ಒಂದೇ ವೇದಿಕೆಯಲ್ಲಿ ವಿವಿಧ ಪಕ್ಷಗಳ ಒಕ್ಕಲಿಗ ಮುಖಂಡರು
ಮಂಡ್ಯ, ಅಕ್ಟೋಬರ್, 26: ಮಳವಳ್ಳಿ ಪಟ್ಟಣದಲ್ಲಿ ಬುಧವಾರ ನಡೆದ ಒಕ್ಕಲಿಗರ ಸಂಘದ ಕಟ್ಟಡ ಉದ್ಘಾಟನೆ ಹಾಗೂ ಬೃಹತ್ ಸಮಾವೇಶವು ಒಕ್ಕಲಿಗರ ಶಕ್ತಿ ಪ್ರದರ್ಶನಕ್ಕೆ ಸಾಕ್ಷಿಯಾಯಿತು.
ಸಮಾವೇಶದಲ್ಲಿ ಒಕ್ಕಲಿಗರ ನಾಯಕರಾದ ಮಾಜಿ ಪ್ರಧಾನಿ, ಎಚ್.ಡಿ. ದೇವೇಗೌಡ, ಇಂಧನ ಸಚಿವ ಡಿ.ಕೆ. ಶಿವಕುಮಾರ್, ಮಾಜಿ ಉಪಮುಖ್ಯಮಂತ್ರಿ ಆರ್. ಅಶೋಕ್, ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸಮ್ಮುಖದಲ್ಲಿ ಕಾಣಿಸಿಕೊಳ್ಳುವ ಮೂಲಕ ಜನಾಂಗಕ್ಕೆ ನಾವೆಲ್ಲರೂ ಒಂದಾಗಿದ್ದೇವೆ ಎಂಬ ಸಂದೇಶ ರವಾನಿಸಿದ್ದಾರೆ.
ರಾಜಕಾರಣ ಮತ್ತು ವೈಯಕ್ತಿಕವಾಗಿಯೂ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರ ವಿರುದ್ಧ ಟೀಕಾ ಪ್ರಹಾರ ಮಾಡುವ ಸಚಿವ ಡಿ.ಕೆ. ಶಿವಕುಮಾರ್ ಒಕ್ಕಲಿಗರ ಸಮಾವೇಶದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದು ಮಾತ್ರ ವಿಶೇಷವಾಗಿತ್ತು.
ಸಮಾವೇಶಕ್ಕೆ ಚಾಲನೆ ನೀಡಿದ ಎಚ್.ಡಿ. ದೇವೇಗೌಡ ಅವರು ಮಾತನಾಡಿ, ಸಮಾಜದ ಐಕ್ಯತೆ ಹೇಗಿರಬೇಕೆಂಬುದಕ್ಕೆ ಈ ಸಮಾವೇಶ ಉತ್ತಮ ಮಾರ್ಗದರ್ಶನವಾಗಿದೆ ಎಂದು ತಿಳಿಸಿದರು.
ಒಕ್ಕಲಿಗ ಮುಖಂಡರ ಇಂತಹ ಒಗ್ಗಟ್ಟಿನ ಸಮಾವೇಶ ಸಮುದಾಯದ ಅಭ್ಯುಧಯಕ್ಕೆ ನಾಂದಿಯಾಗಿದ್ದು, ಆದಿಚುಂಚನಗಿರಿ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಮಾರ್ಗದರ್ಶನದಲ್ಲಿ ನಾವೆಲ್ಲರೂ ಒಂದಾಗಿ ನಡೆಯುವ ಮೂಲಕ ಉತ್ತಮ ಸಮಾಜ ನಿರ್ಮಾಣಕ್ಕೆ ಸಂಘಟಿತರಾಗೋಣ ಎಂದು ವೇದಿಕೆ ಮೇಲಿದ್ದ ನಾಯಕರು ಸಮುದಾಯಕ್ಕೆ ಕರೆ ನೀಡಿದರು.
ದೇಶದ ಆರ್ಥಿಕ, ರಾಜಕೀಯ ಕ್ಷೇತ್ರದಲ್ಲಿ ಒಕ್ಕಲಿಗರ ಪಾತ್ರ ಅಪಾರ: ಡಿಕೆ ಶಿವಕುಮಾರ್
ದೇಶದ ಆರ್ಥಿಕ, ರಾಜಕೀಯ, ಸಾಮಾಜಿಕ, ಧಾರ್ಮಿಕ ಹಾಗೂ ಆಡಳಿತ ವ್ಯವಸ್ಥೆಯಲ್ಲಿ ಒಕ್ಕಲಿಗ ಸಮುದಾಯದ ಪಾತ್ರ ಅಪಾರವಾದುದು ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟರು.
ನಾಯಕ ಬೆಳೆದರೆ ಸಮಾಜ: ಆರ್. ಅಶೋಕ
ನಾಯಕ ಬೆಳೆದರೆ ಮಾತ್ರ ಸಮಾಜದ ಅಭಿವೃದ್ಧಿ ಸಾಧ್ಯ. ಒಕ್ಕಲಿಗ ಸಮುದಾಯ ತಮ್ಮ ತಮ್ಮಲ್ಲಿನ ಭಿನ್ನಾಭಿಪ್ರಾಯಗಳನ್ನು ಬದಿಗಿಟ್ಟು ಒಗ್ಗಟ್ಟು ಪ್ರದರ್ಶಿಸಬೇಕೆಂದು ಮಾಜಿ ಉಪ ಮುಖ್ಯಮಂತ್ರಿ ಆರ್.ಅಶೋಕ್ ಕರೆ ನೀಡಿದರು.
ಸಮುದಾಯದ ಸೇವೆಗೆ ನಮ್ಮ ಮನೆ ತೆರೆದ ಬಾಗಿಲು:
ಒಕ್ಕಲಿಗ ಸಮುದಾಯದ ಸೇವೆಗೆ ನನ್ನ ಮತ್ತು ಸಚಿವ ಡಿ.ಕೆ.ಶಿವಕುಮಾರ್ ಮನೆ ಸದಾ ತೆರೆದಿರುತ್ತದೆ ಎಂದು ವಸತಿ ಸಚಿವ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಎಂ. ಕೃಷ್ಣಪ್ಪ ಭರವಸೆ ನೀಡಿದರು.
ಸಮುದಾಯದ ಸೇವೆಗೆ ನಾವು ಕಂಕಣಬದ್ಧರಾಗಿ ಕೆಲಸ ಮಾಡುತ್ತೇವೆ. ಸಮುದಾಯದ ಮುಖಂಡರು ನಮ್ಮ ಸೇವೆಯ ಸದುಪಯೋಗಪಡಿಸಿಕೊಂಡು ಸಮಾಜದ ಅಭಿವೃದ್ಧಿಗೆ ಮುಂದಾಗಿ ಎಂದು ಕರೆ ನೀಡಿದ ಅವರು, ನಮ್ಮ ಜೊತೆ ಇತರೆ ಸಮುದಾಯಕ್ಕೂ ಬೆಳಕು ಚೆಲ್ಲುವತ್ತ ಗಮನಹರಿಸುವಂತೆ ಸಲಹೆ ನೀಡಿದರು.
ಒಕ್ಕಲಿಗರ ಒಗ್ಗಟ್ಟಿನ ಬಲ ಶಕ್ತಿಯಾಗಲಿ: ಅಪ್ಪಾಜಿಗೌಡ
ಒಕ್ಕಲಿಗರ ಸಂಘದ ಒಗ್ಗಟ್ಟಿನ ಬಲ ಶಕ್ತಿಯಾಗಿ ಸಮುದಾಯದ ಮುಖಂಡನ ಬೆಳವಣಿಗೆಗೆ ಸಹಕಾರಿಯಾಗಲಿ ಎಂದು ರಾಜ್ಯ ಒಕ್ಕಲಿಗರ ಸಂಘದ ಆಧ್ಯಕ್ಷ ಅಪ್ಪಾಜಿಗೌಡ ತಿಳಿಸಿದರು.
ಮೀಸಲು ಕ್ಷೇತ್ರದಲ್ಲಿ ಸಮುದಾಯಕ್ಕೆ ಶಕ್ತಿ: ಮರಿತಿಬ್ಬೇಗೌಡ
ಮೀಸಲು ಕ್ಷೇತ್ರದಲ್ಲಿ ಸ್ವಾತಂತ್ರ್ಯವಿಲ್ಲವೆಂಬ 25 ವರ್ಷಗಳ ಸಮುದಾಯದ ಆರೋಪವನ್ನು ಈ ಸಮಾವೇಶ ಹೋಗಲಾಡಿಸಿ ಹೊಸ ಸಂದೇಶ ನೀಡಿದೆ ಎಂದು ವಿಧಾನ ಪರಿಷತ್ ಉಪಸಭಾಪತಿ ಮರಿತಿಬ್ಬೇಗೌಡ ಹೇಳಿದರು.
ಒಕ್ಕಲಿಗರ ಈ ಬೃಹತ್ ಸಮಾವೇಶ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿದೆ ಎಂದ ಅವರು, ಮುಂದಿನ ದಿನದಲ್ಲಿ ಸಮುದಾಯದ ಗೆಲುವಿಗೆ ಈ ಸಮಾವೇಶ ಪ್ರತ್ಯಕ್ಷ ಸಾಕ್ಷಿಯಾಗಿದೆ ಎಂದರು.
ರಾಜ್ಯ ರಾಜಕಾರಣದಲ್ಲಿ ಒಕ್ಕಲಿಗರು ಸಲ್ಲಿಸಿದ ಸೇವೆ ಅಪಾರ. ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ಮಾಜಿ ಮುಖ್ಯಮಂತ್ರಿಗಳಾದ ಎಸ್.ಎಂ.ಕೃಷ್ಣ, ಎಚ್.ಡಿ.ಕುಮಾರಸ್ವಾಮಿ, ಮಾಜಿ ಸಂಸದ ಜಿ.ಮಾದೇಗೌಡ ಸೇರಿದಂತೆ ಇನ್ನು ಹಲವಾರು ನಾಯಕರ ಸಾಧನೆ ಸಮುದಾಯಕ್ಕೆ ಕೀರ್ತಿ ತಂದಿದೆ ಎಂದು ಶ್ಲಾಘಿಸಿದರು.
ಸಮಾರಂಭದಲ್ಲಿ ಎಸ್ಸೆಸ್ಸೆಲ್ಸಿ ಮತ್ತು ಪಿಯುಸಿಯಲ್ಲಿ ಹೆಚ್ಚು ಅಂಕ ಪಡೆದ ಮಕ್ಕಳಿಗೆ ಉಪಸಭಾಪತಿ ಮರಿತಿಬ್ಬೇಗೌಡ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಿದರು.
ಆದಿಚುಂಚನಗಿರಿ
ಕ್ಷೇತ್ರದ
ಪೀಠಾಧ್ಯಕ್ಷ
ಶ್ರೀ
ನಿರ್ಮಲಾನಂದನಾಥ
ಸ್ವಾಮೀಜಿ
ಅವರು
ಆಶೀರ್ವಚನ
ನೀಡಿದರು.
ಸಮಾರಂಭದಲ್ಲಿ
ಸಂಘದ
ಅಭಿವೃದ್ಧಿಗೆ
ಶ್ರಮಿಸಿದ
ಮುಖಂಡರನ್ನು
ಸನ್ಮಾನಿಸಿ
ಗೌರವಿಸಲಾಯಿತು.
ಒಕ್ಕಲಿಗರ ಸಂಘದ ಜಿಲ್ಲಾ ಅಧ್ಯಕ್ಷ ನಾಗಣ್ಣಗೌಡ, ತಾಲೂಕು ಅಧ್ಯಕ್ಷ ಎ.ಬಿ.ಬಸವರಾಜು, ಬಿಜೆಪಿ ಮುಖಂಡ ಎಚ್.ಆರ್. ಅಶೋಕ್ಕುಮಾರ್, ಪ್ರಧಾನ ಕಾರ್ಯದರ್ಶಿ ಎಂ.ಎ.ಚಿಕ್ಕರಾಜು, ಎಂ.ಎನ್.ಮಹೇಶ್ ಕುಮಾರ್, ಟಿ.ನಂದಕುಮಾರ್ ಭಾಗವಹಿಸಿದ್ದರು.