ಸೌಹಾರ್ದತೆ, ಸಮಯಪ್ರಜ್ಞೆ ಮೆರೆದ ಬಂಟ್ವಾಳದ ಅಬ್ದುಲ್ ನನ್ನು ಶ್ಲಾಘಿಸಿ
ಮಂಗಳೂರು,ಫೆಬ್ರವರಿ,24: ತನ್ನ ಪ್ರಾಣದ ಲೆಕ್ಕವಿಲ್ಲದೆ ಆಕೆಯ ಪ್ರಾಣವನ್ನು ರಕ್ಷಿಸಲು ಆತ ಮುಂದಾದ. ಆದರೆ ವಿಧಿವಶವೋ ಏನೋ ಆಕೆಯ ಪ್ರಾಣ ಉಳಿಯಲಿಲ್ಲ. ಆದರೆ ಆತನ ಸಾಹಸವನ್ನು ಊರಿಗೇ ಊರೇ ಹೊಗಳಿದೆ. ಆತನ ಮಾನವೀಯತೆಗೆ ಇಡೀ ಊರಿನ ಜನತೆಯೇ ತಲೆಬಾಗಿದೆ.
ಹೌದು ಇಂತಹದೊಂದು ಘಟನೆ ನಡೆದಿರುವುದು ಬಂಟ್ವಾಳ ಸಮೀಪದ ಇರಾ ದರ್ಕಾಸ್ ಎಂಬಲ್ಲಿ. ಆಕಸ್ಮಿಕ ದುರಂತದಲ್ಲಿ ಸಾವನ್ನಪ್ಪಿದ ಮಹಿಳೆಯೇ ಬಬಿತಾ (23), ಇವರ ಪ್ರಾಣ ರಕ್ಷಿಸಲು ಮುಂದಾದ ವ್ಯಕ್ತಿಯೇ ಅಬ್ದುಲ್ಲಾ (62).[ಗೊತ್ತುಗುರಿಯಿಲ್ಲದೆ ತೆವಳುತ್ತಾ ಸಾಗುವ ಬುರಾಕ್ ಸಿಂಗ್! ]
ಮಾನವೀಯತೆ ಮೆರೆದ ಘಟನೆ:
ಬಂಟ್ವಾಳ ಸಮೀಪದ ಇರಾ ದರ್ಕಾಸ್ ನಲ್ಲಿ ಬಬಿತಾ ಗುರುವಾರ ಬೆಳಿಗ್ಗೆ ನೀರು ಸೇದಲು ಬಾವಿ ಬಳಿ ಬಂದಿದ್ದಾಳೆ. ನೀರು ಸೇದುತ್ತಿರುವ ಅವಧಿಯಲ್ಲಿ ಅಕಸ್ಮತ್ತಾಗಿ ಆಯತಪ್ಪಿ ಬಾವಿಗೆ ಬಿದ್ದಿದ್ದಾಳೆ. ಅಲ್ಲಿ ಇದ್ದ ಹಲವರಿಗೆ ವಿಷಯ ತಿಳಿದರೂ ಆಕೆಯನ್ನು ರಕ್ಷಿಸುವ ಸಾಹಸಕ್ಕೆ ಕೈಹಾಕಲು ಯಾರು ಮುಂದಾಗಲಿಲ್ಲ.
ಆದರೆ ವಿಷಯ ತಿಳಿದ ಅಬ್ದುಲ್ಲಾ ತನ್ನ ಪ್ರಾಣದ ಬಗ್ಗೆ ಕೊಂಚವೂ ಯೋಚಿಸದೆ ತಕ್ಷಣಕ್ಕೆ ಬಾವಿಗೆ ಹಾರಿ ಬಬಿತಾಳನ್ನು ಕಾಪಾಡಲು ಮುಂದಾಗಿದ್ದಾರೆ. ಆದರೆ ಅವರ ಸಾಹಸ ಮತ್ತು ಸಮಯಪ್ರಜ್ಞೆ ವಿಫಲವಾಗಿದ್ದು, ಯುವತಿಯು ಸಾವನ್ನಪ್ಪಿದ್ದಾಳೆ. ಆದರೆ ಈತ ಇಡೀ ಊರಿನವರ ಶ್ಲಾಘನೆಗೆ ಒಳಗಾಗಿದ್ದು, ಇರಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಮುಕ್ತಕಂಠದಿಂದ ಅಭಿನಂದಿಸಿದ್ದಾರೆ.