'ತಿಥಿ ಬಿಡಿ, ಸಸಿ ನೆಡಿ...' ಮಂಡ್ಯದಲ್ಲೊಂದು ವಿಭಿನ್ನ ಕಾರ್ಯಕ್ರಮ
ಮಂಡ್ಯ, ಜೂನ್ 29: ರೈತರು ಸೇರಿದಂತೆ ಬಡವರ್ಗದ ಜನ ಕೇವಲ ವಿವಾಹ ಕಾರ್ಯಗಳಿಗೆ ಮಾತ್ರವಲ್ಲದೆ, ತಿಥಿಕಾರ್ಯಕ್ಕೂ ದುಂದು ವೆಚ್ಚ ಮಾಡಿ ಸಾಲಗಾರರಾಗುತ್ತಿರುವ ಹಿನ್ನಲೆಯಲ್ಲಿ ಜನತೆಯಲ್ಲಿ ಅರಿವು ಮೂಡಿಸುವ 'ತಿಥಿ ಬಿಡಿ, ಸಸಿ ನೆಡಿ...' ಎಂಬ ಅಪರೂಪದ ಕಾರ್ಯಕ್ರಮವನ್ನು ಕೆ.ಎಂ.ದೊಡ್ಡಿ ಬಳಿಯ ಅಣ್ಣೂರು ಗ್ರಾಮದಲ್ಲಿ ನಡೆಸಲಾಗಿದೆ.
ಅಣ್ಣೂರು ಗ್ರಾಮದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದ ಅಶ್ವಿನಿ (22) ಎಂಬಾಕೆಯ ಉತ್ತರ ಕ್ರಿಯಾದಿ ಭೂಶಾಂತಿ ಕಾರ್ಯದ ವೇಳೆ 'ತಿಥಿ ಬಿಡಿ, ಸಸಿ ನೆಡಿ' ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತಲ್ಲದೆ, ಅಂತ್ಯಕ್ರಿಯೆ ನೆರವೇರಿಸಿದ ಸ್ಥಳದಲ್ಲಿ ಸಂಪಿಗೆ, ತೆಂಗಿನ ಸಸಿಗಳನ್ನು ನೆಟ್ಟು, ತಿಥಿ ಕಾರ್ಯಕ್ಕೆ ಆಗಮಿಸಿದ ಸಂಬಂಧಿಕರಿಗೆ ತೆಂಗಿನ ಸಸಿಗಳನ್ನು ನೀಡಲಾಯಿತು.
ಸಸಿ ನೆಟ್ಟು ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಮಾಜಿ ಶಾಸಕ ಡಾ.ಮಹೇಶ್ಚಂದ್ ಹುಟ್ಟು-ಸಾವು ಸಹಜ. ಆದರೆ ದುಂದುವೆಚ್ಚ ಮಾಡಿ ಕಾರ್ಯಗಳನ್ನು ಮಾಡುವುದು ಬದುಕಿದ್ದವರನ್ನು ಸಾಲದ ಸುಳಿಗೆ ಸಿಲುಕಿಸುವಂತಾಗಿದೆ.
ಕೊಡಗಿನಲ್ಲಿ ಧಾರಾಕಾರ ಮಳೆಯಾಗುತ್ತಿದ್ದರೂ ಕೆಆರ್ ಎಸ್ ಇನ್ನೂ ಖಾಲಿ
ಇತ್ತೀಚಿನ ದಿನಗಳಲ್ಲಿ ದುಃಖದಿಂದ ಮಾಡಬೇಕಾದ ತಿಥಿ ಕಾರ್ಯಕ್ಕೂ ಲಕ್ಷಾಂತರ ರೂ. ಖರ್ಚು ಮಾಡಿ ಆಡಂಬರ ತೋರಲಾಗುತ್ತಿದೆ. ಇದರಿಂದ ಸಾಲದ ಸುಳಿಗೆ ಸಿಲುಕಿ ಹಲವಾರು ಮಂದಿ ರೈತಾಪಿ ವರ್ಗದವರು ಆತ್ಮಹತ್ಯೆಗೂ ಶರಣಾಗಿದ್ದಾರೆ. ಹೀಗಾಗಿ ಮದುವೆ, ಮುಂಜಿ, ತಿಥಿ ಕಾರ್ಯಗಳನ್ನು ಸರಳವಾಗಿ ಮಾಡುವಂತೆ ಕಿವಿಮಾತು ಹೇಳಿದರು.
ಬಹಳಷ್ಟು ರೈತರು ತಮ್ಮ ಹೊಲ-ಗದ್ದೆಗಳಲ್ಲಿ ನೆಟ್ಟು ಬೆಳೆಸಿದ್ದ ಮರಗಳನ್ನು ಮಾರಿ ಕಾರ್ಯಗಳನ್ನು ಮಾಡಿರುವ ಉದಾಹರಣೆಗಳಿವೆ. ಇದರ ಬದಲಿಗೆ ಸತ್ತವರ ನೆನಪಿಗಾಗಿ ಗಿಡಗಳನ್ನು ಹೊಲದಲ್ಲಿ ನೆಟ್ಟು ಬೆಳೆಸಿ. ಸರಳವಾಗಿ ಕಾರ್ಯಗಳನ್ನು ಮಾಡಿ ಎಂದು ಹೇಳಿದರು.
ಮಾಜಿ ಶಾಸಕಿ ಕಲ್ಪನಾ ಸಿದ್ದರಾಜು, ರೈತ ಸಂಘದ ಮುಖಂಡರಾದ ಅಣ್ಣೂರು ಮಹೇಂದ್ರ, ಮಾದೇಗೌಡ, ಚಿಕ್ಕಮರೀಗೌಡ, ಸ್ವಾಮಿ, ಹುಚ್ಚೇಗೌಡ, ವೆಂಕಟೇಶ್, ಶಂಭು, ಮಾಲಗಾರನಹಳ್ಳಿ ಶಂಕರ್, ಸಿದ್ದೇಗೌಡ, ವಿನಯ್, ಚಿಕ್ಕಯ್ಯ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.