ನೋಟ್ ಚೇಂಜ್: ನಾಯಿ ಕಚ್ಚಿದರೆ ಬೆಕ್ಕಿಗೆ ಹೊಡೆತವೇ?
ಮಂಗಳೂರು, ನವೆಂಬರ್ 17: ಮೋದಿಯವರ ನೋಟು ಬದಲಾವಣೆ ಕ್ರಮ ಮೆಚ್ಚಲೇ ಬೇಕಾದ ಸಂಗತಿ ಆದರೆ, ರು.500 ಕರೆನ್ಸಿ ಬಾರದೆ ಏಕಾಏಕಿ ರು 2000. ಕರೆನ್ಸಿಯನ್ನು ತಂದರೆ ಜನಸಾಮಾನ್ಯರು ದೈನಂದಿನ ವ್ಯವಹಾರಕ್ಕೂ ತೊಂದರೆ ಪಡಬೇಕಾಗಿದೆ. ಇದು ನಾಯಿ ಕಚ್ಚಿದರೆ ಬೆಕ್ಕು ಹೊಡೆತ ತಿನ್ನುವಂತಾಗಿದೆ ಎಂದು ಸಚಿವ ಪ್ರಮೋದ್ ಮಧ್ವರಾಜ್ ಟೀಕೆ ಮಾಡಿದ್ದಾರೆ.
ನಗರದಲ್ಲಿ ಮಾತನಾಡಿದ ಅವರು, ತಾನಂತೂ ಮೋದಿ ಕ್ರಮದಿಂದ ನಿಶ್ಚಿಂತೆಯಿಂದ ನಿದ್ದೆಮಾಡುವಂತಾಗಿದೆ. ಏಕೆಂದರೆ ತಾನು ಸೂಕ್ತ ಸಮಯದಲ್ಲಿ ಆದಾಯ ತೆರಿಗೆ ಪಾವತಿ ಮಾಡುವವನಾಗಿದ್ದೇನೆ ಎಂದರು.[2000 ರು ನೋಟಿನಲ್ಲಿ ನ್ಯಾನೋ 'ಚಿಪ್' ಇರಲ್ಲ ಹುಡುಕಬೇಡಿ]
ಇನ್ನೂ ವಿವಿಧ ಕಾರಣದಿಂದ ಸ್ಥಗಿತಗೊಂಡಿದ್ದ ಮಂಗಳೂರಿನ ಮೀನುಗಾರಿಕಾ ಬಂದರ್ ನ 3ನೆ ಹಂತದ ಕಾಮಗಾರಿ ಶೀಘ್ರ ಪುನರಾರಂಭಗೊಳ್ಳಲಿದೆ ಎಂದು ಹೇಳಿದರು.
ಬಂದರು ಅಭಿವೃದ್ಧಿಗೆ ಕೇಂದ್ರ ಸರಕಾರದ ರು 32 ಕೋಟಿ ಬರಲು ಬಾಕಿ ಇದೆ. ಈ ಬಗ್ಗೆ ಕೇಂದ್ರ ಸಚಿವರ ಜೊತೆ ಸಮಾಲೋಚನೆ ಮಾಡಿದ್ದು, ಶೀಘ್ರ ರು 10 ಕೋಟಿ ಬಿಡುಗಡೆ ಮಾಡುವ ಭರವಸೆ ನೀಡಿದ್ದಾರೆ. ಹಣ ಬಿಡುಗಡೆಯಾದ ತಕ್ಷಣ ಕಾಮಗಾರಿ ಆರಂಭಿಸಲಾಗುವುದು ಎಂದು ಮಧ್ವರಾಜ್ ಹೇಳಿದರು.[ಸಾವಿರಾರು ಮೀನು ಸಾವು: ಹೆಬ್ಬಾಳ ಕೆರೆಗೂ ಮಾಲಿನ್ಯದ ಕಳಂಕ?]
ರಾಜ್ಯದಲ್ಲಿ ಅಗತ್ಯಕ್ಕಿಂತ ಹೆಚ್ಚು ಮೀನುಗಳ ಉತ್ಪಾದನೆಯಾಗುತ್ತಿದೆ ಇದು ವಿನಾಶಕಾರಿ ಸಂಗತಿಯಾಗಿದೆ. ಹೀಗಾಗಿ ಪಶ್ಚಿಮ ಮತ್ತು ಪೂರ್ವ ಕರಾವಳಿ ತೀರದ ರಾಜ್ಯಗಳ ಮೀನುಗಾರಿಕಾ ಸಚಿವರ ಸಭೆಯನ್ನು ಕರೆಯಲು ಕೇಂದ್ರ ಕೃಷಿ ಸಚಿವರಿಗೆ ಮನವಿ ಮಾಡಿದ್ದೇನೆ. ಮೀನುಮರಿಗಳು ಕಂಪನಿಗಳಿಗೆ ಸಾಗಾಟ ಮಾಡುವುದನ್ನು ಪತ್ತೆಹಚ್ಚಲು ನಿರೀಕ್ಷಕರನ್ನು ನೇಮಿಸುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದರು..
ಮಂಗಳೂರಿನ ಫುಟ್ಬಾಲ್ ಮೈದಾನವನ್ನು ರು 1 ಕೋಟಿ ವೆಚ್ಚದಲ್ಲಿ ಅಭಿವೃದ್ಧಿಗೆ ಕ್ರಮ ಜರಗಿಸಲಾಗಿದೆ. ಈಗಾಗಲೆ ರು 20 ಲಕ್ಷ ಅನುದಾನ ಬಿಡುಗಡೆ ಮಾಡಲಾಗಿದೆ ಎಂದ ಅವರು, ಎಮ್ಮೆಕೆರೆಯಲ್ಲಿ ಈಜುಕೊಳ ನಿರ್ಮಾಣಕ್ಕೆ 4.99 ಕೋ.ರೂ. ಅಂದಾಜು ವೆಚ್ಚ ತಯಾರಿಸಲಾಗಿತ್ತು. ಈಗ ಅಂದಾಜು ವೆಚ್ಚ 12.50 ಕೋ.ರೂ. ಆಗಿದೆ. ಒಲಿಂಪಿಕ್ ಮಟ್ಟದ ಈಜುಕೊಳ ನಿರ್ಮಾಣಕ್ಕೆ 2.50 ಕೋ.ರೂ. ಬೇಕು ಎಂದು ತಜ್ಞರು ಅಭಿಪ್ರಾಯ ವ್ಯಕ್ತಪಡಿಸಲಾಗಿದೆ.
ರಾಜ್ಯದಲ್ಲಿ ಕ್ರೀಡಾನೀತಿ ಜಾರಿಗೊಳಿಸಲು ಈಗಾಗಲೆ ಎಲ್ಲ ಜಿಲ್ಲೆಯ ಕ್ರೀಡಾಳುಗಳ,ಸಂಘಟನೆಗಳ ಸಲಹೆ ಕ್ರೋಢೀಕರಿಸಲಾಗಿದೆ. ನ.24ರ ಬೆಳಗಾವಿಯಲ್ಲಿ ಸಭೆ ನಡೆಸಿದ ಬಳಿಕ ಹೊಸ ಕ್ರೀಡಾನೀತಿ ಘೋಷಿಸಲಾಗುವುದು. ಕ್ರೀಡೆಗಳಿಗೆ ಪ್ರೋತ್ಸಾಹ ನೀಡುವ ಸಲುವಾಗಿ ರಾಜ್ಯ ಸರಕಾರವು 120 ಕೋ.ರೂ. ಪ್ರಸ್ತಾವವನ್ನು ಕೇಂದ್ರ ಸರಕಾರದ ಮುಂದಿಟ್ಟಿದೆ ಎಂದರು.