ನಾಲ್ಕು ತಾಸಿನಲ್ಲಿ ಮಂಗಳೂರಿನಿಂದ ಬೆಂಗಳೂರು ತಲುಪುವ ರಸ್ತೆ ಯೋಜನೆ
ಮಂಗಳೂರು, ಮೇ 27: ಮಂಗಳೂರಿನಿಂದ ಬೆಂಗಳೂರಿಗೆ ಕೇವಲ ನಾಲ್ಕು ಗಂಟೆಯಲ್ಲಿ ತಲುಪಬಹುದಾದ ರಸ್ತೆ ನಿರ್ಮಾಣದ ಮೆಗಾ ಯೋಜನೆಗೆ ಸರಕಾರ ಮಂಜೂರಾತಿ ನೀಡಿದೆ.
ಭಾರತ ಮಾಲಾ ಎಂಬ ಈ ಯೋಜನೆಗೆ ಕೇಂದ್ರ ಸರಕಾರ 1.18 ಲಕ್ಷ ಕೋಟಿ ರುಪಾಯಿಗಳನ್ನು ಮಂಜೂರು ಮಾಡಿದ್ದು, ಐದು ವರ್ಷಗಳಲ್ಲಿ ಯೋಜನೆ ಕಾರ್ಯಗತ ಮಾಡಲಾಗುವುದು ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದ್ದಾರೆ.
ಕೇಂದ್ರದ ನರೇಂದ್ರ ಮೋದಿ ಸರಕಾರ ಮೂರು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಸಾಧನೆಯನ್ನು ವಿವರಿಸಲು ಶನಿವಾರ ಅವರು ಮಾತನಾಡಿ, ಭಾರತ ಮಾಲಾ ಎಂಬ ಯೋಜನೆಯಲ್ಲಿ ದೇಶದ ನಾಲ್ಕು ರಸ್ತೆಗಳನ್ನು ಮೊದಲ ಹಂತದಲ್ಲಿ ಅಭಿವೃದ್ಧಿಪಡಿಸಲು ಆರಿಸಲಾಗಿದೆ ಎಂದರು.[ಸೌದಿ ಅರೇಬಿಯಾದಲ್ಲಿ ಸಂಕಷ್ಟಕ್ಕೀಡಾಗಿದ್ದ ಮಂಗಳೂರು ಯುವಕರು ವಾಪಸ್]
ಮಂಗಳೂರು - ಬೆಂಗಳೂರು ಹೈಸ್ಪೀಡ್ ಹೆದ್ದಾರಿಗೆ 1.18 ಲಕ್ಷ ಕೋಟಿ ರುಪಾಯಿ ವೆಚ್ಚವಾಗಲಿದ್ದು, ಹೆದ್ದಾರಿ ನಿರ್ಮಾಣದ ಬಳಿಕ ಕೇವಲ ನಾಲ್ಕು ಗಂಟೆಯಲ್ಲಿ ಮಂಗಳೂರಿನಿಂದ ಬೆಂಗಳೂರಿಗೆ ತಲುಪಬಹುದು. ಈ ಹೆದ್ದಾರಿಯಲ್ಲಿ ಎಲ್ಲೂ ಅನಗತ್ಯ ಯು ಟರ್ನ್ ಇರುವುದಿಲ್ಲ, ತಿರುವುಗಳ ಪ್ರಮಾಣ ಕಡಿಮೆ ಇರಲಿದೆ. ರಸ್ತೆ ವಿಶಾಲವಾಗಿರಲಿದ್ದು, ಸರಕು ವಾಹನಗಳಿಗೆ ಪ್ರತ್ಯೇಕ ಮಾರ್ಗ ಇರುತ್ತದೆ ಎಂದರು.
ಮೊದಲ ಹಂತದಲ್ಲಿ ಮಂಗಳೂರು - ಬೆಂಗಳೂರು, ಮುಂಬೈ - ಕೋಲ್ಕತ್ತಾ , ಲೂಧಿಯಾನ - ಕಾಂಡ್ಲಾ, ಪೋರಬಂದರ್ - ಸಿಲ್ಚಾರ್ ರಸ್ತೆಗಳನ್ನು ಆರಿಸಲಾಗಿದೆ. ಇದಕಾಗಿ ಒಟ್ಟು 3.8 ಲಕ್ಷ ಕೋಟಿ ರುಪಾಯಿ ಮಂಜೂರು ಮಾಡಲಾಗಿದೆ ಎಂದರು.[ಮಂಗಳೂರು ಪೊಲೀಸ್ ಕಮಿಷನರ್ ನೇಮಕ ರದ್ದು, ಖಾದರ್ ಕೈವಾಡ?]
ಮಂಗಳೂರಿಗೆ ಪ್ರತ್ಯೇಕ ರೈಲು ವಿಭಾಗ ಬೇಕು ಎನ್ನುವುದು ಹಲವು ವರ್ಷಗಳ ಬೇಡಿಕೆಗೆ ಈಗಲೂ ಬದ್ಧನಾಗಿದ್ದೇನೆ. ಸದ್ಯದಲ್ಲೇ ಮಂಗಳೂರು-ಬೆಂಗಳೂರು ರೈಲು ಪ್ರಯಾಣ 16 ಗಂಟೆಯಿಂದ 12ಕ್ಕೆ ಇಳಿಯಲಿದೆ. ಮಂಗಳೂರು ಜಂಕ್ಷನ್ ನಿಂದ ಹೊರಡುವ ಗೊಮ್ಮಟೇಶ್ವರ ಎಕ್ಸ್ಪ್ರೆಸ್ (ಕುಡ್ಲ ಎಕ್ಸ್ಪ್ರೆಸ್) ಕೆಲವೇ ದಿನಗಳಲ್ಲಿ ಮಂಗಳೂರು ಸೆಂಟ್ರಲ್ನಿಂದ ಸಂಚರಿಸಲಿದೆ ಎಂದಿದ್ದಾರೆ.