ಬಾಳಿಗ ಕೊಲೆ ಪ್ರಕರಣ : ಹೆಚ್ಚುವರಿ ಆರೋಪ ಪಟ್ಟಿ ಸಲ್ಲಿಕೆ
ಮಂಗಳೂರು, ಡಿಸೆಂಬರ್ 27 : ಆರ್ ಟಿ ಐ ಕಾರ್ಯಕರ್ತ ವಿನಾಯಕ ಬಾಳಿಗ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮಂಗಳೂರಿನ ಮೂರನೇ ಪ್ರಥಮ ದರ್ಜೆ ನ್ಯಾಯಾಲಯಕ್ಕೆ 325 ಪುಟಗಳ ಹೆಚ್ಚುವರಿ ಆರೋಪ ಪಟ್ಟಿಯನ್ನು ಸೋಮವಾರ ಸಲ್ಲಿಸಿದ್ದಾರೆ.
ಹೆಚ್ಚುವರಿ ಪಟ್ಟಿಯಲ್ಲಿ ನಗರದ ವಿಠೋಬ ದೇವಸ್ಥಾನದ ಲಾಕರ್ ಒಡೆದಿರುವ ಪ್ರಕರಣ, ಕೊಲೆಯಾದ ವಿನಾಯಕ ಅವರು ಪ್ರತಿಷ್ಠಾನದ ಪ್ರಮುಖರಾದ ಅತುಲ್ ಕುಡ್ವ ಅವರಿಗೆ ಆರೋಪಿ ನರೇಶ್ ರನ್ನು ಸಮಿತಿಯಿಂದ ಬಿಡುವಂತೆ ಬರೆದಿರುವ ಪತ್ರ ಮೊದಲಾದ ಮಹತ್ವದ ವಿಚಾರಗಳನ್ನು ಈ ಹೆಚ್ಚುವರಿ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ ಎನ್ನಲಾಗಿದೆ.[ಬಾಳಿಗ ಹತ್ಯೆ : ಆರೋಪಿ ಶೆಣೈ ವಿರುದ್ಧ 770 ಪುಟಗಳ ಚಾರ್ಜ್ ಶೀಟ್]
ತನಿಖಾಧಿಕಾರಿ ಎಸಿಪಿ ಉದಯ್ ನಾಯಕ್ ಸಲ್ಲಿಸಿದ ಈ ಆರೋಪ ಪಟ್ಟಿಯಲ್ಲಿ 130 ಸಾಕ್ಷಿಗಳ ವಿಚಾರಣೆ ನಡೆಸಲಾಗಿದೆ ಎಂದು ಹೇಳಲಾಗಿದೆ.
ಈ ಹಿಂದಿನ ತನಿಖಾಧಿಕಾರಿಯಾಗಿದ್ದ ಎಸಿಪಿ ತಿಲಕ್ ಚಂದ್ರ 750 ಪುಟಗಳ ಪ್ರಥಮ ಆರೋಪ ಪಟ್ಟಿಯನ್ನ ಸಲ್ಲಿಸಿದ್ದರು. ವಿಧಿ ವಿಜ್ಞಾನ ವರದಿ ಮತ್ತಿತರ ಮಹತ್ವದ ದಾಖಲೆಗಳ ಸಹಿತ ಇನ್ನೂ ಹೆಚ್ಚಿನ ಆರೋಪ ಪಟ್ಟಿ ಸಲ್ಲಿಸಲು ಸಹ ಅವಕಾಶ ಇದೆ.