ಜ.13 ರಿಂದ ಮೂಡುಬಿದಿರೆಯಲ್ಲಿ 23ನೇ ಆಳ್ವಾಸ್ ವಿರಾಸತ್ ಸಂಭ್ರಮ
ಮಂಗಳೂರು, ಜನವರಿ 10 : ಮೂಡುಬಿದಿರೆಯ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ನಡೆಸುವ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ 23ನೇ ಆಳ್ವಾಸ್ ವಿರಾಸತ್ 2017 ಜನವರಿ 13 ರಿಂದ 15 ರವರೆಗೆ 3 ದಿನಗಳ ಕಾಲ ಮೂಡುಬಿದಿರೆಯಲ್ಲಿ ಅದ್ದೂರಿಯಿಂದ ನಡೆಯಲಿದೆ.
ಮೂಡುಬಿದಿರೆ ಪುತ್ತಿಗೆಯ ವಿವೇಕಾನಂದ ನಗರದಲ್ಲಿರುವ ಶ್ರೀಮತಿ ವನಜಾಕ್ಷಿ ಕೆ.ಶ್ರೀಪತಿ ಭಟ್ ವೇದಿಕೆಯಲ್ಲಿ ಈ ವರ್ಷದ ಆಳ್ವಾಸ್ ವಿರಾಸತ್ ನಡೆಯಲಿದೆ. 150 ಅಡಿ ಉದ್ದ 60 ಅಡಿ ಅಗಲದ ಈ ಬೃಹತ್ ವೇದಿಕೆಯು 80ರಿಂದ 100 ಕಲಾವಿದರಿರುವ ತಂಡದ ಪ್ರದರ್ಶನಕ್ಕೆ ಹೇಳಿಮಾಡಿಸಿದಂತಿದೆ.[ಪದ್ಮಭೂಷಣ ವಿಜೇತ ವಿ.ಪಿ.ಧನಂಜಯನ್ ಗೆ 'ಆಳ್ವಾಸ್ ವಿರಾಸತ್' ಪ್ರಶಸ್ತಿ]
ಇನ್ನು ಕಾರ್ಯಕ್ರಮವನ್ನು ಈ ಶ್ರೀ ಧರ್ಮಸ್ಥಳದ ಧರ್ಮಾಧಿಕಾರಿ ಪದ್ಮವಿಭೂಷಣ ಡಾ.ಡಿ.ವೀರೇಂದ್ರ ಹೆಗ್ಗಡೆ ಉದ್ಘಾಟಿಸಲಿದ್ದಾರೆ. ಆಳ್ವಾಸ್ ವಿರಾಸತ್ 2017 ರ ಪ್ರಥಮ ದಿನ ಜ. 13 ರಂದು ಮಾತ್ರ ಸಭಾ ಕಾರ್ಯಕ್ರಮವಿದ್ದು, ಉಳಿದ ಎರಡು ದಿನಗಳು ಯಾವುದೇ ಸಭಾ ಕಾರ್ಯಕ್ರಮಗಳಿರುವುದಿಲ್ಲ. ಕಾರ್ಯಕ್ರಮದ ಮೊದಲ ದಿನ ಸಾಂಸ್ಕೃತಿಕ ಮೆರವಣಿಗೆಯ ಮೂಲಕ ಸಭಾಕಾರ್ಯಕ್ರಮ ಸಂಜೆ 5.30ರಿಂದ 6.45ರವರೆಗೆ ನಡೆಯಲಿದೆ.
ಈ ವೇಳೆ 'ಆಳ್ವಾಸ್ ವಿರಾಸತ್ 2017 ' ಪ್ರಶಸ್ತಿಯನ್ನು ಪದ್ಮಭೂಷಣ ವಿ.ಪಿ.ಧನಂಜಯನ್ ರಿಗೆ ಇದೇ ಸಂದರ್ಭದಲ್ಲಿ ಪ್ರದಾನ ಮಾಡಲಾಗುತ್ತದೆ.
ವಿರಾಸತ್ ಸಂಗೀತ ಮತ್ತು ನೃತ್ಯ : ಆಳ್ವಾಸ್ ವಿರಾಸತ್ ನ ಮೊದಲನೆಯ ದಿನ ಕರ್ನಾಟಕ ಹಾಗೂ ಹಿಂದೂಸ್ಥಾನಿ, ಶಾಸ್ತ್ರೀಯ ಸಂಗೀತಗಳ ಮೇರು ಕಲಾವಿದರಿಬ್ಬರು ಕೊಳಲು-ಬಾನ್ಸುರಿ ಜುಗಲ್ ಬಂದಿಯ ಮೂಲಕ ಪ್ರಥಮ ಬಾರಿಗೆ ಒಂದೇ ವೇದಿಕೆಯನ್ನು ಹಂಚಿಕೊಳ್ಳಲಿದ್ದಾರೆ.
ಜನವರಿ 14: ನಾದಮಾಧುರ್ಯ ದಲ್ಲಿ ದೇಶದ ಅತ್ಯುನ್ನತ ವಾದ್ಯ ಕಲಾವಿದರು ಒಟ್ಟಾಗಲಿದ್ದಾರೆ. ವಾದ್ಯ ಪ್ರ್ರಕಾರಗಳಲ್ಲಿ ಮಾಂತ್ರಿಕ ಹಿಡಿತವಿರುವ ಈ ಕಲಾವಿದರ ಒಟ್ಟುಗೂಡುವಿಕೆಯಿಂದ ಅತ್ಯದ್ಭುತ ನಾದವೈವಿದ್ಯವು ವಿರಾಸತ್ ನಲ್ಲಿ ಮೈತಳೆಯಲಿದೆ.
'ಅಂಗರಾಗ'ದ ಮೂಲಕ ಶಾಸ್ತ್ರೀಯ ಮತ್ತು ಜನಪದ ನೃತ್ಯಗಳ ಮಿಶ್ರ ನೃತ್ಯರೂಪಕವು ನಡೆಯಲಿದೆ. ಭುವನೇಶ್ವರದ ಆರಾಧನಾ ಡ್ಯಾನ್ಸ್ ಅಕಾಡೆಮಿಯ ಶಾಸ್ತ್ರೀಯ ಮತ್ತು ಜಾನಪದದ 55 ಕಲಾವಿದರು ಒಡಿಸ್ಸಿ ಮತ್ತು ಗೋಟಿಪುವಾ ನೃತ್ಯರೂಪಕದ ಮೂಲಕ ನೃತ್ಯಾಸಕ್ತರಿಗೆ ಅತ್ಯಪೂರ್ವ ಮನರಂಜನೆಯನ್ನು ನೀಡಲಿದ್ದಾರೆ.
ಉಳಿದಂತೆ ಮೂರು ದಿನಗಳ ಕಾಲವೂ ಆಳ್ವಾಸ್ ನ ಬಹುಸಂಖ್ಯೆಯ ಕಲಾವಿದರಿಂದ ದೇಶೀಯ, ಅಂತಾರಾಷ್ಟ್ರೀಯ ನೃತ್ಯ-ಸಾಹಸ ಕಲೆಗಳ ವೈವಿಧ್ಯಪೂರ್ಣ ಪ್ರದರ್ಶನವು ನಡೆಯಲಿವೆ.
ಬೆಂಗಳೂರಿನ ಮಾಸ್ಟರ್ ರಾಹುಲ್ ವೆಲ್ಲಾಲ್ ಒಂಬತ್ತು ವರ್ಷದ ಪೋರ. ದೇವರ ನಾಮದ ಅತ್ಯಂತ ಶುಶ್ರಾವ್ಯ ಹಾಗೂ ಮಾಧುರ್ಯದ ಹಾಡುಗಾರಿಕೆಗೆ ಹೆಸರುವಾಸಿಯಾಗಿರುವ ಈ ಬಾಲಪ್ರತಿಭೆ ಆಳ್ವಾಸ್ ವಿರಾಸತ್ ನಲ್ಲಿ ಮೊತ್ತಮೊದಲ ಬಾರಿ ತನ್ನ ಹಾಡುಗಾರಿಕೆಯನ್ನು ಪ್ರಸ್ತುತಪಡಿಸಲಿದ್ದಾನೆ.
ಜನವರಿ 15: ಹಿಂದಿ ಚಿತ್ರರಂಗದ ಖ್ಯಾತ ಹಿನ್ನಲೆಗಾಯಕರುಗಳಾದ ಮುಂಬೈಯ ಶಾನ್ ಹಾಗೂ ಪಾಯಲ್ ದೇವ್ ಸಂಗೀತ ರಸಸಂಜೆಯ ಮೂಲಕ ಸಂಗೀತಾಸಕ್ತರನ್ನು ರಂಜಿಸಲಿದ್ದಾರೆ.
ಅವರನ್ನು ಅನುಸರಿಸಿಕೊಂಡು ಉಡುಪಿಯ ಲತಾಂಗಿ ಸ್ಕೂಲ್ ಆಫ್ ಮ್ಯೂಸಿಕ್ನ ಗಾಯನ ಕಲಾವಿದೆಯರಿಂದ 'ಗಾನಾರ್ಚನ' ನಡೆಯಲಿದ್ದು ಸಂಗೀತ ರಸಿಕರ ಮನಸ್ಸನ್ನು ಮುದಗೊಳಿಸಲಿದೆ.
ಆಳ್ವಾಸ್ ಶಿಲ್ಪ-ವರ್ಣ ವಿರಾಸತ್: ಜನವರಿ 15 ರವರೆಗೆ ವಿದ್ಯಾಗಿರಿಯ ಆಳ್ವಾಸ್ ನುಡಿಸಿರಿ ಸಭಾಂಗಣದಲ್ಲಿ ಆಳ್ವಾಸ್ ಶಿಲ್ಪ ವಿರಾಸತ್ ಮತ್ತು ರಾಷ್ಟ್ರಮಟ್ಟದ ಖ್ಯಾತ ಆದಿವಾಸಿ ಕಲಾವಿದರಿಂದ ಚಿತ್ರಕಲಾ ಶಿಬಿರವು ನಡೆಯಲಿವೆ.
ಬುಡಕಟ್ಟು ಜನಾಂಗವಾದ ಬಸ್ತರ್ ನ ಐವರು ಕಲಾವಿದರು ಲೋಹಶಿಲ್ಪದಲ್ಲಿ ಸ್ಥಳೀಯ ದೈವಗಳ ಕಂಚಿನ ಮುಖವಾಡಗಳನ್ನು ರಚಿಸಲಿದ್ದಾರೆ. ನಾಡಿನ ಹತ್ತು ಕಲಾವಿದರು ಮರದ ಕೆತ್ತನೆಯಲ್ಲಿ 4ರಿಂದ 6 ಅಡಿ ಎತ್ತರದ ಕೋಟಿ-ಚೆನ್ನಯ ಸೇರಿದಂತೆ ವಿವಿಧ ಕಲಾಕೃತಿಗಳನ್ನು ರಚಿಸಲಿದ್ದಾರೆ.
ಆಳ್ವಾಸ್ ವರ್ಣವಿರಾಸತ್ ಗೌರವ: ರಾಜಸ್ಥಾನದ ಖ್ಯಾತ ಚಿತ್ರಕಲಾವಿದ ರೇವ ಶಂಕರ್ ಶರ್ಮಾ ರಿಗೆ ಆಳ್ವಾಸ್ ವರ್ಣವಿರಾಸತ್ ಗೌರವವನ್ನು ಜನವರಿ 15 ರಂದು ವಿರಾಸತ್ ವೇದಿಕೆಯಲ್ಲಿ ಪ್ರದಾನ ಮಾಡಲಾಗುವುದು. ಪ್ರಶಸ್ತಿಯು ರೂ.25,000 ನಗದು ಪುರಸ್ಕಾರ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.
ದೀಪಾಲಂಕಾರದ ವೈಭವ ಹಾಗೂ ತಿಂಡಿ-ತಿನಿಸುಗಳ ಮಳಿಗೆ: ಆಳ್ವಾಸ್ ವಿರಾಸತ್ ನ ಮೂರು ದಿನಗಳ ಕಾಲವೂ ಅತ್ಯದ್ಭುತವಾದ ದೀಪಾಲಂಕಾರದ ಮೂಲಕ ಈ ಉತ್ಸವಕ್ಕೆ ರಮ್ಯತೆಯನ್ನು, ಭವ್ಯತೆಯನ್ನು ನೀಡಲಾಗುವುದು.
ಶುಚಿ-ರುಚಿಯಾದ ವಿವಿಧ ತಿಂಡಿ ತಿನಿಸುಗಳ ಮಳಿಗೆಗಳು ಆಹಾರ ಪ್ರಿಯರ ಮನಸ್ಸನ್ನೂ ಉದರವನ್ನೂ ತಣಿಸುವಲ್ಲಿ ಯಶಸ್ಸಿಯಾಗಲಿವೆ.