ಮಂಗಳೂರು: 100 ವರ್ಷ ಹಳೆಯ ಆಲದ ಮರಕ್ಕೆ ಕೊಡಲಿ ಏಟು
ರಸ್ತೆ ಪಕ್ಕದಲ್ಲಿ ಸಾಕಷ್ಟು ಸ್ಥಳಾವಕಾಶಗಳಿದ್ದರೂ ಆಲದ ಮರದ ರೆಂಬೆ-ಕೊಂಬೆಗಳನ್ನು ಕತ್ತರಿಸಲಾಗಿದೆ. ಇನ್ನೇನು ಎರಡು ಮೂರು ದಿನಗಳಲ್ಲಿ ಮರವನ್ನೇ ಕಡಿದು ಹಾಕುತ್ತಾರೆ ಎಂದು ಸ್ಥಳೀಯರು ಹೇಳಿದ್ದಾರೆ.
ಎಕ್ಕೂರು ಜಂಕ್ಷನ್ನಿನಿಂದ ಬಜಾಲ್ ಸಂಪರ್ಕಿಸುವ ಒಳರಸ್ತೆಯನ್ನು ಕಾಂಕ್ರಿಟೀಕರಣ ಮಾಡಲಾಗಿದೆ. ಇದೀಗ ಶಾಫಿ ಕ್ಲಿನಿಕ್ ಮುಂಭಾಗದಿಂದ ಎಕ್ಕೂರು ಜಂಕ್ಷನ್ನಿನವರೆಗೆ ಮಧ್ಯಭಾಗದಲ್ಲಿ ಅಲ್ಲಲ್ಲಿ ಬಿಟ್ಟಿರುವ ರಸ್ತೆಯ ಅಗಲೀಕರಣ, ಕಾಂಕ್ರಿಟೀಕರಣ ಮಾಡಲಾಗುತ್ತಿದೆ.
ಈ ಸಂದರ್ಭದಲ್ಲಿ ಕೋಸ್ಟ್ ಗಾರ್ಡ್ ಅಧಿಕಾರಿಗಳ ವಸತಿ ಸಮುಚ್ಛಯದ ರಸ್ತೆ ಪಕ್ಕದಲ್ಲಿ ಇರುವ ಪುರಾತನ ಕಾಲದ, ನೂರಾರು ವರ್ಷದ ಭಾರೀ ಗಾತ್ರದ ಆಲದ ಮರವೊಂದಕ್ಕೆ ಗುತ್ತಿಗೆದಾರರು ಕೊಡಲಿ ಏಟು ಹಾಕಲಿದ್ದಾರೆ. ರಸ್ತೆ ಅಗಲೀಕರಣಕ್ಕೆ ಅಡ್ಡಿಯಾಗುತ್ತಿದೆ ಎನ್ನುವ ನೆಪದಲ್ಲಿ ಈ ಮರವನ್ನು ಕಡಿದು ಹಾಕಲು ಯೋಚಿಸಲಾಗಿದೆ. ಈಗಾಗಲೇ ಮೇಲ್ಭಾಗದಲ್ಲಿರುವ ರೆಂಬೆ-ಕೊಂಬೆಗಳನ್ನು ಯಂತ್ರದ ಮೂಲಕ ಕತ್ತರಿಸಲಾಗಿದೆ.
ಈ ರಸ್ತೆ ಪಕ್ಕದಲ್ಲಿ ಸಾಕಷ್ಟು ಸ್ಥಳಾವಕಾಶಗಳಿದ್ದರೂ ಮರದ ರೆಂಬೆ-ಕೊಂಬೆಗಳನ್ನು ಕತ್ತರಿಸಲಾಗಿದೆ. ಇನ್ನೇನು ಎರಡು ಮೂರು ದಿನಗಳಲ್ಲಿ ಮರವನ್ನೇ ಕಡಿದು ಹಾಕುತ್ತಾರೆ ಎಂದು ಸ್ಥಳೀಯರು ಹೇಳಿದ್ದಾರೆ.
"ಕೇವಲ ಗುತ್ತಿಗೆದಾರರಿಗೆ ಅನುಕೂಲ ಮಾಡಿಕೊಡುವ ದೃಷ್ಟಿಯಿಂದ ಇದನ್ನು ಕತ್ತರಿಸಲಾಗಿದೆ ಬಿಟ್ಟರೆ ನಿಜಕ್ಕೂ ಇದರಿಂದ ತೊಂದರೆ ಏನೂ ಇರಲಿಲ್ಲ," ಎನ್ನುತ್ತಾರೆ ಸ್ಥಳೀಯ ನಿವಾಸಿ ಸತೀಶ್.