ಹೊಸ ಮನೆಯಲ್ಲಿ ಆರು ತಿಂಗಳು ಕಳೆಯದ ಮಹಿಳೆ ಮಂಡ್ಯದಲ್ಲಿ ಆತ್ಮಹತ್ಯೆ
ಮಂಡ್ಯ, ಜುಲೈ 1: ನಗರ ಹೊರವಲಯದ ನಾಲ್ವಡಿ ಕೃಷ್ಣರಾಜ ಒಡೆಯರ್ ಬಡಾವಣೆಯಲ್ಲಿ ಮಹಿಳೆಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು, ಸಾವಿಗೆ ಪತಿಯ ಕಿರುಕುಳವೇ ಕಾರಣ ಎನ್ನಲಾಗಿದೆ.
ಮೂಲತಃ ಮೈಸೂರು ಜಿಲ್ಲೆ ತಿ.ನರಸೀಪುರ ತಾಲೂಕು ಕೆಂಪೇಗೌಡನಕೊಪ್ಪಲು ಗ್ರಾಮದ ನಿವಾಸಿ ನಾಲ್ವಡಿ ಕೃಷ್ಣರಾಜ ಒಡೆಯರ್ ಬಡಾವಣೆಯಲ್ಲಿ ವಾಸವಿದ್ದ ಎಸ್. ನಾಗರಾಜು ಎಂಬಾತನ ಪತ್ನಿ ನಳಿನಿ (33) ಎಂಬಾಕೆಯೇ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ದುರ್ದೈವಿ.
ರೌಡಿ ಫಣೀಶ್ ಹತ್ಯೆ ಪ್ರಕರಣದಲ್ಲಿ 6 ಆರೋಪಿಗಳ ಬಂಧನ
ನಳಿನಿ ಕೂಡ ತಿ.ನರಸೀಪುರದ ಕೇತುಪುರದ ಗ್ರಾಮದವರಾಗಿದ್ದು, ಕೆಲವು ವರ್ಷಗಳ ಹಿಂದೆ ನಾಗರಾಜು ಜತೆ ವಿವಾಹವಾಗಿತ್ತು. ವಿವಾಹದ ಬಳಿಕ ಇವರು ಮಂಡ್ಯದಲ್ಲಿ ನೆಲೆಸಿದ್ದರು. ಅಲ್ಲದೆ ನಾಲ್ಕು ತಿಂಗಳ ಹಿಂದೆ ನಾಲ್ವಡಿ ಕೃಷ್ಣರಾಜ ಒಡೆಯರ್ ಬಡಾವಣೆಯಲ್ಲಿ ಸ್ವಂತ ಮನೆ ನಿರ್ಮಿಸಿ, ವಾಸ್ತವ್ಯ ಹೂಡಿದ್ದರು.
ಮದುವೆಯಾಗಿ ಹದಿನೈದು ವರ್ಷಕ್ಕೂ ಹೆಚ್ಚು ಕಾಲ ಆಗಿದ್ದರೂ ಇವರ ನಡುವೆ ನಡುವೆ ಆಗಾಗ ಜಗಳ ನಡೆಯುತ್ತಿತ್ತು. ಜಗಳದ ಸಂದರ್ಭದಲ್ಲಿ ಪತಿ ನಾಗರಾಜು ಪತ್ನಿ ನಳಿನಿ ಮೇಲೆ ಹಲವು ಬಾರಿ ಹಲ್ಲೆ ಮಾಡಿದ್ದ. ಅಷ್ಟೇ ಅಲ್ಲದೆ ಸುಖಾಸುಮ್ಮನೆ ಕಿರುಕುಳ ನೀಡುತ್ತಿದ್ದ.
ಜೂನ್ 29ರಂದು ಮತ್ತೆ ಗಂಡ- ಹೆಂಡಿರ ನಡುವೆ ಜಗಳ ನಡೆದಿತ್ತು. ಆ ನಂತರ ಮನನೊಂದ ನಳಿನಿ ಮನೆಯಲ್ಲಿ ಯಾರೂ ಇಲ್ಲದ ಸಂದರ್ಭದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ವಿಷಯ ತಿಳಿಯುತ್ತಿದ್ದಂತೆಯೇ ಪತಿ ನಾಗರಾಜು ಪರಾರಿಯಾಗಿದ್ದಾನೆ.
100 ಮಹಿಳೆಯರಿಗೆ ಮೋಸ ಮಾಡಿದ 'ಕ್ಯಾಸಾನೋವಾ'ನ ಬಂಧನ
ಮೃತರ ಪೋಷಕರು, ಸಂಬಂಧಿಕರು ಸ್ಥಳಕ್ಕೆ ಆಗಮಿಸಿ ಮಗಳ ಸಾವಿಗೆ ನಾಗರಾಜು ಕಾರಣ. ಆತ ಆಗಾಗ ಕಿರುಕುಳ ನೀಡುತ್ತಿದ್ದ. ಪತಿ-ಪತ್ನಿಯರ ನಡುವೆ ಕಲಹ ನಡೆಯುತ್ತಿತ್ತು. ಹಲವು ಬಾರಿ ಹಲ್ಲೆ ನಡೆಸಿದ್ದಾನೆ. ಹಣಕ್ಕಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ನಳಿನಿಯ ತಾಯಿ ಸುನಂದಮ್ಮ ಪೊಲೀಸರಿಗೆ ದೂರು ನೀಡಿದ್ದಾರೆ.
ನಳಿನಿ ಆತ್ಮಹತ್ಯೆಗೆ ಸಂಬಂಧಿಸಿದಂತೆ ಮಂಡ್ಯ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ನಡೆಸುತ್ತಿದ್ದಾರೆ.