ಗೊತ್ತಿಲ್ಲದ ವಿಷಯ ಮಾತಾಡುವ ರಮ್ಯಾಗೆ ಯಾಕ್ರೀ ಇಷ್ಟೊಂದು ಪ್ರಚಾರ?
ಮಂಡ್ಯ, ಆಗಸ್ಟ್ 31: ಮಾಜಿ ಸಂಸದೆ, ನಟಿ ರಮ್ಯಾ ಸೂಕ್ಷ್ಮ, ಗಂಭೀರವಾದ ವಿಷಯ ಮಾತನಾಡಿ ಜೇನುಗೂಡಿಗೆ ಕೈ ಹಾಕಿದಂತೆ ಕಾಣಿಸ್ತಿದ್ದಾರೆ. ಇವೆಲ್ಲ ಆಕೆಯ ತಿಳಿವಳಿಕೆ, ಆಲೋಚನೆಗೆ ಮೀರಿದ ಸಂಗತಿಗಳು. ಕೆಲವರಂತೂ ಆಕೆಯ ಹೇಳಿಕೆಗಳನ್ನೇ ಮುಂದು ಮಾಡಿಕೊಂಡು ರಮ್ಮಿ ಆಡ್ತಿದ್ದಾರೆ ಎಂದಿದ್ದಾರೆ ಮೇಲುಕೋಟೆ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ.
ಆರ್ ಎಸ್ ಎಸ್ ಹಾಗೂ ಸಂಘಪರಿವಾರದ ಬಗ್ಗೆ ರಮ್ಯಾ ನೀಡಿದ ಹೇಳಿಕೆಗಳ ಬಗ್ಗೆ ಮಾಧ್ಯಮಗಳ ಜೊತೆಗೆ ಬುಧವಾರ ಮಾತನಾಡುತ್ತಾ, ಸ್ವಾತಂತ್ರ್ಯ ಹೋರಾಟದ ಬಗ್ಗೆ ರಮ್ಯಾಗಿರುವ ತಿಳಿವಳಿಕೆ ಕೊರತೆ ಇದರಿಂದಲೇ ಗೊತ್ತಾಗುತ್ತೆ. ದೊಡ್ಡ ಸಂಖ್ಯೆಯಲ್ಲಿ ಜನರು ಹೋರಾಟದಲ್ಲಿ ಪಾಲ್ಗೊಂಡಿದ್ದರು. ಆಗ ಯಾವುದೇ ಸಂಘ-ಸಂಘಟನೆ ಬ್ಯಾನರ್ ಇರಲಿಲ್ಲ ಎಂಬುದು ಕೂಡ ಆಕೆಗೆ ಗೊತ್ತಿಲ್ಲ ಎಂದಿದ್ದಾರೆ.['ರಮ್ಯಾ ಅವರ ಹಿಂದಿನ ಜನ್ಮದ ಬಗ್ಗೆ ಗೊತ್ತಿಲ್ಲ']
ಈ ರಮ್ಯಾ ಯಾರ್ರೀ? ರಾಜ್ಯ, ರಾಷ್ಟ್ರ ರಾಜಕೀಯದಲ್ಲಿ ಆಕೆಯ ಪ್ರಸ್ತುತತೆ ಏನ್ರೀ? ರಾಜ್ಯದ ಜನ ಸಾಮಾನ್ಯರು, ರೈತರ ಇಷ್ಟೊಂದು ಸಮಸ್ಯೆಗಳ ಮಧ್ಯೆ ಆಕೆ ಅಭಿಪ್ರಾಯಕ್ಕೆ ಯಾಕೆ ಅಷ್ಟೊಂದು ಪ್ರಾಮುಖ್ಯ? ಆಕೆಗೆ ಯಾವುದೇ ವಿಷಯದ ಬಗ್ಗೆ ತಿಳಿವಳಿಕೆಯೂ ಇಲ್ಲ. ಆದರೂ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ ಎಂದು ಪುಟ್ಟಣ್ಣಯ್ಯ ಟೀಕಿಸಿದ್ದಾರೆ.[ಸ್ವತಂತ್ರ ಸಂಗ್ರಾಮದಲ್ಲಿ ಬಿಜೆಪಿ, ಆರೆಸ್ಸೆಸ್ ಭಾಗವಹಿಸಿಲ್ಲ: ರಮ್ಯಾ]
ಆಕೆಯ ಮಾತುಗಳು ಹಾಗೂ ಅದರ ಸುತ್ತಲ ವಿವಾದಗಳ ಬಗ್ಗೆ ಮಾತನಾಡುವುದಕ್ಕಿಂತ, ರಮ್ಯಾಗೆ ನನ್ನದೊಂದು ಸಲಹೆ ಇದೆ: ಗೊತ್ತಿಲ್ಲದ ವಿಷಯ, ವಿವಾದಗಳ ಬಗ್ಗೆ ಮಾತನಾಡುವುದನ್ನು ನಿಲ್ಲಿಸಲಿ ಎಂದು ಅವರು ಹೇಳಿದ್ದಾರೆ.