಿ ನಡೆಸಲು ತೀರ್ಮಾನಿಸಲಾಗಿದೆ. ದಕ್ಷಿಣಕನ್ನಡ ಜಿಲ್ಲೆಗೆ ಸಂಬಂಧಿಸಿದ ಯೋಧರು ಹುತಾತ್ಮರಾದರೆ ಅವರ ಪ್ರಾರ್ಥಿವ ಶರೀರವನ್ನು ಇಲ್ಲಿಗೆ ತಂದು ಸಾರ್ವಜನಿಕರ ದರ್ಶನಕ್ಕೆ ಇಡುವಂಥ ವ್ಯವಸ್ಥೆಯ ಬಗ್ಗೆಯೂ ಇದೀಗ ಜಿಲ್ಲಾಡಳಿತದ ಜೊತೆಗೆ ಮಾತುಕತೆಗಳೂ ನಡೆಯುತ್ತಿದೆ.
ಸಾರ್ವಜನಿಕರಲ್ಲಿ ಶ್ರದ್ಧೆ ಮೂಡಿಸುವ ಪರಿ
ದೇಶಕ್ಕಾಗಿ , ದೆಶದ ಜನರ ರಕ್ಷಣೆಗಾಗಿ ತಮ್ಮ ಪ್ರಾಣ ಪಣಕ್ಕಿಡುವ ವೀರ ಯೋಧರಿಗೆ ಪ್ರತಿಯೊಬ್ಬ ನಾಗರಿಕ ತಲೆಬಾಗಲೇ ಬೇಕು. ಈ ನಿಟ್ಟಿನಲ್ಲಿ ಪುತ್ತೂರಿನ ಈ ಅಮರ್ ಜವಾನ್ ಜ್ಯೋತಿ ಸಾರ್ವಜನಿಕರಿಗೆ ಯೋಧರ ಬಗ್ಗೆ ಶ್ರದ್ಧೆ ಮೂಡಿಸುವ ಕೇಂದ್ರವಾಗಿಯೂ ಗುರುತಿಸಲ್ಪಡಲಿದೆ.