ಮಂಗಳೂರು: ನವಜಾತ ಕರುವಿಗೆ ಎರಡು ತಲೆ, 4 ಕಣ್ಣು!
ಮಂಗಳೂರು, ಜನವರಿ. 16 : ಮಂಗಳೂರಿನ ಬಜ್ಪೆ ಸಮೀಪದ ಕತ್ತಲ್ ಸಾರ್ನ ಗುರುಂಪೆ ನಿವಾಸಿ ಹೇಮನಾಥ ಶೆಟ್ಟಿ ಎಂಬುವರ ಮನೆಯ ಹಸುವೊಂದು ಎರಡು ತಲೆ, ನಾಲ್ಕು ಕಣ್ಣುಗಳುಳ್ಳ ವಿಚಿತ್ರ ಕರುವೊಂದಕ್ಕೆ ಜನ್ಮ ನೀಡಿದ್ದು, ಗ್ರಾಮಸ್ಥರ ಆಕರ್ಷಣೆಗೆ ಕಾರಣವಾಗಿದೆ.
8 ವರ್ಷಗಳ ಹಿಂದೆ ಹೇಮನಾಥ ಶೆಟ್ಟಿ ಅವರು ಖರೀದಿಸಿದ್ದ ಈ ಹಸು ಈಗಾಗಲೇ ಎರಡು ಬಾರಿ ಕರು ಹಾಕಿದ್ದು, ಇದೀಗ ಮೂರನೇ ಕರುವಿಗೆ ಜನ್ಮ ನೀಡಿದೆ. ಆದರೆ, ಈ ಕರುವಿಗೆ ಎರಡು ತಲೆ, ನಾಲ್ಕು ಕಣ್ಣು, ಮೂರು ಕಿವಿಗಳಿದ್ದು, ದೇಹ ಮಾತ್ರ ಒಂದೇ ಇದೆ.
ಎರಡು ತಲೆಯ ಭಾಗ ಕೂಡಿಕೊಂಡಿವೆ. ಕರುವಿಗೆ ಬಾಟಲ್ ಮೂಲಕ ಮನೆಯವರು ಹಾಲುಣಿಸುತ್ತಿದ್ದಾರೆ. ಇನ್ನು ಈ ವಿಶಿಷ್ಟವಾಗಿ ಜನಿಸಿದ ಕರು ನೋಡಲು ಹೇಮನಾಥ ಶೆಟ್ಟಿ ಅವರ ಮನೆಗೆ ಜನಸಾಗರವೇ ಹರಿದು ಬರುತ್ತಿದೆ.
ಬೇರೊಂದು ಅಂಬೇಡ್ಕರ್ ಭವನ ಸುದ್ದಿ : ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಗರದಲ್ಲಿ ಅಂಬೇಡ್ಕರ್ ಭವನ ನಿರ್ಮಾಣ ಮಾಡುವ ನಿರ್ಧಾರ ತೆಗೆದುಕೊಳ್ಳಲಾಗಿದೆ.
ಈ ವಿಚಾರದಲ್ಲಿ ಶಾಸಕಿ ಶಕುಂತಲಾ ಶೆಟ್ಟಿ ಅಂಬೇಡ್ಕರ್ ವಿರೋಧಿ ಹಾಗೂ ದಲಿತ ಅಭಿವೃದ್ಧಿ ವಿರೋಧಿ ಧೋರಣೆ ತೋರುತ್ತಿದ್ದಾರೆ ಎಂದು ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಎಂ.ಕೂಸಪ್ಪ ಆರೋಪಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಅವರು, 'ದಲಿತರೊಂದಿಗೆ ಚೆಲ್ಲಾಟವಾಡಿದಲ್ಲಿ ಅವರು ರಾಜಕೀಯಕ್ಕೆ ಇತಿಶ್ರೀ ಹಾಡುವ ಕಾಲ ಬರಲಿದೆ 'ಎಂದು ಎಚ್ಚರಿಕೆ ನೀಡಿದ್ದಾರೆ.
ತಾಲೂಕು ಮಟ್ಟದ ಅಂಬೇಡ್ಕರ್ ಭವನವನ್ನು ತಾಲೂಕಿನ ಕೇಂದ್ರ ಸ್ಥಾನದಲ್ಲಿ ನಿರ್ಮಿಸುವಂತೆ ಕಳೆದ ಹಲವಾರು ವರ್ಷಗಳಿಂದ ದಲಿತ ಸಂಘಟನೆಗಳು ಬೇಡಿಕೆ ಸಲ್ಲಿಸುತ್ತಲೇ ಬಂದಿವೆ.
ಆದರೆ, ಇದೀಗ ಶಾಸಕರು ಅಂಬೇಡ್ಕರ್ ಭವನವನ್ನು ಕೇಂದ್ರ ಸ್ಥಾನದಿಂದ ಸುಮಾರು 5 ಕಿ.ಮೀ. ದೂರದಲ್ಲಿರುವ ಗುಂಪುಕಲ್ಲು ಚಿಂಗಾಣಿ ಎಂಬಲ್ಲಿ ನಿರ್ಮಿಸಲು ಮುಂದಾಗಿದೆ. ಈ ಸ್ಥಳವು ಯಾವುದೇ ರೀತಿಯಲ್ಲಿ ಅಂಬೇಡ್ಕರ್ ಭವನ ನಿರ್ಮಾಣಕ್ಕೆ ಸೂಕ್ತವಾಗಿಲ್ಲ.
ಇಲ್ಲಿ ನಿರ್ಮಿಸುವುದಕ್ಕೆ ದಲಿತ ಸಂಘಟನೆಗಳ ವಿರೋಧವಿದೆ. ಕೇಂದ್ರಸ್ಥಾನದಿಂದ ದೂರದ ಮೂಲೆಯಲ್ಲಿ ಅಂಬೇಡ್ಕರ್ ಭವನ ಸ್ಥಾಪನೆಗೆ ಮುಂದಾಗಿರುವ ಶಾಸಕರ ನಿಲುವು ಅನುಮಾನಾಸ್ಪದವಾಗಿದೆ ಎಂದು ಆರೋಪಿಸಿದರು.