15 ಕಡೆ ಮನೆಗಳಿಗೆ ಕನ್ನ ಹಾಕಿದ್ದ ಹಾಸನದ ಜಗದೀಶ ಜೈಲು ಪಾಲು
ಮಂಡ್ಯ, ಫೆಬ್ರವರಿ 4: ಮನೆಯಲ್ಲಿ ಯಾರೂ ಇಲ್ಲದ ಸಂದರ್ಭ ನೋಡಿಕೊಂಡು, ಕನ್ನ ಹಾಕುತ್ತಿದ್ದ ಕಳ್ಳನೊಬ್ಬನನ್ನು ಕೆ.ಆರ್.ಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಹಾಸನ ಜಿಲ್ಲೆ ಚನ್ನರಾಯಪಟ್ಟಣ ತಾಲೂಕು ಚಿಕ್ಕಬಿಳತಿ ಗ್ರಾಮದ ಜಗ್ಗಣ್ಣ ಅಲಿಯಾಸ್ ಜಗದೀಶ್ ಬಂಧಿತ. ಈತ ಕೆ.ಆರ್.ಪೇಟೆ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಮನೆಗೆ ಕನ್ನ ಹಾಕಿ ಕಳವು ಮಾಡುತ್ತಿದ್ದ.
ಆತನ ಬಳಿಯಿಂದ 4.40 ಲಕ್ಷ ರುಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇತ್ತೀಚೆಗೆ ನಡೆದ ಹೇಮಗಿರಿ ಜಾತ್ರಾ ಮಹೋತ್ಸವದ ಬಂದೋಬಸ್ತ್ ಗೆ ತೆರಳಿದ್ದ ಸಿಪಿಐ ವೆಂಕಟೇಶಯ್ಯ, ಪಿಎಸ್ಐ ಸಿದ್ದರಾಜು ಹಾಗೂ ಸಿಬ್ಬಂದಿಗೆ ಆರೋಪಿ ಜಗ್ಗಣ್ಣ ಮಂದಗೆರೆ ಗ್ರಾಮದ ರೈಲು ನಿಲ್ದಾಣದ ಬಳಿ ಕಂಡು ಬಂದಿದ್ದ.[ಶೂಟೌಟ್ ಪ್ರಕರಣ: ಐಸಿಯುನಲ್ಲಿ ಶ್ರೀನಿವಾಸ್, 70 ರೌಡಿಗಳ ವಿಚಾರಣೆ]
ಆತನ ವರ್ತನೆ ಅನುಮಾನ ಹುಟ್ಟಿಸುವಂತಿತ್ತು. ಹೀಗಾಗಿ ಅವನನ್ನು ವಶಕ್ಕೆ ಪಡೆದು, ವಿಚಾರಣೆ ನಡೆಸಿದಾಗ ಹಲವು ಮನೆಗೆ ಕನ್ನ ಹಾಕಿರುವುದು ಬೆಳಕಿಗೆ ಬಂದಿದೆ. ತಿಂಗಳ ಹಿಂದೆ ಕಿಕ್ಕೇರಿಯ ಲಕ್ಷ್ಮಿಪುರದಲ್ಲಿ ಬೀಗ ಹಾಕಿದ್ದ ಎರಡು ಮನೆಯ ಹೆಂಚು ತೆಗೆದು ಒಳನುಗ್ಗಿ ಬೀರುವಿನಲ್ಲಿದ್ದ ಚಿನ್ನದ ಒಡವೆಗಳನ್ನು ಕಳವು ಮಾಡಿದ್ದನ್ನು ಒಪ್ಪಿಕೊಂಡಿದ್ದ. ಇದರ ಜತೆಗೆ ಸುಮಾರು 15 ಕಡೆ ಮನೆಗಳಿಗೆ ಕನ್ನ ಹಾಕಿರುವುದನ್ನು ಬಾಯಿಬಿಟ್ಟಿದ್ದಾನೆ.[ರು 5 ಸಾವಿರ ತೆಗೆಯಿತು, ವಿದೇಶಿ ವಿದ್ಯಾರ್ಥಿನಿಯ ಪ್ರಾಣ]
ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿ ಜಗ್ಗಣ್ಣನಿಂದ 3,90,000 ರುಪಾಯಿ ಮೌಲ್ಯದ 130 ಗ್ರಾಂ ಚಿನ್ನದ ಆಭರಣ ಹಾಗೂ 50,000 ರುಪಾಯಿ ಮೌಲ್ಯದ ಬೆಳ್ಳಿ ಒಡವೆಗಳು ಸೇರಿ ಒಟ್ಟು 4,40,000 ರುಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಳ್ಳಲಾಗಿದ್ದು, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.