ಮಂಡ್ಯದಲ್ಲಿ ವಿಷವುಣಿಸಿ, ಉಸಿರುಗಟ್ಟಿಸಿ ವಿದ್ಯಾರ್ಥಿಯ ಕೊಲೆ
ಹೇಮಗಿರಿ ರಸ್ತೆಯ ಸರ್ಕಾರಿ ನೌಕರರ ಬಡಾವಣೆ ವಾಸಿ ಲೋಕೇಶ್ ಮತ್ತು ಶಿಕ್ಷಕಿ ಸುಜಾತ ದಂಪತಿ ಪುತ್ರ ಶಶಾಂಕ್ ಹತ್ಯೆಗೀಡಾಗಿದ್ದಾನೆ. ಯಾರೋ ಕಿಡಿಗೇಡಿಗಳು ವಿಷ ಪ್ರಾಷನ ಮಾಡಿಸಿ ಉಸಿರುಗಟ್ಟಿಸಿ ಸಾಯಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಕೆ.ಆರ್.ಪೇಟೆ, ಮೇ 16: ವಿದ್ಯಾರ್ಥಿಯೊಬ್ಬನನ್ನು ದುಷ್ಕರ್ಮಿಗಳು ವಿಷ ಪ್ರಾಷನ ಮಾಡಿಸಿ ಉಸಿರುಗಟ್ಟಿಸಿ ಸಾಯಿಸಿದ ಘಟನೆ ಸಾಧುಗೋನಹಳ್ಳಿಯಲ್ಲಿ ನಡೆದಿದೆ. ಇಲ್ಲಿಯ ರಸ್ತೆಯ ಸರ್ಕಾರಿ ನೌಕರರ ಬಡಾವಣೆಯ ಸಮೀಪದ ಹೇಮಾವತಿ ನಾಲೆಯ ಜಮೀನಿನಲ್ಲಿ ಈ ಕೊಲೆ ನಡೆದಿದೆ.
ಹೇಮಗಿರಿ ರಸ್ತೆಯ ಸರ್ಕಾರಿ ನೌಕರರ ಬಡಾವಣೆ ವಾಸಿ ಲೋಕೇಶ್ ಮತ್ತು ಶಿಕ್ಷಕಿ ಸುಜಾತ ದಂಪತಿ ಪುತ್ರ ಶಶಾಂಕ್(14) ಹತ್ಯೆಗೀಡಾದ ದುರ್ದೈವಿ. ಈತ ತೇಗನಹಳ್ಳಿ ಬಳಿ ಇರುವ ಆಶೀರ್ವಾದ್ ಆಂಗ್ಲಮಾಧ್ಯಮ ಶಾಲೆಯ 9ನೇ ತರಗತಿಯ ವಿದ್ಯಾರ್ಥಿಯಾಗಿದ್ದಾನೆ.
ಮೂಲತಃ ಹಾಸನ ಜಿಲ್ಲೆಯ ಹೊಳೆ ನರಸೀಪುರ ತಾಲ್ಲೂಕಿನ ದೊಡ್ಡಹಳ್ಳಿ (ಬಾರೆಸಂತೆ) ಗ್ರಾಮದವರಾದ ಲೋಕೇಶ್ ಮತ್ತು ಸುಜಾತ ದಂಪತಿ ಕಳೆದ ಕೆಲವು ವರ್ಷಗಳಿಂದ ಇಲ್ಲಿ ವಾಸ ಮಾಡುತ್ತಿದ್ದರು. ಸುಜಾತ ಬೊಮ್ಮೇನಹಳ್ಳಿ ಸರ್ಕಾರಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ಸೋಮವಾರ ಮಧ್ಯಾಹ್ನ ತಂದೆ-ತಾಯಿಗಳು ಅಂಗಡಿ ಸಾಮಾನು ತರಲೆಂದು ಶಶಾಂಕ್ನನ್ನು ಮನೆಯಿಂದ ಹೊರಗಡೆ ಕಳುಹಿಸಲಾಗಿತ್ತು. ಮನೆಯಿಂದ ಹೊರಹೋದ ಶಶಾಂಕ್ ನಾಪತ್ತೆಯಾಗಿದ್ದನು.
ಮಂಗಳವಾರ ಬೆಳಿಗ್ಗೆ ತಮ್ಮ ಮನೆಯ ಅರ್ಧ ಕಿ.ಮೀ ದೂರದಲ್ಲಿರುವ ಹೇಮಾವತಿ ನಾಲೆಯ ಬಳಿ ನಿರ್ಜನ ಪ್ರದೇಶದ ಜಮೀನಿನ ಹೊಂಗೆ ಗಿಡದೊಳಗೆ ಶಶಾಂಕ್ ಶವವಾಗಿ ಪತ್ತೆಯಾಗಿದ್ದಾನೆ. ಪೊಲೀಸರು ಶ್ವಾನ ದಳ ಮತ್ತು ಬೆರಳಚ್ಚು ತಜ್ಞರ ಸಹಾಯದೊಂದಿಗೆ ಶವ ಪರಿಶೀಲನೆ ನಡೆಸಿದಾಗ ವಿದ್ಯಾರ್ಥಿಯ ಶವ ದೊರೆತ ಸ್ಥಳದಲ್ಲಿ ನಾಲ್ಕೈದು ಮಂದಿ ಓಡಾಡಿರುವ ಹೆಜ್ಜೆ ಗುರುತುಗಳು ಪತ್ತೆಯಾಗಿದೆ.
ವಿಷ ಸೇವಿಸಿದ ಸ್ಥಿತಿಯಲ್ಲಿ ಶಶಾಂಕನ ಶವ ಪತ್ತೆಯಾಗಿದೆ. ಮೈಮೇಲೆ ಯಾವುದೇ ಗಾಯದ ಗುರುತುಗಳು ಕಂಡು ಬಂದಿಲ್ಲ. ಇದರಿಂದ ಯಾರೋ ಕಿಡಿಗೇಡಿಗಳು ವಿಷ ಪ್ರಾಷನ ಮಾಡಿಸಿ ಉಸಿರುಗಟ್ಟಿಸಿ ಸಾಯಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಪೊಲೀಸರು ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಮಾಹಿತಿಯನ್ನು ಆದರಿಸಿ ಹಾಗೂ ವೈದ್ಯಕೀಯ ಪರೀಕ್ಷೆಯನ್ನು ಆದರಿಸಿ ಕೊಲೆ ಆರೋಪಿಗಳ ಸುಳಿವಿಗಾಗಿ ತಂಡವೊಂದನ್ನು ರಚಿಸಿ ತನಿಖೆ ತೀವ್ರಗೊಳಿಸಿದ್ದಾರೆ.
ವಿಷಯ ತಿಳಿದ ತಕ್ಷಣ ಸ್ಥಳಕ್ಕೆ ಪೊಲೀಸ್ ವರಿಷ್ಠಾಧಿಕಾರಿ ಸುಧೀಂದ್ರಕುಮಾರ್ ರೆಡ್ಡಿ, ಅಡಿಷನಲ್ ಎಸ್ಪಿ ಡಾ.ಸವಿತಾ, ಡಿವೈಎಸ್ಪಿ ಜನಾರ್ಧನ್, ಶ್ವಾನದಳ ಮತ್ತು ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.