ಮಂಡ್ಯದಲ್ಲಿ ಕಬ್ಬಿನ ಗದ್ದೆಗೆ ಬಂದ ಕಾಡಾನೆಗಳು, ಗ್ರಾಮಸ್ಥರ ಅತಂಕ
ಮಂಡ್ಯ, ಮಾರ್ಚ್ 14: ಆಹಾರ ಮತ್ತು ನೀರನ್ನು ಅರಸಿಕೊಂಡು ಕಾಡಿನಿಂದ ಬಂದ ಕಾಡಾನೆಗಳು ಮಂಡ್ಯ ಜಿಲ್ಲೆಯ ಹಲವೆಡೆ ರೈತರ ಜಮೀನಿಗೆ ನುಗ್ಗಿ, ಕಬ್ಬು ಸೇರಿದಂತೆ ಇತರೆ ಬೆಳೆಗಳನ್ನು ನಾಶ ಮಾಡಿದ ಘಟನೆ ವರದಿಯಾಗಿದ್ದು, ರೈತರು ಭಯಗೊಂಡಿದ್ದಾರೆ.
ಕಬ್ಬಿನಗದ್ದೆಯಲ್ಲಿ ಬೀಡು ಬಿಟ್ಟ ಕಾಡಾನೆಗಳ ಹಿಂಡಿನಲ್ಲಿ ಎರಡು ಸಲಗ, ಒಂದು ಹೆಣ್ಣು ಹಾಗೂ ಮರಿಯಾನೆ ಸೇರಿದಂತೆ ನಾಲ್ಕು ಆನೆಗಳಿವೆ ಎಂದು ಹೇಳಲಾಗಿದೆ. ಈ ಆನೆಗಳು ಭಾನುವಾರವೇ ಕಾಡಿನಿಂದ ಬಂದಿದ್ದು, ಕರಡಕೆರೆ ಗ್ರಾಮದ ಕೆ.ಬಿ.ಹನುಮೇಗೌಡ ಎಂಬುವರ ಜಮೀನಿನ ಮೂಲಕ ಹಾದು ಹೋಗಿವೆ. ಈ ವೇಳೆ ಈ ಹಿಂಡನ್ನು ಕುರಿ ಮೇಯುಸುತ್ತಿದ್ದವರು ನೋಡಿದ್ದಾರೆ.[ಆನೆ ಹಾವಳಿ ಬಗ್ಗೆ ಪತ್ರ ಬರೆದ ಸುಳ್ಯ ಬಾಲಕಿಗೆ ಪ್ರಧಾನಿ ಕಚೇರಿ ಸ್ಪಂದನೆ]
ಆನೆಗಳು ಕಬ್ಬಿನ ಗದ್ದೆ ಮೂಲಕ ಹೋಗಿ, ಕಬ್ಬನ್ನು ತಿಂದು- ತುಳಿದು ಮಾಡಿದ್ದರಿಂದ ಬರದ ನಡುವೆಯೂ ಕಷ್ಟಪಟ್ಟು ಬೆಳೆದ ರೈತರ ಕಬ್ಬು ಫಸಲು ಹಾನಿಯಾಗಿದೆ. ಈ ಆನೆಗಳು ಒಂದೆಡೆಯಿಂದ ಮತ್ತೊಂದೆಡೆಗೆ ಸಾಗುತ್ತಿರುವುದರಿಂದ ಸಿಕ್ಕಿದ ಬೆಳೆಯನ್ನೆಲ್ಲ ಹಾಳುಗೆಡವುತ್ತಾ ಸಾಗುತ್ತಿವೆ. ಇದರಿಂದ ರೈತರಿಗೆ ನಷ್ಟವಾಗುತ್ತಿದ್ದು, ಬೆಳೆ ಕಳೆದುಕೊಂಡವರು ಚಿಂತಾಕ್ರಾಂತರಾಗಿದ್ದಾರೆ.
ಅಲ್ಲಿಂದ ಮದ್ದೂರು ತಾಲೂಕಿಗೆ ಹೊಂದಿಕೊಂಡಂತಿರುವ ರಾಮನಗರ ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಯಲಿಯೂರು, ನಿಡುಗೋಡಿಗೆ ತೆರಳಿ ಅಲ್ಲಿ ಬೀಡುಬಿಟ್ಟಿದ್ದವು. ಈ ಬಗ್ಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅಲ್ಲಿಯ ಅರಣ್ಯಾಧಿಕಾರಿಗಳ ತಂಡ ಅವುಗಳನ್ನು ಕಬ್ಬಾಳು ಬೆಟ್ಟದ ಕಡೆಗೆ ಅಟ್ಟಿದ್ದಾರೆ.[ಗುಬ್ಬಿ ತಾಲೂಕಿನಲ್ಲಿ ಕಾಡಾನೆ ದಾಳಿಗೆ ಐದನೇ ಬಲಿ]
ಆದರೆ, ಕಬ್ಬು ಸೇರಿದಂತೆ ಇತರೆ ಬೆಳೆಗಳ ರುಚಿಯನ್ನು ಕಂಡ ಕಾಡಾನೆಗಳು ಅಲ್ಲಿಂದ ಮಳವಳ್ಳಿ ತಾಲೂಕಿನ ದಡಮಹಳ್ಳಿ ದಾರಿಯಲ್ಲಿ ಪಂಡಿತಹಳ್ಳಿಗೆ ಬಂದಿದ್ದು, ಅಲ್ಲಿಂದ ಕೆ.ಎಂ.ದೊಡ್ಡಿ ಸಮೀಪದ ಮೆಳ್ಳಹಳ್ಳಿ ಬಳಿ ಪ್ರತ್ಯಕ್ಷವಾಗಿವೆ. ಅಲ್ಲಿ ಹೆಚ್ಚು ಹೊತ್ತು ಇರದ ಅವು, ಅಲ್ಲಿಂದ ಕರಡಕೆರೆ ಬಳಿಯಲ್ಲಿ ಕಂಡುಬಂದಿದ್ದು, ನಂತರ ಕಬ್ಬಿನ ಗದ್ದೆಯಲ್ಲಿ ಸೇರಿಕೊಂಡಿವೆ.
ಆನೆಗಳು ಕಬ್ಬಿನ ಗದ್ದೆಯಲ್ಲಿ ಬೀಡುಬಿಟ್ಟಿರುವ ವಿಷಯ ತಿಳಿಯುತ್ತಿದ್ದಂತೆ ಅಕ್ಕಪಕ್ಕದ ಗ್ರಾಮಗಳ ಜನರು ಆಗಮಿಸಿ ಕೂಗಾಟ ನಡೆಸಿದ್ದರಿಂದ ಗಾಬರಿಗೊಂಡ ಕಾಡಾನೆಗಳು ದಿಕ್ಕಾಪಾಲಾಗಿ ಓಡಿವೆ, ಇದರಿಂದ ಫಸಲು ಹಾನಿಯಾಗಿದೆ. ಅರಣ್ಯಾಧಿಕಾರಿಗಳು ಇವುಗಳನ್ನು ಕಾಡಿಗೆ ಅಟ್ಟುವ ಕಾರ್ಯಕ್ಕೆ ಮುಂದಾಗಿದ್ದಾರೆ.