ಮಂಡ್ಯದಲ್ಲಿ ಕಾವೇರಿಗಾಗಿ ಮಂಗಳಮುಖಿಯರ ಪ್ರತಿಭಟನೆ
ಮಂಡ್ಯ, ಸೆಪ್ಟೆಂಬರ್ 14: ಕಾವೇರಿ ನೀರು ಬಿಡುಗಡೆ ಮಾಡಬಾರದು ಎಂದು ಆಗ್ರಹಿಸಿ ಬುಧವಾರ ಮಂಗಳಮುಖಿಯರು ಪ್ರತಿಭಟನೆ ನಡೆಸಿದರು. ಸಂಜಯ್ ವೃತ್ತದಲ್ಲಿ ಧರಣಿ ಮುಂದುವರಿದಿದ್ದು, ತಮಿಳುನಾಡು ಮುಖ್ಯಮಂತ್ರಿ ಜಯಲಲಿತಾ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಪ್ರತಿಭಟನಾ ಮೆರವಣಿಗೆ ನಡೆಸಿ, ಕಾವೇರಿ ಹೋರಾಟ ವೇದಿಕೆಗೆ ಬೆಂಬಲ ಸೂಚಿಸಿದರು.
ಇನ್ನು ಶ್ರೀರಂಗಪಟ್ಟಣದಲ್ಲಿ ಹೋರಾಟಗಾರರು ಕಾವೇರಿ ನದಿಗೆ ರಕ್ತ ಚೆಲ್ಲಿ ಆಕ್ರೋಶ ವ್ಯಕ್ತಪಡಿಸಿದರು. ಸಿರೆಂಜ್ ಮೂಲಕ ರಕ್ತ ತೆಗೆದು, ನದಿಗೆ ಚೆಲ್ಲಲಾಯಿತು. ಪಕ್ಷಾತೀತವಾಗಿ ಹೋರಾಟ ನಡೆಯುತ್ತಿದ್ದು, "ನಮ್ಮ ರಕ್ತ ಕೊಟ್ಟರೂ ಸರಿ, ನೀರು ಕೊಡೋದಿಲ್ಲ" ಎಂದು ಪ್ರತಿಭಟನಾನಿರತರು ಘೋಷಣೆಗಳನ್ನು ಕೂಗಿದರು.[ತಮಿಳುನಾಡಿಗೆ ನೀರು, ನೆಲಕಚ್ಚುತ್ತಿದೆ ಕೆಆರ್ ಎಸ್ ನೀರಿನ ಮಟ್ಟ]
ಕಾವೇರಿ ತೀರ್ಪಿನ ಹಿನ್ನೆಲೆಯಲ್ಲಿ ಭುಗಿಲೆದ್ದ ಹಿಂಸಾಚಾರದ ವೇಳೆ ಬೆಂಗಳೂರಿನಲ್ಲಿ ಬಲಿಯಾದ ಇಬ್ಬರು ಯುವಕರ ಭಾವಚಿತ್ರಗಳಿಗೆ ಪೂಜೆ ಸಲ್ಲಿಸಿ, ಹಾಲು-ತುಪ್ಪ ಬಿಡಲಾಯಿತು. ನಂತರ ರಾಜ್ಯ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಲಾಯಿತು.[ಸುಡುಗಾಡು ಭಾಗ್ಯ' ಕರುಣಿಸಿದ ಸಿಎಂ: ಮಂಡ್ಯದಲ್ಲಿ ಆಕ್ರೋಶ]
ಇನ್ನು ಕೆ.ಆರ್.ಪೇಟೆ ತಾಲೂಕು ರೈತಸಂಘದಿಂದ ಜೈಲ್ ಭರೋ ಚಳವಳಿಗೆ ಚಾಲನೆ ನೀಡಲಾಯಿತು. ಕಾವೇರಿ ತೀರ್ಪು ನೀಡಿದ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳ ಅಣಕು ಶವಯಾತ್ರೆ ಮಾಡಲಾಯಿತು. ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ರೈತ ಸಂಘದ ಸದಸ್ಯರು ಅಣಕು ಶವಯಾತ್ರೆ ನಡೆಸಿದರು.