ಮದ್ದೂರು: ಬಾರದ ನೀರಿಗಾಗಿ ಮರ ಏರಿ ಆತ್ಮಹತ್ಯೆಗೆ ಯತ್ನಸಿದ ರೈತ
ಮಂಡ್ಯ, ನವೆಂಬರ್. 17 : ಮದ್ದೂರು ತಾಲೂಕಿನ ವಿ.ನಾಲೆ ಕೊನೆ ಭಾಗಕ್ಕೆ ನೀರು ತಲುಪದೆ ಇರುವುದನ್ನು ಖಂಡಿಸಿ ಮತ್ತು ನೀರು ಬಿಡುವಂತೆ ಒತ್ತಾಯಿಸಿ ಕಾವೇರಿ ನೀರಾವರಿ ನಿಗಮದ ಎದುರು ಮೂರು ದಿನಗಳಿಂದ ರೈತರು ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ.
ಆದರೆ, ಯಾರೂ ಕೂಡ ಸ್ಪಂದಿಸದ್ದರಿಂದ ಬೇಸತ್ತು ರೈತನೊಬ್ಬ ಮರವೇರಿ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬುಧವಾರ ನಡೆದಿದೆ. ದೇಶಹಳ್ಳಿ ಗ್ರಾಮದ ಪ್ರಸಾದ್ ಎಂಬಾತನೇ ನೀರಾವರಿ ಕಚೇರಿ ಆವರಣದಲ್ಲಿದ್ದ ಮರವೊಂದನ್ನು ಏರಿ ಆತ್ಮಹತ್ಯೆಗೆ ಯತ್ನಿಸಿದ ರೈತ.
ಸ್ಥಳಕ್ಕೆ ಬಂದ ಪೊಲೀಸರು ಕೂಡಲೇ ಆತನನ್ನು ಮನವೊಲಿಸಿ ಕೆಳಕ್ಕೆ ಇಳಿಸಿ ಬಂಧಿಸಲು ಮುಂದಾದಾಗ ಸ್ಥಳದಲ್ಲಿದ್ದ ಪ್ರತಿಭಟನಾಕಾರರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಆತನ ಬಂಧನದ ಯತ್ನವನ್ನು ವಿಫಲಗೊಳಿಸಿದರು.
ಈ ಸಂದರ್ಭದಲ್ಲಿ ಮಹಿಳೆಯರು ಪೊಲೀಸರ ವಿರುದ್ಧ ಮಣ್ಣು ಎರಚಿ ಹಿಡಿ ಶಾಪವನ್ನೂ ಹಾಕಿದ ಘಟನೆಯೂ ನಡೆಯಿತು. ಸ್ಥಳಕ್ಕೆ ಆಗಮಿಸಿದ ಎಇಇ ತಮ್ಮಣ್ಣ ಹಾಗೂ ಶಿವಕುಮಾರ್ ನಾಯಕ್ ಅವರ ವಿರುದ್ಧ ಘೋಷಣೆ ಕೂಗಿದ ರೈತರು ಅವರೊಂದಿಗೆ ಕೆಲಕಾಲ ವಾಗ್ವಾದ ನಡೆಸಿದರು.
ಸಂಜೆ ವೇಳೆಗೆ ನೀರು ಬಾರದಿದ್ದರೆ ಎಲ್ಲಾ ಗ್ರಾಮಗಳಿಂದ ಜನ ಜಾನುವಾರುಗಳ ಸಮೇತ ರಸ್ತೆಗಿಳಿದು ಉಗ್ರ ಚಳವಳಿ ಮಾಡಬೇಕಾಗುತ್ತದೆ. ಅಲ್ಲದೆ, ತಾಲೂಕಿನ ಎಲ್ಲಾ ಶಾಲಾ-ಕಾಲೇಜುಗಳಿಗೆ ಹಾಗೂ ಕಚೇರಿಗಳಿಗೆ ಬೀಗ ಜಡಿಯಲಾಗುವುದು ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕಸ್ತೂರಿ ಕನಾಟಕ ಜನಪರ ವೇದಿಕೆ ರಾಜ್ಯಾಧ್ಯಕ್ಷ ರಮೇಶ್ ಗೌಡ, ರೈತ ನಾಯಕಿ ಸುನಂದಾ ಜಯರಾಂ ಹಾಗೂ ಮರಕಾಡದೊಡ್ಡಿ, ಹುಲಿಗೆರೆಪುರ, ನಗರಕೆರೆ, ಹಾಗೂ ಸುತ್ತಮುತ್ತಲಿನ ಗ್ರಾಮದ ರೈತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.