ಬಿಜೆಪಿ ಕಾರ್ಯಕರ್ತ ಕೊಲೆ: ಆರು ಸಿಪಿಎಂ ಕಾರ್ಯಕರ್ತರ ಬಂಧನ
ಜನವರಿ 18 ರಂದು (ಬುಧವಾರ)ಧರ್ಮಾಡಂ ಪ್ರದೇಶದಲ್ಲಿ ಬಿಜೆಪಿ ಕಾರ್ಯಕರ್ತ ಎಂ.ಸಿ ಸಂತೋಷ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಪಿಎಂ ಪಕ್ಷದ ಆರು ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಮಂಗಳೂರು, ಜನವರಿ 22 : ಕಣ್ಣೂರು ಬಿಜೆಪಿ ಕಾರ್ಯಕರ್ತ ಅಂಡಲ್ಲೂರ್ ಸಂತೋಷ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಆರು ಮಂದಿ ಸಿಪಿಎಂ ಕಾರ್ಯಕರ್ತರನ್ನು ಬಂಧಿಸಿದ್ದಾರೆ.
ಧರ್ಮಡಂದ ಮಿಥುನ್, ರೋಹಿತ್, ಪ್ರಜುಲ್, ಶಮೀಂ, ಅಜೇಶ್, ರಿಜೇಶ್ ಬಂಧಿತರು. ಪಾನೂರ್ ಸರ್ಕಲ್ ಇನ್ಸ್ ಪೆಕ್ಟರ್ ಫಿಲಿಪ್ರ ನೇತೃತ್ವದಲ್ಲಿ ವಿಶೇಷ ಸ್ಕ್ವಾಡ್ ಇವರನ್ನು ಬಂಧಿಸಿದೆ.[ಬಿಜೆಪಿ ಕಾರ್ಯಕರ್ತನ ಕೊಲೆ; ಇಂದು ಕಣ್ಣೂರು ಬಂದ್]
ಈ ಹಿಂದೆಯೇ ಇವರನ್ನು ಬಿಜೆಪಿ ಕಾರ್ಯಕರ್ತ ರಜೀಶ್ ಎಂಬಾತ ದೂರು ನೀಡಿದ ವೇಳೆ ಪೊಲೀಸರು ಕಸ್ಟಡಿಗೆ ಪಡೆದಿದ್ದರು. ಜನವರಿ 18 ರಂದು ಬುಧವಾರ ರಾತ್ರಿ ಹತ್ತೂವರೆ ಗಂಟೆಗೆ ಸಂತೋಷ್ರನ್ನ ದುಷ್ಕರ್ಮಿಗಳು ಕಲೆ ಮಾಡಿದ್ದರು.
ನೆರೆಯವರು ಮತ್ತು ಪೊಲೀಸರು ಅವರನ್ನು ತಲಶ್ಶೇರಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಅಸು ನೀಗಿದ್ದರು.
ಬಿಜೆಪಿ ಪಕ್ಷ ಈ ಕೊಲೆಯನ್ನು ವಿರೋಧಿಸಿ ಧರಣಿ ನಡೆಸಿದ್ದು, ಈ ದಾಳಿಯ ಹಿಂದೆ ಸಿಪಿಎಂ ಕೈವಾಡ ಇದೆ ಎಂದು ಆರೋಪಿಸಿತ್ತು. ಆದರೆ, ಸಿಪಿಎಂ ಮುಖಂಡರು ಇದನ್ನು ನಿರಾಕರಿಸಿದ್ದರು.
ಕಳೆದ ಪಂಚಾಯತಿ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸಂತೋಷ್ ಸ್ಪರ್ಧಿಸಿದ್ದರು. ಇದರಿಂದ ಇದು ರಾಜಕೀಯ ದ್ವೇಷಪೂರಿತ ಕೊಲೆ ಇರಬಹುದೇ ಎಂಬ ಪ್ರಶ್ನೆಯನ್ನು ಹುಟ್ಟು ಹಾಕಿದೆ.