ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನಾಲೆಗಳಿಗೆ ನೀರು, ಮಂಡ್ಯದಲ್ಲಿ ಚುರುಕುಗೊಂಡ ಕೃಷಿ ಚಟುವಟಿಕೆ

By ಬಿಎಂ ಲವಕುಮಾರ್
|
Google Oneindia Kannada News

ಮೈಸೂರು, ಆಗಸ್ಟ್ 22: ಒಂದೆಡೆ ತಮಿಳುನಾಡಿಗೆ ಮತ್ತು ರೈತರ ಕೃಷಿ ಚಟುವಟಿಕೆಗಾಗಿ ನಾಲೆಗಳಿಗೆ ನೀರು ಹರಿಸಿದ ಪರಿಣಾಮ ಕೆಆರ್‍ಎಸ್ ಜಲಾಶಯದಲ್ಲಿ ನೀರಿನ ಮಟ್ಟ ಕುಸಿತ ಕಂಡಿದ್ದರೆ, ಮತ್ತೊಂದೆಡೆ ಮಂಡ್ಯ ವ್ಯಾಪ್ತಿಯಲ್ಲಿ ರೈತರು ಖುಷಿಯಿಂದ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿರುವ ದೃಶ್ಯ ಕಾಣುತ್ತಿದೆ.

ಕೊಡಗಿನಲ್ಲಿ ವಾಡಿಕೆಯ ಮಳೆಯಾಗಿದ್ದರೆ ಜಲಾಶಯ ಇಷ್ಟರಲ್ಲೇ ತುಂಬಿ ಹೆಚ್ಚುವರಿ ನೀರು ಹರಿದು ಹೋಗಬೇಕಿತ್ತು. ಆದರೆ 2013ರ ಬಳಿಕ ಅಂತಹ ಮಳೆ ಸುರಿದಿಲ್ಲ. ಪರಿಣಾಮ ಕಳೆದ ಎರಡು ವರ್ಷಗಳಿಂದ ಜಲಾಶಯ ಭರ್ತಿಯಾಗುತ್ತಾ ಎಂದು ಕಾಯುವುದೇ ಆಗಿದೆ. ಈಗಾಗಲೇ ಮುಂಗಾರು ಮಳೆಯ ಅವಧಿ ಮುಕ್ಕಾಲು ಭಾಗದಷ್ಟು ಮುಗಿದಿದೆ. ಹೀಗಿದ್ದರೂ ಜಲಾಶಯದಲ್ಲಿ ಶೇಖರಣೆಯಾದ ನೀರಿನ ಪ್ರಮಾಣ 90 ಅಡಿಯಷ್ಟಾಗಿದೆ.

ಹಾಗೆನೋಡಿದರೆ ಜಲಾಶಯದಲ್ಲಿ ಆ.10ಕ್ಕೆ 93.10 ಅಡಿಯಷ್ಟು ನೀರು ತಲುಪಿತ್ತು. ಆ ನಂತರ ನಾಲೆಗಳಿಗೆ ನೀರು ಹರಿಸಿದ ಪರಿಣಾಮ ಸುಮಾರು ಮೂರು ಅಡಿಯಷ್ಟು ನೀರಿನ ಪ್ರಮಾಣ ಕುಸಿದಿರುವುದು ಕಂಡು ಬಂದಿದೆ. ನಾಲೆಗೆ ನೀರು ಹರಿಸಿದ್ದರಿಂದ ಅಚ್ಚುಕಟ್ಟು ಪ್ರದೇಶದ ಬಹುತೇಕ ರೈತರು ವಿವಿಧ ಬೆಳೆ ಬೆಳೆಯುವತ್ತ ಚಿತ್ತ ಹರಿಸಿದ್ದಾರೆ. ಸರ್ಕಾರ ನೀರು ಹರಿಸುವ ಮುನ್ನ ಭತ್ತ ಮತ್ತು ಕಬ್ಬಿನಂತಹ ಹೆಚ್ಚು ನೀರು ಬಯಸುವ ಬೆಳೆಯನ್ನು ಬೆಳೆಯ ಬಾರದೆಂದು ಸೂಚನೆ ನೀಡಿದ್ದರೂ ಕೆಲವರು ಭತ್ತ ಬೆಳೆಯಲು ಮುಂದಾಗಿರುವುದು ಕಂಡು ಬಂದಿದೆ.

ಸರಕಾರದ ಸಲಹೆ ನಿರ್ಲಕ್ಷ್ಯ

ಸರಕಾರದ ಸಲಹೆ ನಿರ್ಲಕ್ಷ್ಯ

ಭತ್ತ ಮತ್ತು ಕಬ್ಬು ಬದಲಿಗೆ ಇನ್ನಿತರ ಅಲ್ಪಾವಧಿಯ ಬೆಳೆ ಬೆಳೆಯುವಂತೆ ರೈತರಿಗೆ ಸಲಹೆ ನೀಡಲಾಗುತ್ತಿದೆಯಾದರೂ ಕೆಲವು ರೈತರು ಭತ್ತ, ಕಬ್ಬು ಬೆಳೆಯಲು ಮುಂದಾಗಿದ್ದಾರೆ.

ಅಲ್ಪಾವಧಿ ಬೆಳೆ ಸೂಕ್ತ

ಅಲ್ಪಾವಧಿ ಬೆಳೆ ಸೂಕ್ತ

ಮತ್ತೆ ಕೆಲವರು ಸರಕಾರದ ಸಲಹೆ ಪಾಲಿಸಿದ್ದು ಅಲ್ಪಾವಧಿಯ ಬೆಳೆಯಾದ ಹೆಚ್ಚು ನೀರು ಬಯಸದ ರಾಗಿ, ಅವರೆ, ನವಣೆ, ಕೊರ್ಲೆ, ಹುರಳಿ ಬೆಳೆಗಳನ್ನು ಬೆಳೆಯುವತ್ತ ಚಿತ್ತ ಹರಿಸಿದ್ದಾರೆ. ಈ ವ್ಯಾಪ್ತಿಯ ರೈತರು ಬೆಳಗ್ಗಿನಿಂದ ಸಂಜೆವರೆಗೆ ತಮ್ಮ ಜಮೀನುಗಳಲ್ಲಿ ಕೃಷಿ ಚಟುವಟಿಕೆಗಳಲ್ಲಿ ನಿರತರಾಗಿರುವುದು ಇದೀಗ ಕಂಡು ಬಂದಿದೆ.

ಕೆ.ಆರ್.ಎಸ್ ಭರ್ತಿಯಾಗುವ ಲಕ್ಷಣವಿಲ್ಲ

ಕೆ.ಆರ್.ಎಸ್ ಭರ್ತಿಯಾಗುವ ಲಕ್ಷಣವಿಲ್ಲ

ಕಳೆದ ಎರಡು ವರ್ಷಗಳಿಂದ ಬರ ಕಾಣಿಸಿಕೊಂಡು ಯಾವುದೇ ಬೆಳೆ ಬೆಳೆಯಲಾಗದೆ ಆತ್ಮಹತ್ಯೆ ಹಾದಿ ಹಿಡಿದಿದ್ದ ರೈತರು ಈ ಬಾರಿಯಾದರೂ ಬೆಳೆ ಬೆಳೆದು ಬದುಕು ಕಾಣುವ ನಿರೀಕ್ಷೆಯಲ್ಲಿದ್ದರು. ಆದರೆ ಈ ಬಾರಿಯೂ ಕೆಆರ್‍ಎಸ್ ಜಲಾಶಯ ಭರ್ತಿಯಾಗುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಜತೆಗೆ ಬಹಳಷ್ಟು ಹೋರಾಟದ ಬಳಿಕ ಇದೀಗ ನೀರನ್ನು ನಾಲೆಗೆ ಬಿಟ್ಟಿರುವುದರಿಂದ ಬಹುತೇಕ ರೈತರು ಯಾವ ಬೆಳೆ ಬೆಳೆಯಬೇಕೆಂಬ ಗೊಂದಲದಲ್ಲಿರುವುದು ಎದ್ದು ಕಾಣುತ್ತಿದೆ.

ಸರಕಾರದಿಂದ ಜನಜಾಗೃತಿ

ಸರಕಾರದಿಂದ ಜನಜಾಗೃತಿ

ಕೃಷಿ, ನೀರಾವರಿ, ಕಂದಾಯ, ಗ್ರಾಮೀಣಾಭಿವೃದ್ಧಿ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಇದೀಗ ನೀರಾವರಿ ಬೆಳೆಗೆ ಪರ್ಯಾಯವಾಗಿ ಯಾವುದೆಲ್ಲ ಬೆಳೆ ಬೆಳೆಯಬಹುದು ಎಂಬುದರ ಬಗ್ಗೆ ರೈತರಿಗೆ ಕರಪತ್ರ ಹಂಚಿ, ಸಲಹೆ ನೀಡಿ, ಬ್ಯಾನರ್ ಅಳವಡಿಸಿ ಅರಿವು ಮೂಡಿಸುತ್ತಿದ್ದಾರೆ. ಆದರೂ ರೈತರು ಗೊಂದಲದಲ್ಲಿದ್ದಾರೆ.

ಸಾಂಪ್ರದಾಯಿಕ ಕೃಷಿ ಬಿಡುವುದೇ ಕಷ್ಟ

ಸಾಂಪ್ರದಾಯಿಕ ಕೃಷಿ ಬಿಡುವುದೇ ಕಷ್ಟ

ಇದುವರೆಗೆ ತಾವು ಬೆಳೆದುಕೊಂಡು ಬಂದಿದ್ದ ಭತ್ತ ಮತ್ತು ಕಬ್ಬು ಹೊರತಾಗಿ ಇತರೆ ಬೆಳೆ ಬೆಳೆಯುವುದು ಕಷ್ಟವಾಗುತ್ತಿದೆ. ಇದರಿಂದ ಹೆಚ್ಚಿನವರು ರಾಗಿಗೆ ಮೊರೆ ಹೋಗಿದ್ದಾರೆ. ಸದ್ಯ ನಾಲೆಗಳಿಗೆ ನೀರು ಹರಿಯುತ್ತಿದೆ. ಒಂದು ವೇಳೆ ನೀರು ನಿಲ್ಲಿಸಿದರೆ ಮತ್ತೆ ರೈತರಿಗೆ ಸಮಸ್ಯೆ ಎದುರಾಗಲಿದೆ. ಆದ್ದರಿಂದ ಹೆಚ್ಚು ನೀರು ಬಯಸದ ಅಲ್ಪಾವಧಿ ಬೆಳೆಗಳನ್ನು ರೈತರು ಬೆಳೆಯುವುದು ಅನಿವಾರ್ಯವಾಗಿದೆ.

English summary
The water level in the KRS reservoir has declined due to the water released to agriculture purpose. On the other hand, farmers are engaged in agriculture activity in the Mandya range.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X