ರಾಜ್ಯದಾದ್ಯಂತ 7 ಲಕ್ಷಕ್ಕೂ ಹೆಚ್ಚು ಜನರಿಂದ ಧಾರ್ಮಿಕ ಕೇಂದ್ರಗಳ ಸ್ವಚ್ಛ
ಮಂಗಳೂರು, ಜನವರಿ. 16 : ಸಂಕ್ರಾತಿಯೊಳಗಾಗಿ ಎಲ್ಲ ಶ್ರದ್ಧಾ ಕೇಂದ್ರಗಳನ್ನು(ದೇವಸ್ಥಾನ) ಸ್ವಚ್ಛಗೊಳಿಸಬೇಕೆಂಬ ಧರ್ಮಸ್ಥಳ ಧರ್ಮಾಧಿಕಾರಿ ಡಾ ವೀರೇಂದ್ರ ಹೆಗ್ಗಡೆಯವರ ಕರೆಗೆ ರಾಜ್ಯದಾದ್ಯಂತ ಅಭೂತಪೂರ್ವ ಸ್ಪಂದನ ದೊರಕಿದೆ.
ಒಂದು ತಿಂಗಳ ಕಾಲ ಅವಿರತವಾಗಿ ನಡೆದ ಈ ಅಭಿಯಾನದಲ್ಲಿ 7,19,000 ಜನರು ಸ್ವಯಂ ಪ್ರೇರಿತರಾಗಿ ಶ್ರದ್ಧಾ ಕೇಂದ್ರಗಳನ್ನು ಸ್ವಚ್ಛಗೊಳಿಸುವಲ್ಲಿ ತೊಡಗಿರುತ್ತಾರೆ.
ರಾಜ್ಯದ ಎಲ್ಲ ಸ್ವಸಹಾಯ ಸಂಘಗಳ ಸದಸ್ಯರು, ಯೋಜನೆಯ ಕಾರ್ಯಕರ್ತರು, ಮಠಾಧೀಶರುಗಳು, ಸಂಘ ಸಂಸ್ಥೆಗಳು, ಕೈಜೋಡಿಸಬೇಕೆಂದು ಅವರು ವಿನಂತಿಸಿದ್ದರು.[ಧಾರ್ಮಿಕ ಕೇಂದ್ರಗಳ ಸ್ವಚ್ಛತೆಗೆ ಗಡುವು ನಿಗದಿ : ವೀರೇಂದ್ರ ಹೆಗ್ಗಡೆ]
ಖುದ್ದು ವೀರೇಂದ್ರ ಹೆಗ್ಗಡೆಯವರು ರಾಜ್ಯದ ಹಲವಾರು ಕೇಂದ್ರಗಳಿಗೆ ಭೇಟಿ ನೀಡಿ ಗಣ್ಯ ಮಾನ್ಯರನ್ನು ಸಂಪರ್ಕಿಸಿ ಪ್ರೇರಣೆಯನ್ನು ನೀಡಿದ್ದರು.
ಇದಕ್ಕೆ ಸಕಾರಾತ್ಮಕವಾಗಿ ಸ್ಪಂದಿಸಿದ ಮಠಾಧಿಪತಿಗಳು, ಮುಸ್ಲಿಯಾರುರವರು, ಚರ್ಚಿನ ಗುರುಗಳು ತಮ್ಮ ಕ್ಷೇತ್ರವನ್ನು ಸ್ವಚ್ಛಗೊಳಿಸುವಲ್ಲಿ ಮುಂದಾಳತ್ವವನ್ನು ವಹಿಸಿಕೊಂಡರು.
ಮಠಾಧೀಶರುಗಳು ಸ್ವಯಂ ಸ್ವಚ್ಛತೆಗಾಗಿ ದುಡಿದದ್ದು ವಿಶೇವಾಗಿತ್ತು. ಜನವರಿ 13 ರಂದು ಸಂಕ್ರಾತಿಯ ಮುನ್ನಾದಿನ ರಾಜ್ಯದಾದ್ಯಂತ 5 ಲಕ್ಷಕ್ಕೂ ಮಿಕ್ಕಿದ ಜನರು ಏಕಕಾಲದಲ್ಲಿ ಸಹಸ್ರ ಸಂಖ್ಯೆಯ ದೇವಸ್ಥಾನಗಳನ್ನು ಶುದ್ಧಿಗೊಳಿಸಿದರು.
ಇದಕ್ಕಾಗಿ ಕ್ಷೇತ್ರ ಧರ್ಮಸ್ಥಳದ ವತಿಯಿಂದ ಕಾರ್ಯಪಡೆಯೊಂದನ್ನು ರೂಪಿಸಿ ಸಮುದಾಯ ನಿರ್ದೇಶಕ ಶ್ರೀ ಜಯರಾಮ ನೆಲ್ಲಿತ್ತಾಯರವರಿಗೆ ಜವಾಬ್ಧಾರಿಯನ್ನು ನೀಡಲಾಗಿತ್ತು.
ಈ ಅಭಿಯಾನದಲ್ಲಿ 8,045 ಶ್ರದ್ಧಾ ಕೇಂದ್ರಗಳು ಸ್ವಚ್ಛಗೊಂಡಿದ್ದು, ಈ ಪೈಕಿ 200 ಕ್ಕೂ ಮಿಕ್ಕಿದ ಮಠ ಮತ್ತು ಗದ್ದುಗೆಗಳು, 65 ಜೈನಬಸದಿಗಳು, 12 ಮಸೀದಿಗಳು, 4 ಚರ್ಚುಗಳು ಸೇರಿವೆ.
ಉಡುಪಿಯಲ್ಲಿ ನಡೆದ ವಿವಿಧ ಕಾರ್ಯಕ್ರಮಗಳಲ್ಲಿ ಪರ್ಯಾಯ ಪೇಜಾವರಶ್ರೀಗಳು, ಶಿರೂರು ಮತ್ತು ಕೃಣಾಪುರ ಮಠಾಧೀಶರುಗಳು ಸ್ವಯಂ ಆಸಕ್ತಿಯಿಂದ ಪ್ರೇರಣೆಯನ್ನು ನೀಡಿದರು.
ಪ್ರಖ್ಯಾತ ಧಾರ್ಮಿಕ ಸ್ಥಳಗಳಾದ ಮೈಸೂರು ಚಾಮುಂಡೇಶ್ವರಿ ದೇವಸ್ಥಾನ, ಸುಬ್ರಹ್ಮಣ್ಯ ದೇವಸ್ಥಾನ, ಧರ್ಮಸ್ಥಳ, ಉಳ್ಳಾಲ ದರ್ಗಾ, ಹುಬ್ಬಳ್ಳಿ ಸಿದ್ಧಾರೂಢಾ ಮಠ, ಮುಂತಾದ ಪವಿತ್ರ ಸ್ಥಳಗಳನ್ನು ಶುದ್ಧೀಕರಿಸಲಾಯಿತು.
ಧಾರ್ಮಿಕ ಶ್ರದ್ಧಾ ಕೇಂದ್ರಗಳ ಸ್ವಚ್ಛತೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆ ಮುಂಚೂಣಿಯಲ್ಲಿದ್ದು, ಇಲ್ಲಿ 40,000 ಕ್ಕೂ ಮಿಕ್ಕಿದ ಭಕ್ತರು 580 ದೇವಸ್ಥಾನಗಳನ್ನು ಸ್ವಚ್ಛ ಮಾಡಿದ್ದು ಒಂದು ದಾಖಲೆ.
ಅದೇ ರೀತಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 560, ಕೊಡಗು ಜಿಲ್ಲೆಯಲ್ಲಿ 486 ಕ್ಷೇತ್ರಗಳು ಸ್ವಚ್ಛಗೊಂಡವು. ಜನವರಿ 21 ರಂದು ಉಡುಪಿ ಕೃಣಮಠ ಪರಿಸರವನ್ನು ಸ್ವಚ್ಛಗೊಳಿಸುವ ನಿರ್ಣಯವನ್ನು ಕೈಗೊಳ್ಳಲಾಗಿದೆ.